ಅನುಮತಿ ಪಡೆಯದೆ ರಾಜ್ಯಕ್ಕೆ ಸಿಬಿಐ ಕಾಲಿಡುವಂತಿಲ್ಲ: ಆಂಧ್ರ ಸರ್ಕಾರದ ಸೂಚನೆ
Recommended Video

ಅಮರಾವತಿ, ನವೆಂಬರ್ 16: ರಾಜ್ಯದಲ್ಲಿನ ಯಾವುದೇ ಪ್ರಕರಣದ ವಿಚಾರಣೆ ನಡೆಸಲು ಸಿಬಿಐಗೆ ನೀಡಿರುವ ಸಾಮಾನ್ಯ ಸಮ್ಮತಿಯನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಿಂಪಡೆದುಕೊಂಡಿದೆ.
ಇದರಿಂದಾಗಿ ತನ್ನ ಅಧಿಕೃತ ಕಾರ್ಯಗಳಿಗಾಗಿ ಆಂಧ್ರಪ್ರದೇಶವನ್ನು ಪ್ರವೇಶಿಸುವ ಮುನ್ನ ಸಿಬಿಐ, ಆಂಧ್ರ ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕಿದೆ.
ಸಿಬಿಐನಲ್ಲಿ ಭುಗಿಲೆದ್ದಿರುವ ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದರಿಂದ ಸಂಸ್ಥೆಯ ಕುರಿತು ವಿಶ್ವಾಸ ಕಡಿಮೆಯಾಗಿದೆ. ಈ ಕಾರಣಕ್ಕಾಗಿ ಅದಕ್ಕೆ ನೀಡಿರುವ ಸಮ್ಮತಿಯನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಈ ನಡೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ಪಕ್ಷಗಳ ಒಕ್ಕೂಟವನ್ನು ರಚಿಸಲು ಮಾಡುತ್ತಿರುವ ಪ್ರಯತ್ನವನ್ನು ಬಲಗೊಳಿಸಲು ಮಾಡಿರುವ ಯೋಜನೆ ಎನ್ನಲಾಗಿದೆ.
ಈ ಸಂಬಂಧ ಆಂಧ್ರ ಸರ್ಕಾರದ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಆರ್ ಅನುರಾಧಾ ಆದೇಶ ಹೊರಡಿಸಿದ್ದಾರೆ.
ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್, 1946ರ ಸೆಕ್ಷನ್ 5 ಅಡಿಯಲ್ಲಿ ಇರುವ ಅಧಿಕಾರಗಳು ಆಂಧ್ರಪ್ರದೇಶದಲ್ಲಿ ಅನ್ವಯ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಿಬಿಐ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ದಾಳಿಗಳು, ತನಿಖೆ ಅಥವಾ ಹುಡುಕಾಟಗಳನ್ನು ನಡೆಸಲು ಸರ್ಕಾರದ ಅನುಮತಿ ಪಡೆಯಲೇಬೇಕು.
ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಅದರ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.












Click it and Unblock the Notifications