ಬೇಡ ಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ರಚನೆಗೆ ನಿರ್ಧಾರ
ಇಳಕಲ್ಲು, ಜೂನ್. 25: ಬೇಡ ಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ರಚನೆಗೆ ಇಳಕಲ್ ಪಟ್ಟಣದಲ್ಲಿ ಭಾನುವಾರ ನಡೆದ ಬೇಡ ಜಂಗಮ ಮೀಸಲಾತಿ ಹೋರಾಟದ ಚಿಂತನ ಮಂಥನ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಬಾಗಲಕೋಟೆಯ ಇಲಕಲ್ಲ ಪಟ್ಟಣದಲ್ಲಿರುವ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಬೇಡ ಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಕುರಿತು ವಿವಿಧ ಮಠಾಧೀಶರರು ಮತ್ತು ಸಮಾಜದ ಮುಖಂಡರು ಸಮಗ್ರವಾಗಿ ಚರ್ಚೆ ನಡೆಸಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ನೇತಾರರಾದ ವೀರೇಶ್ ಕೂಡ್ಲಿಗಿ ಮಠ ಅವರು ಪ್ರಾಸ್ತಾವಿಕ ಭಾಷಣ ಮಾಡಿ, "ಬೇಡ ಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟವು ಯಾವ ಸಂಘಟನೆಗೂ ಪರ್ಯಾಯವಲ್ಲ. ಈ ಸಂಘಟನೆಯು ರಾಷ್ಟ್ರಮಟ್ಟದ ಸಂಘಟನೆ. ಬೇಡ ಜಂಗಮ ಸಮಾಜದ ಎಲ್ಲಾ ಸಂಘಟನೆಗಳು ಸಮಾಜದ ಹಿತಾಸಕ್ತಿಗಾಗಿ ಹೋರಾಡುತ್ತಿವೆ" ಎಂದರು.
" ಅಖಿಲ ಭಾರತ ಬೇಡ ಜಂಗಮ ಸಮಾಜದ ಮುಖಂಡರಾದ ಡಾ.ಎಂ.ಪಿ. ದಾರು ಕೇಶ್ವರಯ್ಯ ಮತ್ತು ಶ್ರೀಮತಿ ಸುಜಾತ ಅವರ ಶ್ರಮ ಜನಾಂಗಕ್ಕೆ ಮುಡುಪಾಗಿದೆ. ಈ ದಂಪತಿ ರೀತಿಯಲ್ಲಿ ಅನೇಕರು ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಕೆಲವರು ತೆರೆಮರೆಯಲ್ಲಿ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ" ಎಂದು ಸಮಾಜಕ್ಕೆ ದುಡಿಯುತ್ತಿರುವವರನ್ನು ನೆನೆದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಸಮಾಜದ ಸಂಘಟನೆಯ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜ್ಯೋತಿಷ್ಯರತ್ನ, ತಾಳಿಕೋಟೆಯ ರಾಮಲಿಂಗಯ್ಯ ಸ್ವಾಮಿ ಮತ್ತು ದೇವರಹಿಪ್ಪರಗಿ, ಕೊಡೇಕಲ್ ಶ್ರೀಗಳು ಆಶೀರ್ವಚನ ಮಾಡಿ, ಬೇಡ ಜಂಗಮರು ಪ್ರಬಲರು ಪ್ರಭಾವಿಗಳೂ ಆಗಿದ್ದಾರೆ. ಆದರೆ, ಸರ್ಕಾರದಲ್ಲಿ ಅನೇಕ ಸೌಲಭ್ಯಗಳ ವಂಚಿತರಾಗಿದ್ದೇವೆ. ಸಮಾಜದ ಹಿತಾಸಕ್ತಿಗಾಗಿ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಒಗ್ಗೂಡಬೇಕಿದೆ ಎಂದಿದ್ದಾರೆ.
ಸಾಸನೂರು ಮಹಾಂತಲಿಂಗ ಶಿವಾಚಾರ್ಯರು, ಚಬನೂರು, ಕೊಡತಿ ಕೋಲಾರ, ನಾವಲಗಿ ಸೇರಿ ವಿವಿಧ ಮಠಾಧಿಪತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ನೂತನ ಬೇಡ ಜಂಗಮ ಸಂಘಟನೆಗಳಿಗೆ ರಾಷ್ಟ್ರೀಯ ಒಕ್ಕೂಟದ ಅಡಾಕ್ ಸಮಿತಿಯ ಅಧ್ಯಕ್ಷರಾಗಿ ವೀರೇಶ್ ಕೂಡ್ಲಿಗಿಮಠ್, ಕಾರ್ಯಾಧ್ಯಕ್ಷರಾಗಿ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರನ್ನು ಸರ್ವಾನುಮತದಿಂದ ಈ ವೇಳೆ ಆಯ್ಕೆಮಾಡಲಾಗಿದೆ. ಸಂಘಟನೆಯ ಉಳಿದ ಪದಾಧಿಕಾರಿಗಳನ್ನು ಶೀಘ್ರದಲ್ಲೇ ನೇಮಕ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.












Click it and Unblock the Notifications