ಯುದ್ಧದಲ್ಲಿ ಉಪಚರಿಸಿದ್ದ ನರ್ಸ್ ಗಾಗಿ 20 ವರ್ಷ ಕಾದ ಯೋಧ

ಬಾಗಲಕೋಟೆ, ಜುಲೈ 27: ಕಾರ್ಗಿಲ್ ಅಂದ ತಕ್ಷಣ ನೆನಪಾಗುವುದು ನಮ್ಮ ವೀರಯೋಧರ ಹೋರಾಟ, ದೇಶಾಭಿಮಾನ. ಇದೇ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ತನ್ನ ಎರಡು ಕೈ, ಒಂದು ಕಾಲು ಕಳೆದುಕೊಂಡವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹುಲಸಗೇರಿ ಗ್ರಾಮದ ವೀರಯೋಧ ರಂಗಪ್ಪ ಆಲೂರ. ಆ ಯುದ್ಧದ ನೆನಪುಗಳೊಂದಿಗೆ ಇಂದಿಗೂ ಯುವಜನತೆಯಲ್ಲಿ ದೇಶಾಭಿಮಾನ ಬಿತ್ತುತ್ತಿರುವ ಇವರಿಗೆ, ಇರುವುದು ಒಂದೇ ಆಸೆ. ತಮ್ಮನ್ನು ಯುದ್ಧದಲ್ಲಿ ಗಂಭೀರ ಗಾಯಗೊಂಡಿದ್ದ ಸಂದರ್ಭ ಉಪಚರಿಸಿದ್ದ ನರ್ಸ್ ಅನ್ನು ನೋಡಬೇಕೆನ್ನುವುದು.

ರಂಗಪ್ಪ ಆಲೂರು 1993ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡಿದ್ದರು. ನೇಮಕಗೊಂಡ ಆರನೇ ವರ್ಷದಲ್ಲಿ ಶುರುವಾಯಿತು ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ 21 ದಿನಗಳ ಕಾಲ ಭಾಗಿಯಾಗಿದ್ದ ರಂಗಪ್ಪ ಅವರು 21ನೇ ದಿನ ಶತ್ರುಗಳ ಮಿಸೈಲ್ ಗೆ ತುತ್ತಾಗಿ ತಮ್ಮ ಎರಡು ಕೈ ಹಾಗೂ ಒಂದು ಕಾಲನ್ನು ಕಳೆದುಕೊಂಡರು. ಆ ಸಮಯದಲ್ಲಿ ದೇಹದಲ್ಲಿ ಒಟ್ಟು 28 ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಎರಡು ವರ್ಷಗಳ ಕಾಲ ಚಿಕಿತ್ಸೆಗೆ ಒಳಗಾಗಿದ್ದರು.

ಆ ಸಮಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎನ್ನುವ ರಂಗಪ್ಪನವರಿಗೆ ಈಗಲೂ ಕಾಡುವುದು ಆ ವೇಳೆಯಲ್ಲಿ ಇವರನ್ನು ಆರೈಕೆ ಮಾಡಿದ್ದ ಕನ್ನಡತಿ ಸ್ಟಾಫ್ ನರ್ಸ್.

Soldier Waiting For Nurse Who Treated Him In Kargil

ಚಂಡಿಗಡದ ಮಿಲಿಟರಿ ಆಸ್ಪತ್ರೆಯಲ್ಲಿ ರಂಗಪ್ಪ ಅವರನ್ನು ಎರಡು ವರ್ಷ ಆರೈಕೆ ಮಾಡಿದ ಗೀತಾ ಎಂಬ ನರ್ಸ್ ಗಾಗಿ ಇಪ್ಪತ್ತು ವರ್ಷಗಳಿಂದಲೂ ಕಾಯುತ್ತಿದ್ದರು ರಂಗಪ್ಪ. ಕಾರ್ಗಿಲ್ ದಿವಸ ಬಂದಾಗಲೆಲ್ಲಾ ಯುದ್ಧದೊಂದಿಗೆ, ತಮಗೆ ಮರುಜನ್ಮ ನೀಡಿದ್ದ ಈ ನರ್ಸ್ ಅನ್ನೂ ನೆನಪಿಸಿಕೊಳ್ಳುತ್ತಾರೆ. ಅವರನ್ನು ಭೇಟಿಯಾಗಬೇಕೆಂದು ರಂಗಪ್ಪ ಇಷ್ಟು ವರ್ಷಗಳಿಂದಲೂ ಕಾದಿದ್ದು, ಇದೀಗ ಕಷ್ಟಪಟ್ಟು ಅವರ ಮೊಬೈಲ್ ನಂಬರನ್ನು ದಕ್ಕಿಸಿಕೊಂಡಿದ್ದಾರೆ.

"ಅವರೇ ನನ್ನ ತಾಯಿ. ಅವರೇ ನನ್ನ ಪಾಲಿನ ಭಾರತಮಾತೆ. ನನಗೆ ಮರುಜನ್ಮ ನೀಡಿದವರು ಅವರು. ಇಷ್ಟು ವರ್ಷಗಳಿಂದ ಅವರನ್ನು ಹುಡುಕಲು ಪ್ರಯತ್ನ ಪಟ್ಟಿದ್ದು, ಅವರ ಮೊಬೈಲ್ ನಂಬರ್ ಕೊನೆಗೂ ಸಿಕ್ಕಿತು. ಅವರನ್ನು ಭೇಟಿಯಾಗಲು ಇದೇ 29ರಂದು ಹೊರಟಿದ್ದೇನೆ" ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ.

ಸಮಯ ಸಿಕ್ಕಾಗಲೆಲ್ಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ. ಸೇನೆ ಸೇರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+