ತಿರುಪತಿ ತಿಮ್ಮಪ್ಪ ದೇವಾಲಯದ ವಿಐಪಿ ದರ್ಶನ ರದ್ದು: ಹೊಸ ರೂಲ್ಸ್
ಅಮರಾವತಿ, ಜುಲೈ 21: ಈಗಿರುವ ಮೂರು ವಿಧದ ವಿಐಪಿ, ವಿವಿಐಪಿ ದರ್ಶನ ಪದ್ದತಿಯನ್ನು ರದ್ದು ಪಡಿಸಲು ನಿರ್ಧರಿಸಲಾಗಿದ್ದು, ಹೊಸ ಪದ್ದತಿ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ.
ಹೊಸ ಪದ್ದತಿಯ ಪ್ರಕಾರ, ವಿಐಪಿ ಟಿಕೆಟ್ ಬಹಳ ದುಬಾರಿಯಾಗಲಿದ್ದು, ಶ್ರೀವಾಣಿ ಟ್ರಸ್ಟಿಗೆ ದೇಣಿಗೆ ನೀಡಿದವರಿಗೆ ಮಾತ್ರ ಈ ಪಾಸ್ ಲಭ್ಯವಾಗಲಿದೆ. ಇದರಿಂದ, ವಿಐಪಿ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಕಮ್ಮಿಯಾಗಲಿದ್ದು, ಜನಸಾಮಾನ್ಯರಿಗೆ ದೇವರ ದರ್ಶನ ಶೀಘ್ರವಾಗಿ ಆಗಲಿದೆ.
ಶ್ರೀವಾಣಿ ಟ್ರಸ್ಟಿಗೆ ಹತ್ತು ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ದೇಣಿಗೆ ನೀಡಿದವರಿಗೆ ವಿಐಪಿ ದರ್ಶನದ ಪಾಸ್ ಲಭ್ಯವಾಗಲಿದೆ. ಹತ್ತು ಸಾವಿರ ನೀಡಿದರೆ ಒಂದು ಟಿಕೆಟ್ ಮಾತ್ರ ಪಡೆದುಕೊಳ್ಳಲು ಸಾಧ್ಯ ಎಂದು ಮಂಡಳಿಯ ಅಧಿಕಾರಿ ಎ ಕೆ ಸಿಂಘಾಲ್ ತಿಳಿಸಿದ್ದಾರೆ.

ಹಲವು ರಾಜಕೀಯ ಮುಖಂಡರು, ಅಧಿಕಾರಿಗಳು, ಟಿಟಿಡಿ ಮಂಡಳಿಯ ಶಿಫಾರಸು ಪತ್ರವನ್ನು ಪಡೆದು ವಿಐಪಿ ದರ್ಶನ ಪಡೆದುಕೊಳ್ಳುತ್ತಿದ್ದರು. ಇದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ.
ದೇಶದ ವಿವಿದೆಡೆ ಬಾಲಾಜಿ ದೇವಸ್ಥಾನ ನಿರ್ಮಿಸಲು ಟಿಟಿಡಿ ಮುಂದಾಗಿದ್ದು, ಇದಕ್ಕಾಗಿ ಶ್ರೀವಾಣಿ ಟ್ರಸ್ಟ್ ಅನ್ನು ಆರಂಭಿಸಿತ್ತು. ವಿಐಪಿ ದರ್ಶನ ಹೊಸ ಪದ್ದತಿ ಇನ್ನೂ ಅಧಿಕೃತವಾಗಿ ಜಾರಿಗೆ ಬರದಿದ್ದರೂ, ಟ್ರಸ್ಟಿಗೆ ಇದುವರೆಗೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ದೇಣಿಗೆ ಹರಿದುಬಂದಿದೆ.
ದೇವಾಲಯದ ಈ ಹೊಸ ಪದ್ದತಿಯಿಂದ ಉಳ್ಳವರು ಮಾತ್ರ ವಿಐಪಿ ದರ್ಶನದ ಟಿಕೆಟ್ ಪಡೆಯಲು ಸಾಧ್ಯವಾಗುವುದರಿಂದ, ಈ ಸರತಿ ಸಾಲು ಕಮ್ಮಿಯಾಗುವ ಸಾಧ್ಯತೆಯಿದೆ.












Click it and Unblock the Notifications