ಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯ!
Recommended Video

ಬಳ್ಳಾರಿ, ಅಕ್ಟೋಬರ್ 22 : ಬಳ್ಳಾರಿ ಲೋಕಸಭಾ ಉಪ ಚುನಾವಣೆ ಕಣ ರಂಗೇರಿದೆ. ಪ್ರಚಾರದ ಭರಾಟೆ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತ ವಿ.ಎಸ್.ಉಗ್ರಪ್ಪ ಪರವಾಗಿ ಸೋಮವಾರ ಮತಯಾಚನೆ ಮಾಡಿದರು.
ಸೋಮವಾರ ಬಳ್ಳಾರಿಯ ಹಂಪಸಾಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಮತಯಾಚನೆ ಮಾಡಿದರು. ಬಳ್ಳಾರಿಯ ನೆಲದಲ್ಲಿಯೇ ಮಾಜಿ ಸಂಸದ ಬಿ.ಶ್ರೀರಾಮುಲು ಅವರಿಗೆ ಪ್ರಶ್ನೆಗಳನ್ನು ಮುಂದಿಟ್ಟರು.
'ವಿ.ಎಸ್.ಉಗ್ರಪ್ಪ ಅವರು ಹೊರಗಿನವರು ಎಂದು ನೀವು ಹೇಳುವುದಾದದರೆ, ಶ್ರೀರಾಮುಲು ಬಾದಾಮಿಯಲ್ಲಿ ಜನಿಸಿದವರೇ?, ವಿಧಾನಸಭೆ ಚುನಾವಣೆಯಲ್ಲಿ ಅವರು ಅಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ವಿ.ಎಸ್.ಉಗ್ರಪ್ಪ, ಬಿಜೆಪಿಯಿಂದ ಜೆ.ಶಾಂತ ಕಣದಲ್ಲಿದ್ದಾರೆ. ಈ ಉಪ ಚುನಾವಣೆ ಬಿ.ಶ್ರೀರಾಮುಲು ಮತ್ತು ಸಚಿವ ಡಿ.ಕೆ.ಶಿವಕುಮಾರ್ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಸಂಸತ್ಗೆ ಏಕೆ ಕಳಿಸಬೇಕು?
ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, 'ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶ್ರೀರಾಮುಲು ಅವರು ಒಂದು ದಿನವೂ ಮಾತನಾಡಿಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶಾಂತ ಅವರು ಹಿಂದೆಯೂ ಲೋಕಸಭೆಯಲ್ಲಿ ಮಾತನಾಡಿಲ್ಲ. ಅವರನ್ನು ಏಕೆ ಅಲಂಕಾರಕ್ಕಾಗಿ ಅಲ್ಲಿಗೆ ಆರಿಸಿ ಕಳಿಸಬೇಕೆ?' ಎಂದು ಪ್ರಶ್ನಿಸಿದರು.

ಶ್ರೀರಾಮುಲು ಅವರು ಬಾದಾಮಿಯಲ್ಲಿ ಹುಟ್ಟಿದವರೇ?
ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು ಸ್ಥಳೀಯರಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, 'ಉಗ್ರಪ್ಪ ಅವರು ಹೊರಗಿನವರು ಎಂದು ಹೇಳುವುದಾದದರೆ ಶ್ರೀರಾಮುಲು ಅವರು ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ಅವರು ಬಾದಾಮಿಯಲ್ಲಿ ಹುಟ್ಟಿದವರೇ?' ಎಂದು ಪ್ರಶ್ನಿಸಿದರು.

ಬಳ್ಳಾರಿ ಸದ್ದು ಮಾಡುತ್ತದೆ
ಶ್ರೀರಾಮುಲು ಅವರ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, 'ಶ್ರೀರಾಮುಲು ಅವರು ಕಣ್ಣು ಬಿಡುವ ಮೊದಲೇ ಉಗ್ರಪ್ಪ ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದರು. ಉಗ್ರಪ್ಪ ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ. ಶಾಂತ ಅವರು ಹೋದರೆ ಆ ಕೆಲಸ ಆಗುವುದಿಲ್ಲ. ಯಾರನ್ನು ಆರಿಸಿ ಕಳಿಸಬೇಕು? ನೀವೇ ಹೇಳಿ' ಎಂದು ಸಿದ್ದರಾಮಯ್ಯ ಜನರನ್ನು ಪ್ರಶ್ನೆ ಮಾಡಿದರು.

ಹಣ, ಅಹಂಕಾರದ ರಾಜಕೀಯ
'ಶ್ರೀರಾಮುಲು ಅವರಿಗೆ ಹೋಲಿಕೆ ಮಾಡಿದರೆ ವಿ.ಎಸ್.ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಬಗ್ಗೆ ಶ್ರೀರಾಮುಲು ಅವರಿಗೆ ಏನು ತಿಳಿದಿದೆ. ಹಣ, ಅಹಂಕಾರದಿಂದ ಅವರು ರಾಜಕೀಯ ನಡೆಸುವವರು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಲೋಕಸಭೆಗೆ ಏಕೆ ಹೋಗಬೇಕು?
'ರೈತರ ಸಾಲ ಮನ್ನಾ ಬಗ್ಗೆ ಶ್ರೀರಾಮುಲು ಅವರು ಒಂದು ದಿನ ಲೋಕಸಭೆಯಲ್ಲಿ ಮಾತನಾಡಿಲ್ಲ. ಕನ್ನಡವೇ ಸರಿಯಾಗಿ ಮಾತನಾಡಲು ಬಾರದವರು ಏನು ಮಾತನಾಡುವರು?. ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು. ಬಳ್ಳಾರಿಗೆ ಶ್ರೀರಾಮುಲು ಅವರ ಕೊಡುಗೆ ಏನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
|
ಶ್ರೀರಾಮುಲು ವಿರುದ್ಧ ವಾಗ್ದಾಳಿ
371 ಜೆ ಎಂದರೆ ಏನು ಅಂತ ಶ್ರೀರಾಮುಲು ಅವರಿಗೆ ತಿಳಿದಿಲ್ಲ












Click it and Unblock the Notifications