ಬಳ್ಳಾರಿ ಅಭ್ಯರ್ಥಿ ಆಯ್ಕೆ: ಶ್ರೀರಾಮುಲು-ಬಿಎಸ್ವೈ ಮಧ್ಯೆ ಮುನಿಸು
ಬಳ್ಳಾರಿ, ಮಾರ್ಚ್ 14: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೆರಡು ದಿನಗಳಲ್ಲಿ ಪ್ರಕಟವಾಗುತ್ತದೆ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯ ಹೆಸರಿರುವುದಿಲ್ಲ ಎಂಬುದನ್ನು ಸಹ ಯಡಿಯೂರಪ್ಪ ಅವರು ಸೂಚ್ಯವಾಗಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಅಭ್ಯರ್ಥಿ ಇನ್ನೂ ಅಂತಿಮವಾಗದೇ ಇರುವುದೇ ಇದಕ್ಕೆ ಕಾರಣ. ಕೆಲವು ವರ್ಷಗಳ ಹಿಂದೆಯಷ್ಟೆ ಬಿಜೆಪಿಯ ಭದ್ರ ಕೋಟೆ ಎನಿಸಿಕೊಂಡಿದ್ದ ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಸಿಗುತ್ತಿಲ್ಲವಂತೆ! ಇದು ನಿಜವಾದರೂ ಇದರ ಹಿಂದಿನ ಒಳಕತೆ ಬೇರೆಯೇ ಇದೆ.
ಬಳ್ಳಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಉಗ್ರಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದ ಶ್ರೀರಾಮುಲು ಅವರ ಸಹೋದರಿ ಶಾಂತಾ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ರಾಮುಲು ಅವರು ಪಟ್ಟು ಹಿಡಿದಿದ್ದಾರೆ. ಆದರೆ ಬಿಜೆಪಿಯ ಕೆಲ ಹಿರಿಯ ನಾಯಕರಿಗೆ ಅಸಮಾಧಾನ ಇರುವ ಕಾರಣ ಶಾಂತಾ ಅವರ ಬದಲಿಗೆ ಬೇರೆ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ.
ಆದರೆ ಇದು ಶ್ರೀರಾಮುಲು ಅವರಿಗೆ ಬೇಸರ ತಂದಿದ್ದು, ತಮ್ಮ ಗುರು ಎಂದು ಕರೆದುಕೊಂಡಿದ್ದ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಮುಖಂಡರ ಜೊತೆ ಅಸಮಾಧಾನಗೊಂಡಿದ್ದಾರೆ. ತಮ್ಮ ಹಿಡಿತದಲ್ಲಿದ್ದ ಬಳ್ಳಾರಿ ಕೈಜಾರಿ ಹೋಗುತ್ತಿರುವುದು ಸಹಜವಾಗಿಯೇ ಅವರಿಗೆ ಆಕ್ರೋಶ ಉಂಟು ಮಾಡಿದೆ.

ರೆಡ್ಡಿ ಗುಂಪಿನ ಹಿಡಿತದಿಂದ ಬಳ್ಳಾರಿಯ ತಪ್ಪಿಸುವ ಯತ್ನ
ರೆಡ್ಡಿಗಳ ಹಿಡಿತದಿಂದ ಬಳ್ಳಾರಿ ಬಿಜೆಪಿಯನ್ನು ತಪ್ಪಿಸುವ ಸಲುವಾಗಿಯೇ ಶಾಂತಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತಿಲ್ಲ. ರೆಡ್ಡಿ ಸಹೋದರರ ಹೆಸರಿಗೆ ಕಳಂಕ ಇರುವ ಕಾರಣ ಅದು ಪಕ್ಷದ ಮೇಲೆ ಪ್ರಭಾವ ಬೀರುವ ಕಾರಣ, ಹೊಸ ಮತ್ತು ಪೂರ್ಣ ಸ್ವಚ್ಛ ವ್ಯಕ್ತಿತ್ವದ ವ್ಯಕ್ತಿಯನ್ನು ಬಳ್ಳಾರಿಯಿಂದ ಕಣಕ್ಕಿಳಿಸುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶೀ ಸಂತೋಶ್ ಜೀ ಬಿಜೆಪಿ ಹೈಕಮಾಂಡ್ಗೆ ರೆಕೆಮೆಂಡ್ ಮಾಡಿದ್ದಾರೆ.

ವೈದ್ಯ ಸುಂದರ್ ಅವರ ಹೆಸರು ಚಾಲ್ತಿಯಲ್ಲಿ
ಶಾಂತಾ ಅವರ ಬದಲಿಗೆ ವೈದ್ಯ ಸುಂದರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕೆಲವರು ಬಿಜೆಪಿಗೆ ಸಲಹೆ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ಆಗಿತ್ತು. ಆದರೆ ಅದು ಆಗ ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರನ್ನು ಪರಿಗಣಿಸುವಂತೆ ಸಂತೋಶ್ ಜೀ ಸಲಹೆ ನೀಡಿದ್ದಾರೆ. ಸುಂದರ್ ಅವರು ಸುಷ್ಮಾ ಸ್ವರಾಜ್ ಅವರಿಗೆ ಆಪ್ತರೂ ಆಗಿದ್ದಾರೆ.

ವೈದ್ಯ ಟಿ.ಆರ್.ಶ್ರೀನಿವಾಸ್ ಸಹ ಆಕಾಂಕ್ಷಿ
ಬಳ್ಳಾರಿಯ ಮತ್ತೊಬ್ಬ ವೈದ್ಯ ಟಿ.ಆರ್.ಶ್ರೀನಿವಾಸ್ ಅವರು ಸಹ ಆಕಾಂಕ್ಷಿಯಾಗಿದ್ದು, ಅವರು ಕಳೆದ ಉಪಚುನಾವಣೆಯಲ್ಲಿಯೇ ನಾಮಪತ್ರ ಸಲ್ಲಿಸಿದ್ದರು. ಆದರೆ ಈಗ ಅವರು ಮತ್ತೆ ಆಕಾಂಕ್ಷಿಯಾಗಿದ್ದು, ಈ ಬಾರಿ ಶುದ್ಧಹಸ್ತರಿಗೆ ಟಿಕೆಟ್ ನೀಡಲು ಚಿಂತಿಸುತ್ತಿರುವ ಕಾರಣ ಶ್ರೀನಿವಾಸ್ ಅವರ ಹೆಸರು ಸಹ ಗಣನೆಯಲ್ಲಿದೆ.

ರಾಮುಲು ತೀವ್ರ ಅಸಮಾಧಾನ
ಸಹೋದರಿ ಶಾಂತಾ ಅವರಿಗೆ ಟಿಕೆಟ್ ಸಿಗದೇ ಇದ್ದದ್ದಕ್ಕೆ ರಾಮುಲು ಅವರು ಅಸಮಾಧಾನಗೊಂಡಿದ್ದು, ತಾವು ಸೂಚಿಸಿದ ಅಭ್ಯರ್ಥಿಯ ಹೊರತಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಚುನಾವಣೆ ಸಮಯದಲ್ಲಿ ಅಸಹಕಾರ ತೋರುವುದಾಗಿ ರಾಮುಲು ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.

ಇಕ್ಕಟ್ಟಿನಲ್ಲಿ ಯಡಿಯೂರಪ್ಪ
ರಾಮುಲು ಅವರ ಬೆದರಿಕೆ ಯಡಿಯೂರಪ್ಪ ಅವರಿಗೆ ನುಂಗಲಾರದ ತುಪ್ಪವಾಗಿದೆ. ಯಡಿಯೂರಪ್ಪ ಅವರಿಗೆ ಶಾಂತಾ ಅವರಿಗೆ ಅಥವಾ ರಾಮುಲು ಸೂಚಿತ ಅಭ್ಯರ್ಥಿಗೆ ಟಿಕೆಟ್ ನೀಡುವ ಆಸೆಯಿದೆಯಾದರೂ ಹೈಕಮಾಂಡ್ ಹಾಗೂ ಪಕ್ಷದ ಇತರ ಮುಖಂಡರ ಮಾತಿಗೆ ಕಟ್ಟುಬಿದ್ದು ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನಿಧಾನ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications