ಕೊರೊನಾಗೆ 4ನೇ ಬಲಿ; ಬಾಗಲಕೋಟೆಯಲ್ಲಿ ವೃದ್ಧ ಸಾವು
ಬಾಗಲಕೋಟೆ, ಏಪ್ರಿಲ್ 03 : ಕರ್ನಾಟಕದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮಾರಣಾಂತಿಕ ಸೋಂಕಿಗೆ ದೇಶದಲ್ಲಿಯೇ ಮೊದಲ ಬಲಿ ಕರ್ನಾಟಕದಲ್ಲಿ ಆಗಿತ್ತು.
ಶುಕ್ರವಾರ ಬಾಗಲಕೋಟೆಯ ನವನಗರದ ನಿವಾಸಿಯಾದ 75 ವರ್ಷದ ವೃದ್ಧ (ರೋಗಿ 125) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲಾಧಿಕಾರಿ ಡಾ. ಕೆ. ರಾಜೇಂದ್ರ ಈ ಕುರಿತು ಖಚಿತಪಡಿಸಿದ್ದಾರೆ.
ಮೃತಪಟ್ಟ ವೃದ್ಧ ಕಿರಾಣಿ ಹಾಗೂ ಅಡುಗೆ ಎಣ್ಣೆ ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದರು. ಮಾರ್ಚ್ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಯಾವುದೇ ವಿದೇಶ ಪ್ರವಾಸ ಮಾಡಿಲ್ಲ. ಹೊರ ರಾಜ್ಯ ಅಥವ ಹೊರ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ.

ವೃದ್ಧನ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ರಾತ್ರಿಯೇ ಕೊರೊನಾದಿಂದ ಮೃತಪಟ್ಟರೆ ಹೇಗೆ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಮಾರ್ಗಸೂಚಿ ಅನ್ವಯೇ 5ಕ್ಕೂ ಹೆಚ್ಚು ಜನರು ಸೇರದಂತೆ ನೋಡಿಕೊಂಡು ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
ಗುರುವಾರ ವೃದ್ಧನಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ವೃದ್ಧನ ಮಗ ಮತ್ತು ಮಗಳು 10 ದಿನಗಳ ಹಿಂದೆ ಬೆಂಗಳೂರಿನಿಂದ ಮನೆಗೆ ಆಗಮಿಸಿದ್ದರು. ಇವರಿಬ್ಬರ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
ಮೃತಪಟ್ಟ ವೃದ್ಧ 15 ದಿನಗಳಲ್ಲಿ ಯಾರು ಯಾರನ್ನು ಸಂಪರ್ಕ ಮಾಡಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ವ್ಯಕ್ತಿಯನ್ನು ಸಂಪರ್ಕಿಸಿದ್ದರೆ ಸ್ವಯಂ ಪ್ರೇರಿತವಾಗಿ ಘೋಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications