ಬಳ್ಳಾರಿ ಉಪ ಚುನಾವಣೆ : 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್!
Recommended Video

ಬಳ್ಳಾರಿ, ಅಕ್ಟೋಬರ್ 16 : ಮೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಳ ಪೈಕಿ ಭಾರಿ ಕುತೂಹಲ ಕೆರಳಿಸಿರುವುದು ಬಳ್ಳಾರಿ ಕ್ಷೇತ್ರದ ಚುನಾವಣೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಬಿ.ಶ್ರೀರಾಮುಲು ಅವರ ಪ್ರತಿಷ್ಠೆ ಈ ಚುನಾವಣೆಯಲ್ಲಿ ಅಡಗಿದೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಲೋಕಸಭೆ ಉಪ ಚುನಾವಣೆಯ ಉಸ್ತುವಾರಿ ಡಿ.ಕೆ.ಶಿವಕುಮಾರ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು, ಅಂತಿಮವಾಗಿ ವಿ.ಎಸ್.ಉಗ್ರಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.
ನಾಮಪತ್ರ ಸಲ್ಲಿಕೆಗೆ ಕೊನೆಯದ ದಿನವಾದ ಮಂಗಳವಾರ ವಿ.ಎಸ್.ಉಗ್ರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಜೆ.ಶಾಂತ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೂ ಕಾಂಗ್ರೆಸ್ ಗೆಲುವಿಗಾಗಿ ಸಾಕಷ್ಟು ಶ್ರಮ ಪಡಬೇಕಿದೆ.
ಕಾಂಗ್ರೆಸ್ ಬಳ್ಳಾರಿ ಉಪ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ. 52 ಜನರ ವಿಶೇಷ ತಂಡವನ್ನು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆ ಮಾಡಲಾಗಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ....

ಶ್ರೀರಾಮುಲು/ಡಿಕೆ ಶಿವಕುಮಾರ್ ಪ್ರತಿಷ್ಠೆ
ಬಳ್ಳಾರಿ ಉಪ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಚುನಾವಣೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬುದು ಕಾಂಗ್ರೆಸ್ ಹಠ. ಆದ್ದರಿಂದ, 52 ಜನರ ವಿಶೇಷ ತಂಡವನ್ನು ರಚನೆ ಮಾಡಿದೆ. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಬಳ್ಳಾರಿಯ ಮಾಜಿ ಸಂಸದ ಬಿ.ಶ್ರೀರಾಮುಲು ಅವರ ಪ್ರತಿಷ್ಠೆ ಅಡಗಿದೆ.

ಶಾಸಕರು, ಸಂಸದರು ತಂಡದಲ್ಲಿ
ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತಂಡದಲ್ಲಿ ಸಚಿವರು, ಮಾಜಿ ಸಚಿವರು, ಹಾಲಿ ಶಾಸಕರು ಸೇರಿದಂತೆ ನಾಯಕರ ದಂಡೇ ಬಳ್ಳಾರಿ ಉಪ ಚುನಾವಣೆಯಲ್ಲಿ ವಿ.ಎಸ್.ಉಗ್ರಪ್ಪ ಪರವಾಗಿ ಪ್ರಚಾರ ನಡೆಸಲಿದೆ. ಆದರೆ, ಈ ಸಮಿತಿಯಲ್ಲಿ ಮಾಜಿ ಶಾಸಕರಾದ ಎಂ.ಪಿ.ರವೀಂದ್ರ ಮತ್ತು ಅನಿಲ್ ಲಾಡ್ ಇಲ್ಲ.

ಯಾರು-ಯಾರು ಇದ್ದಾರೆ?
ಸಮಿತಿಯಲ್ಲಿರುವ ನಾಯಕರಿಗೆ ವಿವಿಧ ವಿಧಾಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಲಾಗಿದೆ. ಕೃಷ್ಣ ಬೈರೇಗೌಡ ಅವರು ಬಳ್ಳಾರಿ ಗ್ರಾಮೀಣ, ಎನ್.ಎಚ್.ಶಿವಶಂಕರ ರೆಡ್ಡಿ ಅವರು ಹಗರಿಬೊಮ್ಮನಹಳ್ಳಿ, ರಮೇಶ್ ಜಾರಕಿಹೊಳಿ ಅವರು ಕೂಡ್ಲಗಿ, ಪ್ರಿಯಾಂಕ್ ಖರ್ಗೆ - ಸಂಡೂರು, ಯು.ಟಿ.ಖಾದರ್ ಬಳ್ಳಾರಿ ನಗರ, ರಾಜಶೇಖರ್ ಬಿ.ಪಾಟೀಲ್ - ಹೂವಿನಹಡಗಲಿ, ಡಾ.ಶರಣಪ್ರಕಾಶ್ ಪಾಟೀಲ್ -ವಿಜಯನಗರ, ಚಾಮರಾಜನಗರ ಸಂಸದ ಧ್ರುವ ನಾರಾಯಣ ಅವರು ಕಂಪ್ಲಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದಾರೆ.

ಜೆ.ಶಾಂತ ನಾಮಪತ್ರ
ಬಿ.ಶ್ರೀರಾಮುಲು ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ನಂತರ ಅವರು ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದ್ದರಿಂದ ಉಪ ಚುನಾವಣೆ ಎದುರಾಗಿದ್ದು, ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ ಅವರು ಅಭ್ಯರ್ಥಿಯಾಗಿದ್ದಾರೆ. ಮಂಗಳವಾರ ಅವರು ನಾಮಪತ್ರ ಸಲ್ಲಿಸಿದರು.

ಅಭ್ಯರ್ಥಿ ಆಯ್ಕೆ ಗೊಂದಲ
ಬಳ್ಳಾರಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಪ್ರಬಲ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ವಿ.ಎಸ್.ಉಗ್ರಪ್ಪ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದ್ದು, ಇಂದು ಅವರು ನಾಮಪತ್ರ ಸಲ್ಲಿಸಿದರು.












Click it and Unblock the Notifications