ಎನ್ಡಿಎ ಜತೆ ಕೈಜೋಡಿಸುತ್ತಾರಾ ಜಗನ್ ರೆಡ್ಡಿ?: ಕುತೂಹಲ ಮೂಡಿಸಿದ ಮೋದಿ ಭೇಟಿ
ಹೈದರಾಬಾದ್, ಅಕ್ಟೋಬರ್ 6: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಸೇರಲಿದೆಯೇ? ಹೀಗೊಂದು ಸುದ್ದಿ ಆಂಧ್ರಪ್ರದೇಶ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈ ನಡೆ ಅನೇಕ ಊಹಾಪೋಹಗಳನ್ನು ಹುಟ್ಟುಹಾಕಿದೆ. ಜಗನ್ ಪಕ್ಷವು ಕೇಂದ್ರದ ಆಡಳಿತಾರೂಢ ಎನ್ಡಿಎ ಮೈತ್ರಿಕೂಟವನ್ನು ಸೇರಿದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಎನ್ಡಿಎದ ದೀರ್ಘಕಾಲದ ಮಿತ್ರಪಕ್ಷ ಶಿರೋಮಣಿ ಅಕಾಲಿದಳವು ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ವಾರ ಮೈತ್ರಿಕೂಟದಿಂದ ಹೊರಬಂದಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದ ವಿಚಾರದ ವಿವಾದ ಉಂಟಾದಾಗ ಬಿಜೆಪಿಯ ಮಿತ್ರಪಕ್ಷ ಶಿವ ಸೇನಾ ಕೂಡ ಮೈತ್ರಿ ತೊರೆದು ತನ್ನ ದೀರ್ಘಕಾಲದ ವಿರೋಧಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿ ಜತೆ ಸೇರಿ ಸರ್ಕಾರ ರಚಿಸಿದ್ದಲ್ಲದೆ, ಮೊದಲ ಬಾರಿ ಸಿಎಂ ಗಾದಿ ಪಡೆದುಕೊಂಡಿತ್ತು. ಮುಂದೆ ಓದಿ.

ಎನ್ಡಿಎ ಸೇರ್ಪಡೆ
ಮಂಗಳವಾರ ಬೆಳಿಗ್ಗೆ ಜಗನ್ ಮೋಹನ್ ರೆಡ್ಡಿ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಯಲಿದೆ. ಅದಕ್ಕಾಗಿ ಅವರು ಸೋಮವಾರ ಸಂಜೆ ನವದೆಹಲಿಗೆ ಪ್ರಯಾಣಿಸಿದ್ದಾರೆ. ಸರ್ಕಾರದ ಕೈಯನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ಎನ್ಡಿಎ ಒಕ್ಕೂಟವನ್ನು ಸೇರಿಕೊಳ್ಳುವಂತೆ ವೈಎಸ್ಆರ್ಸಿಪಿಗೆ ಪ್ರಧಾನಿ ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಪಕ್ಷ ಮೂಲಗಳು ತಿಳಿಸಿವೆ.

ಅಮಿತ್ ಶಾ ಭೇಟಿ ಮಾಡಿದ್ದ ಜಗನ್
ಜಗನ್ ಮೋಹನ್ ರೆಡ್ಡಿ ಎನ್ಡಿಎ ನಾಯಕರನ್ನು ಭೇಟಿ ಮಾಡುತ್ತಿರುವುದು ಕಳೆದ ಎರಡು ವಾರಗಳಲ್ಲಿ ಇದು ಎರಡನೆಯ ಸಲ. ಸೆ. 22ರಂದು ಎರಡು ದಿನಗಳ ದೆಹಲಿ ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ರಾಜ್ಯಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳ ಚರ್ಚೆ ಜತೆಗೆ, ಎನ್ಡಿಎ ಜತೆ ಕೈಸೇರಿಸುವ ವಿಚಾರದ ಬಗ್ಗೆಯೂ ಸಮಾಲೋಚನೆ ನಡೆಸಿದ್ದರು. ಆದರೆ ಆಗ ಪ್ರಧಾನಿ ಭೇಟಿಗೆ ಸಮಯ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಮೂರು ಸ್ಥಾನಗಳ ಆಫರ್
ವೈಎಸ್ಆರ್ಸಿಪಿ ಸಂಸದರಿಗೆ ಎರಡು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಆಫರ್ ನೀಡಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಸಲುವಾಗಿ ಜಗನ್ ಅವರು ನವದೆಹಲಿಗೆ ತೆರಳಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಸಂಸ್ಥೆ ವಿಡಿಪಿ ಅಸೋಸಿಯೇಟ್ಸ್ ಹೇಳಿದೆ.

ಸಂಸತ್ನಲ್ಲಿ ಸಂಸದರ ಬಲ
22 ಲೋಕಸಭೆ ಸಂಸದರನ್ನು ಹೊಂದಿರುವ ವೈಎಸ್ಆರ್ಸಿಪಿ, ಸಂಸತ್ನ ನಾಲ್ಕನೇ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಜತೆಗೆ ರಾಜ್ಯಸಭೆಯಲ್ಲಿ ಆರು ಸಂಸದರನ್ನು ಕೂಡ ಹೊಂದಿದೆ. 2019ರ ಮೇ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಸಮಯದಿಂದಲೂ ಜಗನ್ ಮೋಹನ್ ರೆಡ್ಡಿ ಅವರು, ಎನ್ಡಿಎ ಜತೆಗೆ ಉತ್ತಮ ಬಾಂಧವ್ಯ ಉಳಿಸಿಕೊಂಡು ಬಂದಿದ್ದಾರೆ.

ಮೋದಿ ನಿರ್ಧಾರಗಳಿಗೆ ಬೆಂಬಲ
ಮೋದಿ ಸರ್ಕಾರವು ತೆಗೆದುಕೊಳ್ಳುವ ಎಲ್ಲ ನಿರ್ಣಯಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಎರಡರಲ್ಲಿಯೂ ವೈಎಸ್ಆರ್ಸಿಪಿ ಬೆಂಬಲಿಸುತ್ತಾ ಬಂದಿದೆ. ಎನ್ಡಿಎ ಮಿತ್ರಪಕ್ಷ ಶಿರೋಮಣಿ ಅಕಾಲಿದಳವು ಕೃಷಿ ಮಸೂದೆಗಳನ್ನು ವಿರೋಧಿಸಿದರೆ ವೈಎಸ್ಆರ್ಸಿಪಿ ಅದಕ್ಕೆ ಬೆಂಬಲ ನೀಡಿತ್ತು.

ಜಿಎಸ್ಟಿ ಆಯ್ಕೆಗೆ ಒಪ್ಪಿಗೆ
ರಾಜ್ಯಸಭೆಯ ಉಪಾಧ್ಯಕ್ಷರನ್ನಾಗಿ ಹರಿವಂಶ್ ನಾರಾಯಣ್ ಸಿಂಗ್ ಅವರ ನೇಮಕದ ವೇಳೆ ಕೂಡ ಬಿಜೆಪಿಗೆ ಬೆಂಬಲ ನೀಡಿತ್ತು. ಅಲ್ಲದೆ, ಜಿಎಸ್ಟಿ ಪರಿಹಾರದ ಪರ್ಯಾಯವಾಗಿ ನೀಡಿದ ಸಾಲ ಪಡೆಯುವಿಕೆಯ ಎರಡು ಆಯ್ಕೆಗಳನ್ನು ಸಹ ಆಂಧ್ರಪ್ರದೇಶ ಒಪ್ಪಿಕೊಂಡಿದೆ. ಟಿಆರ್ಎಸ್ ಆಡಳಿತದ ನೆರೆಯ ತೆಲಂಗಾಣ ಸರ್ಕಾರ ಅದನ್ನು ವಿರೋಧಿಸಿತ್ತು.

ಸಿಬಿಐ ಕುಣಿಕೆಯಿಂದ ಪಾರಾಗುವ ಪ್ರಯತ್ನ
ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ಪ್ರಕರಣವನ್ನು ಜಗನ್ ಎದುರಿಸುತ್ತಿದ್ದಾರೆ. ಜತೆಗೆ ಅವರ ಚಿಕ್ಕಪ್ಪ ವೈಎಸ್ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಅವರ ಸಂಬಂಧಿಕರ ಮೇಲೆ ಕೂಡ ಸಿಬಿಐ ಕಣ್ಣಿದೆ. ಅಮರಾವತಿ ಭೂಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಸಿಬಿಐ ತನಿಖೆ ನಡೆಸುವುದು ಜಗನ್ ಉದ್ದೇಶವಾಗಿದೆ. ಹೀಗಾಗಿ ಎನ್ಡಿಎ ಮೈತ್ರಿಕೂಟ ಸೇರುವುದು ಜಗನ್ ಅವರಿಗೆ ಅನೇಕ ಅನುಕೂಲತೆಗಳನ್ನು ನೀಡಲಿದೆ ಎಂದು ಹೇಳಲಾಗಿದೆ.












Click it and Unblock the Notifications