ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್'
ಬಾಗಲಕೋಟೆ, ಜನವರಿ 19: ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಬಾಗಲಕೋಟೆ ಪೊಲೀಸರಿಗೆ 'ಕ್ರಿಶ್' ಸಹಾಯ ಮಾಡಲಿದ್ದಾನೆ. ಜಿಲ್ಲಾ ಪೊಲೀಸ್ ಘಟಕಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯನನ್ನು ಪೊಲೀಸರು ಆತ್ಮೀಯವಾಗಿ ಬರಮಾಡಿಕೊಂಡರು.
ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮುಧೋಳ ತಳಿ ನಾಯಿಗಳ ಬಳಕೆಗೆ ಅವಕಾಶ ನೀಡಿದೆ. ಜನವರಿ 19ರಂದು 'ಕ್ರಿಶ್' ಹೆಸರಿನ 1.5 ತಿಂಗಳ ಮುಧೋಲ್ ಹೌಂಡ್ ನಾಯಿ ಮರಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಘಟಕಕ್ಕೆ ಸೇರಿದೆ.
ಮುಧೋಳ ತಾಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಮಹೇಶ್ 'ಕ್ರಿಶ್' ಹೆಸರಿನ ನಾಯಿಮರಿಯನ್ನು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಅವರಿಗೆ ಹಸ್ತಾಂತರ ಮಾಡಿದರು.

ಬಾಗಲಕೋಟೆ ಜಿಲ್ಲಾ ಪೊಲೀಸ್ ಶ್ವಾನದಳದ ಸದಸ್ಯನಾಗಿ 'ಕ್ರಿಶ್' ಸೇರ್ಪಡೆಗೊಂಡಿದ್ದಾನೆ. ತರಬೇತಿಯ ನಂತರ ಅಪರಾಧ ಪತ್ತೆಗಾಗಿ ಸ್ನಿಫರ್ ಆಗಿ ಕಾರ್ಯನಿರ್ವಹಣೆ ಮಾಡಲಿದ್ದಾನೆ.
"ಕ್ರಿಶ್ಗೆ ಮೂರು ತಿಂಗಳು ತುಂಬುತ್ತಿದ್ದಂತೆ ಮೈಸೂರಿನ ಶ್ವಾನ ತರಬೇತಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ಅಲ್ಲಿ ಒಂದು ವರ್ಷ ತರಬೇತಿ ಪಡೆದ ಬಳಿಕ ಬಾಗಲಕೋಟೆಗೆ ಮರಳಿದ್ದಾನೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲಾ ಶ್ವಾನದಳದಲ್ಲಿ ಮುಧೋಳ ನಾಯಿಗಳ ಕಾರ್ಯವೈಖರಿಯನ್ನು ಗಮನಿಸಿ ಎಸ್ಪಿ ಗೃಹ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ. ನಂತರ ಇಲಾಖೆ ಉಳಿದ ಜಿಲ್ಲೆಗಳಲ್ಲೂ ಮುಧೋಳ ನಾಯಿಗಳ ಬಳಕೆಗೆ ಅವಕಾಶ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ.
'ಹಿರೋ' ನಿವೃತ್ತಿ: ಬಾಗಲಕೋಟೆ ಜಿಲ್ಲಾ ಶ್ವಾನದಳದಲ್ಲಿ ಮೂರು ಲ್ಯಾಬ್ರಡಾರ್, ಎರಡು ಡಾಬರ್ ಮನ್ ಮತ್ತು ಒಂದು ಜರ್ಮನ್ ಶಫರ್ಡ್ ನಾಯಿಗಳಿವೆ. 'ಹಿರೋ' ಹೆಸರಿನ ಲ್ಯಾಬ್ರಡಾರ್ ನಾಯಿ ಕಳೆದ ತಿಂಗಳು ನಿವೃತ್ತಿ ಹೊಂದಿದೆ. ಆ ಜಾಗಕ್ಕೆ 'ಕ್ರಿಶ್' ಸೇರ್ಪಡೆಯಾಗಿದೆ.












Click it and Unblock the Notifications