ಆಂಧ್ರಪ್ರದೇಶ ವಿಮಾನ ಅಪಘಾತ: ಸ್ವಲ್ಪದರಲ್ಲಿಯೇ ತಪ್ಪಿದ ಭಾರಿ ಅನಾಹುತ
ವಿಜಯವಾಡ, ಫೆಬ್ರವರಿ 20: ಆಂಧ್ರಪ್ರದೇಶದಲ್ಲಿ ಭಾರಿ ವಿಮಾನ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, 60ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
64 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಭೂಸ್ಪರ್ಶದ ವೇಳೆ ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ. ಗನ್ನಾವರಂನ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ.
'ವಿಮಾನದಲ್ಲಿದ್ದ ಎಲ್ಲ 64 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ' ಎಂದು ವಿಮಾನ ನಿಲ್ದಾಣ ನಿರ್ದೇಶಕ ಜಿ. ಮಧುಸೂದನ್ ರಾವ್ ತಿಳಿಸಿದ್ದಾರೆ.

ದೋಹಾದಿಂದ ಸಂಜೆ 4.50ರ ಸುಮಾರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು 64 ಪ್ರಯಾಣಿಕರನ್ನು ಹೊತ್ತು ತಂದಿತ್ತು. ಈ 64 ಪ್ರಯಾಣಿರಲ್ಲಿ 19 ಪ್ರಯಾಣಿಕರು ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಲ್ಯಾಂಡಿಂಗ್ ವೇಳೆ ವಿಮಾನವು ಐದನೇ ಸಂಖ್ಯೆಯ ಬೇನಲ್ಲಿ ಇಳಿಯುತ್ತಿತ್ತು. ರನ್ವೇನಲ್ಲಿ ಸಾಗುವಾಗ ವಿದ್ಯುತ್ ಕಂಬಕ್ಕೆ ರೆಕ್ಕೆ ಡಿಕ್ಕಿಯಾಗಿದೆ.
ರನ್ವೇನಲ್ಲಿ ಇಳಿಯುವಾಗ ಮಧ್ಯಭಾಗದ ಹಳದಿ ಪಟ್ಟೆಯಲ್ಲಿ ಇಳಿಯುವ ಬದಲು ವಿಮಾನದ ಕ್ಯಾಪ್ಟನ್ ಅಂಚಿನಲ್ಲಿನ ಹಳದಿ ಪಟ್ಟಿಯಲ್ಲಿ ಇಳಿಸಿದ್ದರು. ಇದರ ಪರಿಣಾಮ ರನ್ವೇ ಪಕ್ಕದಲ್ಲಿದ್ದ ಅಧಿಕ ತೀವ್ರತೆ ಬೆಳಕಿಗಾಗಿ ಸ್ಥಾಪಿಸಲಾದ ಕಂಬಕ್ಕೆ ವಿಮಾನದ ರೆಕ್ಕೆ ಡಿಕ್ಕಿಯಾಗಿದೆ. ಆ ರಭಸಕ್ಕೆ ಕಂಬ ಧರೆಗುಳಿದಿದೆ. ರೆಕ್ಕೆಗೆ ಸಣ್ಣಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications