ಸಿದ್ದರಾಮಯ್ಯಗೆ ಮತ್ತೊಂದು ಮದುವೆ ಮಾಡ್ತಾರಂತೆ ಈ ಮಾಜಿ ಶಾಸಕ
ಬಾಗಲಕೋಟೆ, ಮಾರ್ಚ್ 22: ಬಾದಾಮಿ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರಿಗೆ ಇನ್ನೊಂದು ಮದುವೆ ಮಾಡಲು ಯೋಚಿಸುತ್ತಿದ್ದಾರಂತೆ.
ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸಿದ್ದರಾಮಯ್ಯ ನವರ ವಯಸ್ಸು 71 ಅಲ್ಲ ಈಗ 21 ಮಾತ್ರ ಅವರಿಗೆ ಇನ್ನೊಂದು ಮದುವೆ ಮಾಡಬೇಕು ಎಂದುಕೊಂಡಿದ್ದೇನೆ ಅಷ್ಟ ಗಟ್ಟಿ ಇದ್ದಾರೆ' ಎಂದು ನಗೆ ಚಟಾಕಿ ಹಾರಿಸಿದರು.
ಬಾದಾಮಿಯಲ್ಲಿ ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಸಹ ಸಿದ್ದರಾಮಯ್ಯ ಅವರು ಸೋಲುವ ಭೀತಿ ಇತ್ತು. ಆದರೆ ಇಲ್ಲಿನ ಕಾರ್ಯಕರ್ತರ ಸತತ ಶ್ರಮ ಮತ್ತು ಮತದಾರರ ಆಶೀರ್ವಾದದಿಂದ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಎಲ್ಲ ರೀತಿಯ ಭಾಗ್ಯಗಳನ್ನು ಕೊಟ್ಟು ನಂ.1 ರಾಜ್ಯ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಸೋಲಿನಿಂದ ಸಿದ್ದರಾಮಯ್ಯನವರು ಕುಗ್ಗಬಾರದು, ಎದೆ ಗುಂದಬಾರದು ಅವರ ಜೊತೆಗೆ ನಾವೆಲ್ಲ ಇದ್ದೇವೆ ಎಂದು ಆತ್ಮವಿಶ್ವಾಸ ತುಂಬಿದರು.
ಸಿದ್ದರಾಮಯ್ಯ ನವರಿಂದ ದೀನ ದಲಿತರ ಅಲ್ಪಸಂಖ್ಯಾತ ಹಿಂದುಳಿದವರ ಏಳ್ಗೆ ಸಾಧ್ಯ ಎಂದ ಅವರು, ರಾಜ್ಯಕ್ಕೆ ಸಿದ್ದರಾಮಯ್ಯನವರ ಅವಶ್ಯಕತೆ ಇದೆ. ಸಿದ್ದರಾಮಯ್ಯ ಅವರು ಮುಂದೆ ರಾಷ್ಟ್ರೀಯ ನಾಯಕರಾಗತ್ತಾರೆ. ದೇವರಾಜ ಅರಸು ಅವರ ಹೆಸರನ್ನು ಮೀರಿಸುವಂತೆ ಸಿದ್ದರಾಮಯ್ಯನವರು ಬೆಳೆಯುತ್ತಾರೆ ಎಂದು ತಿಮ್ಮಾಪುರ ಹೇಳಿದರು.












Click it and Unblock the Notifications