ವಿಜಯನಗರ ಜಿಲ್ಲೆ ರಚನೆ; ನ.26ರಂದು ಬಳ್ಳಾರಿ ಬಂದ್ಗೆ ಕರೆ
ಬಳ್ಳಾರಿ, ನವೆಂಬರ್ 19: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ನೀಡಿದೆ. ಇದಕ್ಕೆ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸಿ ಬಂದ್ ಗೆ ಕರೆ ನೀಡಿದೆ.
ವಿಜಯನಗರ ಪ್ರತೇಕ ಜಿಲ್ಲೆ ರಚನೆ ವಿರೋಧಿಸಿ ನವೆಂಬರ್ 26ರಂದು ಬಳ್ಳಾರಿ ಬಂದ್ ಮಾಡಲು ಸಮಿತಿ ನಿರ್ಧರಿಸಿದೆ. ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಸಮಿತಿಯು ಗುರುವಾರ ಸಭೆಯನ್ನು ನಡೆಸಿದ್ದು, ನವೆಂಬರ್ 26ರಂದು ಬಂದ್ ಗೆ ಕೈ ಜೋಡಿಸಲು ಕರೆ ನೀಡಿದೆ.
ಬಳ್ಳಾರಿ ವಿಭಜನೆ; ವಿಜಯನಗರ ಜಿಲ್ಲಾ ರಚನೆ ಹೋರಾಟದ ಚಿತ್ರಣ
ಒಬ್ಬರ ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ಒಡೆಯಬೇಡಿ. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ರಚನೆಗೆ ಆನಂದ ಸಿಂಗ್ ಮುಂದಾಗಿದ್ದಾರೆ. ಹೊಸಪೇಟೆಯಿಂದ ಹಂಪಿಯವರೆಗಿನ ತಮ್ಮ ಭೂಮಿಗೆ ಉತ್ತಮ ಬೆಲೆ ಬರಲಿ ಅನ್ನೋ ಕಾರಣಕ್ಕೆ ಜಿಲ್ಲೆ ರಚನೆಗೆ ಆನಂದ ಸಿಂಗ್ ಮುಂದಾಗಿದ್ದಾರೆ ಎಂದು ಹೋರಾಟ ಸಮಿತಿಯ ಮುಖಂಡ ಕುಡಿತಿನಿ ಶ್ರೀನಿವಾಸ ಆರೋಪಿಸಿದರು.
ಜಿಲ್ಲೆ ಮಾಡುವುದಿದ್ದರೆ ಮೊದಲು ಬೆಳಗಾವಿ, ತುಮಕೂರು ಜಿಲ್ಲೆಗಳನ್ನು ವಿಭಜಿಸಿ. ಶಾಸಕ ಸೋಮಶೇಖರರೆಡ್ಡಿ ಅವರು ಪ್ರತ್ಯೇಕ ಜಿಲ್ಲಾ ರಚನೆಗೆ ಬೆಂಬಲ ಕೊಡುವುದಿಲ್ಲ ಎಂದಿದ್ದಾರೆ. ರಾಮುಲು ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಸ್ವಾರ್ಥಕ್ಕಾಗಿ ಜಿಲ್ಲೆಯನ್ನು ಒಡೆಯಬೇಡಿ ಎಂದರು. ಸೋಮವಾರ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.