ನೀವು ನಿದ್ದೆ ಮಾಡಿದ್ದಕ್ಕೇ ಜನರು ಮನೆಗೆ ಕಳುಹಿಸಿದ್ದಾರೆ: ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್
Recommended Video
ಬಾಗಲಕೋಟೆ, ಜೂನ್ 29: ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ, ಕೆಲಸ ಮಾಡುವವರಿಗೆ ವೋಟ್ ಹಾಕಿ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ, ಕೆಲಸ ಮಾಡುವವರಿಗೆ ಜನರು ವೋಟ್ ಹಾಕಿ, ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಟಾಂಗ್ ನೀಡಿದರು.
ನೀವೇನೂ ಕೆಲಸ ಮಾಡಿಲ್ಲ. ಬರಿ ನಿದ್ದೆ ಮಾಡಿದ್ದೀರಿ. ಅದಕ್ಕೆ ಇನ್ನೂ ನಿದ್ದೆ ಮಾಡುವುದಕ್ಕಾಗಿ ರಾಜ್ಯದ ಜನರು ನಿಮಗೆ ವೋಟ್ ಹಾಕದೆ ಮನೆಗೆ ಕಳುಹಿಸಿದ್ದಾರೆ. ನೀವು ಹೇಳಿದಂತೆ ಕೆಲಸಗಾರ ಮೋದಿ ಅವರಿಗೆ ವೋಟ್ ಹಾಕಿ ಗೆಲ್ಲಿಸಿದ್ದಾರೆ. ನಿಮ್ಮನ್ನು ಸಿದ್ದರಾಮಯ್ಯ ಅನ್ನುವುದಿಲ್ಲ, ನಿದ್ರಾಮಯ್ಯ ಅನ್ನುತ್ತೀನಿ ಎಂದು ಅವರು ಲೇವಡಿ ಮಾಡಿದರು.
ಬಾಗಲಕೋಟೆಯಲ್ಲಿ ಶನಿವಾರ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾವು ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದೇವೆ. ಅನೇಕ ಯೋಜನೆ, ಅನುದಾನಗಳನ್ನು ನೀಡಿದ್ದೇವೆ. ಆದರೆ, ಅಭಿವೃದ್ಧಿ ಮಾಡಿದವರಿಗೆ ನೀವು ವೋಟ್ ಹಾಕೊಲ್ಲ. ಏನೂ ಮಾಡದ ಬಿಜೆಪಿಯವರಿಗೆ ವೋಟ್ ಹಾಕ್ತೀರಿ. ನೀವೇಕೆ ಹೀಗೆ ಮಾಡ್ತೀರಿ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಗುರುವಾರ ಹೇಳಿದ್ದರು.
ಕೆಲಸ ಮಾಡುವವರಿಗೆ ವೋಟ್ ಹಾಕಿ, ನಿದ್ದೆ ಮಾಡುವವರಿಗೆ ವೋಟ್ ಹಾಕಬೇಡಿ ಎಂದಿದ್ದೆ. ಕೆಲಸ ಮಾಡುವವರಿಗೆ ಜನ ಮತ ಹಾಕಬೇಕೋ ಬೇಡವೋ? ವಾಟ್ ಈಸ್ ರಾಂಗ್ ಇನ್ ದಟ್? ಎಂದು ಶುಕ್ರವಾರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಸಿದ್ದರಾಮಯ್ಯ ಹೇಳಿದನ್ನೇ ಜನ ಮಾಡಿದ್ದಾರೆ
ಮತದಾರರು ಕೆಲಸಗಾರ ಮೋದಿ ಅವರನ್ನು ಗೆಲ್ಲಿಸಿದ್ದಾರೆ. ನಿದ್ದೆ ಮಾಡುವ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸಿದ್ದಾರೆ. 5 ವರ್ಷ ನಿದ್ದೆರಾಮಯ್ಯ ಅಗಿದ್ದ ಸಿದ್ದರಾಮಯ್ಯ ಏನು ಕೆಲಸ ಮಾಡಿದ್ದಾರೆ? ನಿದ್ದೆ ಮಾಡುವವರನ್ನು ಮನೆಗೆ ಕಳುಹಿಸಿ ಎಂದಿದ್ದಾರೆ. ಅವರು ಹೇಳಿದಂತೆಯೇ ರಾಜ್ಯದ ಜನರು ಮಾಡಿದ್ದಾರೆ ಎಂದ ಮೇಲೆ ಅವರಿಗೆ ಏಕೆ ಕೋಪ? ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಜೇಬಿನಿಂದ ಕೊಟ್ಟರಾ?
ಸಿದ್ದರಾಮಯ್ಯ ಅವರು ಹಾಲು ಕೊಟ್ಟೆ, ಮೊಟ್ಟೆ ಕೊಟ್ಟೆ, ಶೂ ಕೊಟ್ಟೆ ಎನ್ನುತ್ತಾರೆ. ಆದರೆ ಜನರು ಶೂ ಹಿಡಿದು ಹೊಡೆದರೆಂದು ನಾನು ಹೇಳುವುದಿಲ್ಲ. ಅವರು ಅಕ್ಕಿ, ಮೊಟ್ಟೆ, ಹಾಲು, ಶೂ ತಮ್ಮ ಜೇಬಿನ ಹಣದಿಂದ ಕೊಟ್ರಾ? ಇದನ್ನೆಲ್ಲ ಜನರ ತೆರಿಗೆ ಹಣದಿಂದ ಕೊಟ್ಟಿದ್ದಾರೆ. ನರೇಂದ್ರ ಮೋದಿ ಸಹ ತಮ್ಮ ಜೇಬಿನಿಂದ ಕೊಡುತ್ತಿಲ್ಲ. ಅಕ್ಕಿ ಕೊಟ್ಟು ಬಾಯಿಗೆ ಬಂದಹಾಗೆ ಮಾತನಾಡುತ್ತೀರಿ. ಅನ್ನಭಾಗ್ಯ ಯೋಜನೆಗೆ ಮೋದಿ ಸರ್ಕಾರ ಪ್ರತಿ ಕೆಜಿಗೆ 20 ರೂ. ಕೊಟ್ಟಿದೆ. ಇವನ್ನು ಸಿದ್ದರಾಮಯ್ಯ ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ ಎಂದರು.

ಒಬ್ಬೊಬ್ಬರಿಗೆ ಒಂದೊಂದು ನಾಮ
ಸಿದ್ದರಾಮಯ್ಯ ಎಷ್ಟೇ ಬಡಿದುಕೊಂಡರೂ ರಾಜ್ಯದಲ್ಲಿ ಕಾಂಗ್ರೆಸ್ ಬರೊಲ್ಲ. ಜನರು ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಒಂದು ನಾಮ, ಜೆಡಿಎಸ್ಗೆ ಒಂದು ನಾಮ ಮತ್ತು ನಿಮಗೆ ಒಂದು ನಾಮ ಹಾಕಿದ್ದಾರೆ. ಯಾವುದೇ ಚುನಾವಣೆಗೆ ಸಿದ್ಧ. ತೊಡೆ ತಟ್ಟಿ ಸಿದ್ಧರಾಗಿದ್ದೇವೆ ಎಂದಿದ್ದರು. ಬಿಜೆಪಿಯನ್ನು ಭಾರತದಿಂದಲೇ ಓಡಿಸುತ್ತೇವೆ ಎಂದಿದ್ದರು. ಇದೆಲ್ಲಾ ಏನಾಯ್ತು? ಎಂದು ಟೀಕಿಸಿದರು.

ಸೆರಗು ಹಿಡಿದು ಓಡಾಡುತ್ತಿದ್ದಾರೆ
ಬಿಜೆಪಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಇದ್ದಂತೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಈಸ್ಟ್ ಇಂಡಿಯಾ ಕಂಪೆನಿ ಬರುವುದಕ್ಕೆ ಕಾರಣ ಯಾರು. ಅವರ ಜತೆ ಯಾರು ಸಂಪರ್ಕ ಹೊಂದಿದ್ದರು? ಈಸ್ಟ್ ಇಂಡಿಯಾ ಕಂಪೆನಿ ಜತೆ ಒಂದಿಬ್ಬರು ಸಂಬಂಧ ಇಟ್ಟುಕೊಂಡಿದ್ದಾರೆ. ಸಿಎಂ ಆಗಬೇಕೆಂಬ ಆಸೆಯಿಂದ ಸಿದ್ದರಾಮಯ್ಯ ಅವರ ಸೆರಗು ಹಿಡಿದು ಓಡಾಡುತ್ತಿದ್ದಾರೆ.

ಮೋದಿ ವಿರುದ್ಧ ಅಹಂಕಾರ ಮಾತನ್ನಾಡಿದ್ದರು
ಸಿದ್ದರಾಮಯ್ಯ ಅವರು ಮೋದಿಯನ್ನು ಎಷ್ಟು ಟೀಕಿಸುತ್ತಾರೋ ಟೀಕಿಸಲಿ. ಜನ ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದಾರೆ. ಮೋದಿ ಭಯೋತ್ಪಾದಕರ ಅಟ್ಟಹಾಸ ಮಟ್ಟಹಾಕಿದ್ದಾರೆ. ದೇಶಕ್ಕಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದ್ರೂ ಕೆಲಸ ಮಾಡದವರಿಗೆ ವೋಟ್ ಹಾಕ್ತೀರಿ ಅನ್ನುತ್ತಾರೆ. ಅದಕ್ಕಾಗಿಯೇ ಜನರು ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಿದರು. ಅವರು ಮೋದಿ ಬಗ್ಗೆ ಅಹಂಕಾರ ಮಾತುಗಳನ್ನಾಡಿದರು. ಏಕವಚನದಲ್ಲಿ ಮೋದಿಯನ್ನು ನಿಂದಿಸಿದರು.

ಬಾದಾಮಿ ಜನರು ಮುಗ್ಧರು
ಪಾಪ ಬಾದಾಮಿ ಜನರು ಮುಗ್ಧರು, ನಂಬಿ ಕೆಟ್ಟರು. ಏನೂ ಗೊತ್ತಿಲ್ಲದೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದರು. ಸಿದ್ದರಾಮಯ್ಯ ಹಣೆಬರಹ ಗೊತ್ತಿಲ್ಲದೆ ಜನರು ಗೆಲ್ಲಿಸಿದರು. ಅದು ಗೊತ್ತಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದರು. ಬಿಜೆಪಿ ಕೋಮುವಾದಿ ಎಂದು ಹೇಳಿಕೊಂಡು ಒಂದಾಗಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದವರು ಒಂದಾಗಿದ್ದೀರಿ. ಆದರೆ ಸಿದ್ದರಾಮಯ್ಯ, ಎಚ್ ಡಿ ದೇವೇಗೌಡ, ಕೈ ಶಾಸಕರಲ್ಲಿ ಭಿನ್ನಮತವಿದೆ.












Click it and Unblock the Notifications