ಎನ್ಎಸ್ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿ
ಬಾಗಲಕೋಟೆ, ಡಿಸೆಂಬರ್ 15 : ಬಾಗಲಕೋಟೆಯ ಮುಧೋಳ ತಳಿಯ ನಾಯಿಗಳು ಎನ್ಎಸ್ಜಿಗೆ ಆಯ್ಕೆಯಾಗಿವೆ. ಈಗಾಗಲೇ ಭಾರತೀಯ ಸೇನಾಪಡೆ, ಕರ್ನಾಟಕ ಪೊಲೀಸ್ ಪಡೆಯಲ್ಲಿ ಮುಧೋಳ ನಾಯಿಗಳಿವೆ.
ರಾಷ್ಟ್ರಪತಿ, ಪ್ರಧಾನಮಂತ್ರಿಗಳ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ನೋಡಿಕೊಳ್ಳುತ್ತದೆ. ಗಣ್ಯರ ಭದ್ರತೆ ನೋಡಿಕೊಳ್ಳುವ ಎನ್ಎಸ್ಜಿ 4 ಮುಧೋಳ ನಾಯಿ ಮರಿಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಇದರಿಂದಾಗಿ ದೇಶದ ಅತ್ಯುನ್ನತ ಭದ್ರತಾ ಪಡೆಯ ಭಾಗವಾಗಿ ಮಧೋಳ ಸೇರ್ಪಡೆಯಾಗಲಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಎನ್ಎಸ್ಜಿ ಅಧಿಕಾರಿಗಳು ಬಾಗಲಕೋಟೆಗೆ ಆಗಮಿಸಲಿದ್ದು, ನಾಯಿಮರಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. 45 ನಾಯಿ ಮರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಸೂಕ್ತವಾದವುಗಳನ್ನು ತೆಗೆದುಕೊಂಡು ಹೋಗಲಿದ್ದಾರೆ.
ತಿಮ್ಮಾಪುರದಲ್ಲಿರುವ ಮುಧೋಳ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಮುಧೋಳ ನಾಯಿ ಮರಿಗಳಿವೆ. ಅವುಗಳಲ್ಲಿ 4 ಮರಿಗಳನ್ನು ಎನ್ಎಸ್ಜಿ ಪಡೆ ತೆಗೆದುಕೊಂಡು ಹೋಗಲಿದೆ ಎಂದು ಕೇಂದ್ರದ ಡಾ. ಮಹೇಶ ದೊಡಮನಿ ಹೇಳಿದ್ದಾರೆ.
ಈಗಾಗಲೇ ಮುಧೋಳ ತಳಿ ನಾಯಿಗಳು ಭಾರತೀಯ ಸೇನೆ, ಕೇಂದ್ರಿಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ ಹಾಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ.











Click it and Unblock the Notifications