ಬುಧವಾರದಿಂದ ಕರ್ನಾಟಕಕ್ಕೆ ಬರಲಿದೆ ಎಪಿಎಸ್ಆರ್ಟಿಸಿ ಬಸ್
ಅಮರಾವತಿ, ಜೂನ್ 15 : ಆಂಧ್ರಪ್ರದೇಶ ಸರ್ಕಾರ ಜೂನ್ 17ರಿಂದ ಕರ್ನಾಟಕಕ್ಕೆ ಅಂತರರಾಜ್ಯ ಬಸ್ ಸೇವೆಯನ್ನು ಆರಂಭಿಸಲಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಬಸ್ ಸಂಚಾರ ರದ್ದುಗೊಂಡಿತ್ತು. ಮೊದಲ ಹಂತದಲ್ಲಿ 168 ಬಸ್ಗಳು ಸಂಚಾರ ನಡೆಸಲಿವೆ.
ಜೂನ್ 17ರ ಬುಧವಾರದಿಂದ ಕರ್ನಾಟಕಕ್ಕೆ ಬಸ್ ಸೇವೆ ಆರಂಭಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಕರ್ನೂಲ್, ಚಿತ್ತೂರು, ಅನಂತಪುರ ಸೇರಿದಂತೆ ಜಿಲ್ಲಾ ಕೇಂದ್ರಗಳಿಂದ ಬಸ್ ಸಂಚಾರ ಆರಂಭವಾಗಲಿದೆ.
ಒಟ್ಟು 4 ಹಂತದಲ್ಲಿ 500 ಬಸ್ಗಳ ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಎಪಿಎಸ್ಆರ್ಟಿಸಿ ಹೇಳಿದೆ. ಬುಧವಾರ 168 ಬಸ್ಗಳು ಸಂಚಾರವನ್ನು ಆರಂಭಿಸಲಿವೆ. ಸೋಮವಾರದಿಂದಲೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.

ಮೂರು ಜಿಲ್ಲೆಗಳಿಂದ ಸಂಚಾರ ನಡೆಸುವ ಬಸ್ಗಳಿಗೆ ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ? ಎಂಬುದನ್ನು ಪರಿಶೀಲಿಸಲಾಗುತ್ತದೆ. ಬಳಿಕ ನೆಲ್ಲೂರು, ಕಡಪ, ಪ್ರಕಾಶಂ, ಕೃಷ್ಣ, ಗಂಟೂರು, ಪಶ್ಚಿಮ ಗೋದಾವರಿಯಿಂದ ಬಸ್ ಸಂಚಾರ ಆರಂಭಿಸಲಾಗುತ್ತದೆ.
ಬಸ್ ಸಂಚಾರ ಆರಂಭಿಸುವಾಗ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲನೆ ಮಾಡಲಾಗುತ್ತದೆ. ಕರ್ನಾಟಕದಿಂದ ರಾಜ್ಯಕ್ಕೆ ಆಗಮಿಸುವ ಶೇ 5ರಷ್ಟು ಪ್ರಯಾಣಿಕರ ಸ್ಯಾಂಪಲ್ ಸಂಗ್ರಹಣೆ ಮಾಡಿ ಕೋವಿಡ್ - 19 ಪರೀಕ್ಷೆ ನಡೆಸಲಾಗುತ್ತದೆ.
ಆಂಧ್ರಪ್ರದೇಶ ಸರ್ಕಾರ ತೆಲಂಗಾಣ ರಾಜಧಾನಿ ಹೈದರಾಬಾದ್, ತಮಿಳುನಾಡು ರಾಜಧಾನಿ ಚೆನ್ನೈಗೆ ಬಸ್ ಸಂಚಾರ ಆರಂಭಿಸಲು ಅಲ್ಲಿನ ರಾಜ್ಯ ಸರ್ಕಾರಗಳ ಅನುಮತಿ ಕೇಳಿದೆ. ಬಸ್ನಲ್ಲಿ ಸಂಚಾರ ನಡೆಸುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಬಸ್ ಹತ್ತುವಾಗ ಮತ್ತು ಇಳಿಯುವಾಗ ಸ್ಯಾನಿಟೈಸರ್ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಲು ಬಸ್ಗಳ ಸೀಟುಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಎಪಿಎಸ್ಆರ್ಟಿಸಿ ಹೇಳಿದೆ.












Click it and Unblock the Notifications