ಕರ್ನಾಟಕ ಪೊಲೀಸ್ ಇಲಾಖೆಗೆ ಮುಧೋಳ ನಾಯಿ ಸೇರ್ಪಡೆ
ಬಾಗಲಕೋಟೆ, ಫೆಬ್ರವರಿ 07 : ಮುಧೋಳ ತಳಿಯ ನಾಯಿ ಕರ್ನಾಟಕ ಪೊಲೀಸ್ ಇಲಾಖೆಗೆ ಸೇರುವ ಸಾಧ್ಯತೆ ಇದೆ. ಈಗಾಗಲೇ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳಲ್ಲಿ ಮುಧೋಳ ನಾಯಿಗಳು ಕಾರ್ಯ ನಿರ್ವಹಿಸುತ್ತಿವೆ.
ಭಾರತೀಯ ಸೇನೆಯಲ್ಲಿ ಮುಧೋಳ ನಾಯಿಯ ಸೇವೆ ಯಶಸ್ವಿಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಪೊಲೀಸ್ ಇಲಾಖೆಗೆ ಅವುಗಳನ್ನು ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ನಾಯಿಗಳ ಕುರಿತು ಬಾಗಲಕೋಟೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರಿಂದ ವರದಿ ತರಿಸಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ 4 ಮುಧೋಳ ನಾಯಿಗಳನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗುತ್ತಿದೆ. ನಾಯಿಗಳನ್ನು ಬೆಂಗಳೂರಿಗೆ ತಂದು ತರಬೇತಿ ಕೇಂದ್ರಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಈ ಪ್ರಕ್ರಿಯಿಗೆ ಮೌಖಿಕ ಒಪ್ಪಿಗೆ ಸಿಕ್ಕಿದ್ದು, ಅಂತಿಮ ಆದೇಶ ಬಾಕಿ ಇದೆ.

ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಈಗಾಗಲೇ ಲ್ಯಾಬ್ರೆಡಾರ್, ರೆಟ್ರಿವರ್, ಡಾಬರ್ಮನ್ ಹಾಗೂ ಆಲ್ಸೆಷನ್ ತಳಿಯ ನಾಯಿಗಳು ಕಾರ್ಯ ನಿರ್ವಹಿಸುತ್ತಿವೆ. ಲ್ಯಾಬ್ರೆಡಾರ್ ನಾಯಿ ವಾಸನೆ ಗ್ರಹಿಕೆಯಲ್ಲಿ ಚುರುಕಾಗಿದ್ದು, ಸ್ಫೋಟಕಗಳ ಪತ್ತೆಗೆ ಅವುಗಳನ್ನು ಬಳಕೆ ಮಾಡಲಾಗುತ್ತಿದೆ.
ಪೊಲೀಸ್ ಇಲಾಖೆಯಲ್ಲಿರುವ ಈಗಿರುವ ಎಲ್ಲಾ ನಾಯಿಗಳು ವಿದೇಶಿ ತಳಿಗಳು. ಇದೇ ಮೊದಲ ಬಾರಿಗೆ ಕರ್ನಾಟಕದ ದೇಸಿ ತಳಿಗೆ ಮನ್ನಣೆ ದೊರೆಯುತ್ತಿದ್ದು, ಮುಧೋಳ ನಾಯಿ ಇಲಾಖೆಗೆ ಸೇರ್ಪಡೆಯಾಗುತ್ತಿದೆ.












Click it and Unblock the Notifications