ಆಂಧ್ರ: ಇನ್ನೂ ಬಗೆಹರಿಯದ ನಿಗೂಢ ಕಾಯಿಲೆ ಮೂಲ
ಅಮರಾವತಿ, ಡಿಸೆಂಬರ್ 11: ಆಂಧ್ರಪ್ರದೇಶದ ಎಲೂರು ಪಟ್ಟಣದಲ್ಲಿ ಆತಂಕ ಮೂಡಿಸಿರುವ ನಿಗೂಢ ಕಾಯಿಲೆಯ ಮೂಲ ಇನ್ನೂ ಪತ್ತೆಯಾಗಿಲ್ಲ. ಕಾಯಿಲೆಗೆ ತುತ್ತಾದವರ ರಕ್ತದ ಮಾದರಿಗಳಲ್ಲಿ ಸೀಸ ಮತ್ತು ನಿಕ್ಕಲ್ನಂತಹ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಆದರೆ ಅವು ಹೇಗೆ ಅವರ ದೇಹಕ್ಕೆ ಸೇರಿವೆ ಎನ್ನುವುದು ಇನ್ನೂ ಬಗೆಹರಿದಿಲ್ಲ. ಈ ನಡುವೆ ಮತ್ತೆ 13 ಹೊಸ ಪ್ರಕರಣಗಳು ಶುಕ್ರವಾರ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 600 ದಾಟಿದೆ.
ಎಲೂರು ಪ್ರದೇಶದಲ್ಲಿ ಉಂಟಾದ ಈ ನಿಗೂಢ ಕಾಯಿಲೆಯ ಕಾರಣವನ್ನು ಭೇದಿಸಲು ಆಂಧ್ರಪ್ರದೇಶದ ಸರ್ಕಾರ 21 ಸದಸ್ಯರ ಬಹುಶಿಸ್ತೀಯ ಸಮಿತಿಯನ್ನು ರಚಿಸಿದೆ. ಈ ಸಮಿತಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಮುಖ್ಯಸ್ಥರಾಗಿದ್ದಾರೆ.
600ಕ್ಕೂ ಹೆಚ್ಚು ಮಂದಿ ಇದುವರೆಗೂ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 32 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಉಳಿದವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಿವಿಸಿ ಪೈಪ್ಗಳಲ್ಲಿ ಬಳಿದಿರುವ ಸೀಸದ ಅಂಶಗಳು ಕುಡಿಯುವ ನೀರಿನಲ್ಲಿ ಬೆರೆತು ಜನರ ದೇಹಕ್ಕೆ ವಿಷ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ನಿವೃತ್ತ ಅಧಿಕಾರಿಗಳು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ಭಾರತೀಯ ಗುಣಮಟ್ಟ ಸಮಿತಿ (ಕ್ಯೂಸಿಐ) ನಡೆಸಿದ ವಿಶ್ಲೇಷಣೆ ಪ್ರಕಾರ ಭಾರತದ 26 ನಗರಗಳಲ್ಲಿ ತೆಗೆದುಕೊಂಡ ಶೇ 33ರಷ್ಟು ನೀರಿನ ಮಾದರಿಯಲ್ಲಿ ಅಧಿಕ ಪ್ರಮಾಣದ ಸೀಸದ ಅಂಶವಿದೆ. ಸೀಸದ ಲೇಪವಿರುವ ಪಿವಿಸಿ ಪೈಪ್ಗಳನ್ನು ನಗರಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹೀಗಾಗಿ ನೀರಿನಲ್ಲಿನ ಸೀಸದ ವಿಷ ಬೆರೆಯಲು ಕುಡಿಯುವ ನೀರಿನ ವ್ಯವಸ್ಥೆ ಪ್ರಮುಖ ಕಾರಣವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಹೇಳಿದ್ದಾರೆ.












Click it and Unblock the Notifications