ಜಮಖಂಡಿ ಭಿನ್ನಮತ: ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರಿಗೂ ಸಂಕಟ
Recommended Video

ಜಮಖಂಡಿ, ಅಕ್ಟೋಬರ್ 16: ನಾಮಪತ್ರ ಸಲ್ಲಿಕೆಗೂ ಮುನ್ನವೇ ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಭಿನ್ನಮತ ಕಾಣಿಸಿಕೊಂಡಿದೆ.
ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಅಸಮಾಧಾನ, ಈಗ ಸ್ಫೋಟಗೊಂಡಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ಹಂತದಲ್ಲಿ ಪಕ್ಷದ ವಿರುದ್ಧ ಬಂಡಾಯ ಏಳುವ ಸೂಚನೆ ನೀಡಿರುವ ಮುಖಂಡರನ್ನು ತಣ್ಣಗಾಗಿಸಲು ಪಕ್ಷದ ನಾಯಕರು ಹೆಣಗಾಡುವಂತಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಗಮೇಶ್ ನಿರಾಣಿ, ಸ್ಥಳೀಯ ಮುಖಂಡರೊಂದಿಗೆ ಸೋಮವಾರ ರಾತ್ರಿ ಸಭೆ ನಡೆಸಿದ್ದು ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುವ ತಂತ್ರ ನಡೆಸಿದ್ದಾರೆ.
ಕಾಂಗ್ರೆಸ್ನಲ್ಲಿಯೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಅತೃಪ್ತ ಮುಖಂಡರ ಜತೆಗೆ ಸೋಮವಾರ ರಾತ್ರಿ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿ ಮಂಗಳವಾರ ಅವರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಸಂಗಮೇಶ್ ನಿರಾಣಿ ಸಡ್ಡು
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಗಮೇಶ್ ನಿರಾಣಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ಆಗ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆದರೆ, ಆಯ್ಕೆಯಾಗಿರಲಿಲ್ಲ. ಮುರುಗೇಶ್ ನಿರಾಣಿ ಅವರ ಸಹೋದರನಾಗಿರುವ ಸಂಗಮೇಶ್, ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದೇ ಭಾವಿಸಲಾಗಿತ್ತು.
ಅವರೊಂದಿಗೆ ಆಕಾಂಕ್ಷಿಯಾಗಿದ್ದ ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು, ಸಂಗಮೇಶ್ ಅವರ ಕೋಪಕ್ಕೆ ಕಾರಣವಾಗಿದೆ. ಈ ಬಾರಿಯೂ ಅವರ ನಡೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕ ಮುಖಂಡರಲ್ಲಿ ಮೂಡಿದೆ.

ಅತೃಪ್ತರ ಸಭೆ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರು ಮಂಗಳವಾರ ಜಮಖಂಡಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಆದರೆ, ಅದಕ್ಕೂ ಮುನ್ನವೇ ತಡರಾತ್ರಿವರೆಗೂ ಸಂಗಮೇಶ್ ಸಭೆ ನಡೆಸಿರುವುದು ಬಿಜೆಪಿ ಮುಖಂಡರ ಚಿಂತೆಗೆ ಕಾರಣವಾಗಿದೆ.
ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬುದನ್ನು ಚರ್ಚಿಸಲು ಅ. 17ರಂದು ತಮ್ಮ ಬೆಂಬಲಿಗರ ಸಭೆಯನ್ನು ಅವರು ಕರೆದಿದ್ದಾರೆ ಎನ್ನಲಾಗಿದೆ. ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಮುಖಂಡರಾದ ಉಮೇಶ ಮಹಾಬಳ ಶೆಟ್ಟಿ, ಬಿ.ಎಸ್, ಸಿಂಧೂರ ಅವರಲ್ಲಿಯೂ ಅಸಮಾಧಾನದ ಹೊಗೆ ಮೂಡಿಸಿದೆ.

ಮನವೊಲಿಕೆ ಯತ್ನ
ಮಂಗಳವಾರ ನಡೆಯಲಿರುವ ಬಹಿರಂಗಸಭೆಯಿಂದ ದೂರವೇ ಉಳಿಯಲು ಸಂಗಮೇಶ್ ನಿರಾಣಿ ಸೇರಿದಂತೆ ಅನೇಕ ಮುಖಂಡರು ತೀರ್ಮಾನಿಸಿದ್ದಾರೆ. ಸಭೆಯಲ್ಲಿ ಮತ್ತು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮುಖಂಡರ ಮನವೊಲಿಸಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಈಗಾಗಲೇ ಯಡಿಯೂರಪ್ಪ ಮತ್ತು ಗೋವಿಂದ ಕಾರಜೋಳ ಅವರು ಅತೃಪ್ತ ಮುಖಂಡರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಇಂದು ಅವರನ್ನು ಸ್ವತಃ ಭೇಟಿ ಮಾಡಿ ವಿವರಣೆ ನೀಡುವ ಸಾಧ್ಯತೆ ಇದೆ.

ಸುಶಿಲ್ ಕುಮಾರ್ ಬಂಡಾಯ
ಜಮಖಂಡಿ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನ ಕಾಂಗ್ರೆಸ್ ನಾಯಕರಿಗೂ ಬಿಸಿ ಮುಟ್ಟಿಸಿದೆ. ಸುಶೀಲ್ ಕುಮಾರ್ ಬೆಳಗಲಿ ಮತ್ತು ಸಿದ್ದು ನ್ಯಾಮಗೌಡ ಅವರ ಮಗ ಆನಂದ್ ನ್ಯಾಮಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆನಂದ್ ನ್ಯಾಮಗೌಡ ಅವರಿಗೆ ಪಕ್ಷ ಮಣೆ ಹಾಕಿರುವುದು ಸುಶೀಲ್ ಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜಮಖಂಡಿಯ ಉಪ ಚುನಾವಣೆಯ ಹೊಣೆ ಹೊತ್ತುಕೊಂಡಿರುವ ಸಿದಗ್ದರಾಮಯ್ಯ ಅವರು, ಬಂಡಾಯ ಶಮನಕ್ಕೆ ತೀವ್ರ ಪ್ರಯತ್ನ ನಡೆಸಿದ್ದಾರೆ.

ಸ್ಥಾನಮಾನದ ಭರವಸೆ
ಸುಶೀಲ್ ಕುಮಾರ್ ಬೆಳಗಲಿ ಅವರು ಅಕ್ಟೋಬರ್ 13ರಂದು ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿದ್ದರು. ಪಕ್ಷದ ವಿರುದ್ಧ ಬಂಡಾಯ ಏಳುವ ಸೂಚನೆ ನೀಡಿದ್ದರು. ಈ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ ಎಂದು ಮುಖಂಡರ ಅಭಿಪ್ರಾಯ ಪಡೆದುಕೊಂಡಿದ್ದರು.
ಅಸಮಾಧಾನಗೊಂಡಿರುವ ಪಕ್ಷದ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿರುವ ಸಿದ್ದರಾಮಯ್ಯ ಅವರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆನಂದ್ ನ್ಯಾಮಗೌಡ ಅವರಿಗೆ ಬೆಂಬಲ ನೀಡುವಂತೆ ಮತ್ತು ಪಕ್ಷದಲ್ಲಿ ಸುಶೀಲ್ ಕುಮಾರ್ ಸೇರಿದಂತೆ ಪ್ರಮುಖರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯೊಂದಿಗೆ ಅವರ ಮನವೊಲಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮುಂದುವರಿಸಿದ್ದಾರೆ.












Click it and Unblock the Notifications