ಪಂಜಾಬಿಗಳನ್ನು ಕೆಣಕಲು ಬಂದ ಪಾಕ್ ಸಚಿವನಿಗೆ ಛೀಮಾರಿ ಹಾಕಿದ ಅಮರೀಂದರ್
ಅಮೃತಸರ, ಆಗಸ್ಟ್ 13: ಪಂಜಾಬಿಗಳನ್ನು ಕೆಣಕಲು ಬಂದ ಪಾಕಿಸ್ತಾನಿ ಸಚಿವರೊಬ್ಬರಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವಿಟ್ಟರ್ ನಲ್ಲಿ ನೇರವಾಗಿ ಮಂಗಳಾರತಿ ಮಾಡಿದ್ದಾರೆ!
"ಭಾರತೀಯ ಸೇನೆಯಲ್ಲಿರುವ ಪಂಜಾಬಿಗಳು ಕಾಶ್ಮೀರದಲ್ಲಿ ಕೆಲಸ ಮಾಡಲು ನಿರಾಕರಿಸಬೇಕು" ಎಂಬ ಹೇಳಿಕೆಯನ್ನು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮರೀಂದರ್ ಸಿಂಗ್, "ಭಾರತದ ಆಂತರಿಕ ವಿಷಯದಲ್ಲಿ ತಲೆ ಹಾಕುವುದನ್ನು ಮೊದಲು ಬಿಡಿ. ಭಾರತೀಯ ಸೇನೆ ಅತ್ಯಂತ ಶಿಸ್ತಿನ ಮತ್ತು ರಾಷ್ಟ್ರಪ್ರೇಮ ಹೊಂದಿದೆ ಸೇನೆ ಎಂಬುದನ್ನು ನಿಮಗೆ ತಿಳಿಸಲು ಇಷ್ಟಪಡುತ್ತೇನೆ. ನಿಮ್ಮ ಸೇನೆಯ ಹಾಗಲ್ಲ ನಮ್ಮದು! ನಿಮ್ಮ ಪ್ರಚೋದನಾತ್ಮಕ ಮಾತುಗಳು ಭಾರತದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ನಮ್ಮ ಸೈನಿಕರು ನಿಮ್ಮ ಮಾತನ್ನು ಕೇಳಿ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

"ಬೇಕೆಂದೇ ಭಾರತೀಯ ಸೇನೆಯಲ್ಲಿ ಒಗ್ಗಟ್ಟು ಕಸಿಯುವ ಕಾರಣದಿಂದ ಫವಾದ್ ಚೌಧರಿ ಈ ರೀತಿ ಹೇಳಿಕೆ ನೀಡಿದ್ದು, ನಿಮ್ಮ ಮಾತಿನಿಂದ ಪಂಜಾಬಿಗಳು ಬದಲಾಗುತ್ತಾರೆ, ನಿಮ್ಮನ್ನು ನಂಬುತ್ತಾರೆ ಎಂಮದು ಭಾವಿಸಬೇಡಿ. ನೀವು ಈ ರೀತಿ ಮಾತನಾಡಿ ಪಂಜಾಬಿಗಳ ಮನಸ್ಸನ್ನು ನೋಯಿಸಿದ್ದೀರಿ ಅಷ್ಟೆ. ಪಂಜಾಬಿಗಳು ನಿಜವಾದ ದೇಶಭಕ್ತರು ಎಂಬುದು ಎಲ್ಲರಿಗೂ ಗೊತ್ತು" ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಮಂಜೀಂದರ್ ಎಸ್ ಸೀರ್ಸಾ ಸಹ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ವಿಧಿಯನ್ನು ಭಾರತ ರದ್ದುಗೊಳಿಸಿದ ನಂತರ ಪಾಕಿಸ್ತಾನ ಭಾರತದ ಆಂತರಿಕ ವಿಷಯದಲ್ಲಿ ದಿನೇ ದಿನೇ ತಲೆತೂರಿಸುತ್ತಿದ್ದು, ಸೇನೆಯಲ್ಲಿ ಒಗ್ಗಟ್ಟನ್ನು ನಾಶ ಮಾಡುವ ಪ್ರಯತ್ನದಲ್ಲಿದೆ.












Click it and Unblock the Notifications