ಕೊರೊನಾ ಭೀತಿ, ಆತ್ಮಹತ್ಯೆ ಮಾಡಿಕೊಂಡ ಆಂಧ್ರದ ವ್ಯಕ್ತಿ!
ಅಮರಾವತಿ, ಫೆಬ್ರವರಿ 11: ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಆತಂಕ ತಂದೊಡ್ಡುತ್ತಿದೆ. ಭಾರತದಲ್ಲಿ ಕೊರೊನೊ ಇದುವರೆಗೂ ತನ್ನ ಅಟ್ಟಹಾಸ ತೋರಿಸದಿದ್ದರೂ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಆಂಧ್ರಪ್ರದೇಶದ ರೈತನನೊಬ್ಬ ತನ್ನನ್ನೇ ತಾನು ಬಲಿ ಪಡೆದುಕೊಂಡಿರುವ ವಿಚಿತ್ರ ಘಟನೆ ಸೋಮವಾರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ತಿರುಪತಿ ಬಳಿಯ ತೊಟ್ಟಂಬೇಡು ಗ್ರಾಮದ ಬಾಲಕೃಷ್ಣಯ್ಯ ಎಂಬ 54 ವರ್ಷದ ರೈತ, "ತನಗೆ ಕೊರೊನಾ ಬಂದಿದೆ. ಅದು ಬೇರೆಯವರಿಗೂ ಬರುವುದು ಬೇಡ' ಎಂದು ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಕೊರೊನಾ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಇಂತಹ ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಆತನಿಗೆ ಏನಾಗಿತ್ತು?
ತಿರುಪತಿ ಬಳಿಯ ತೊಟ್ಟಂಬೇಡು ಗ್ರಾಮದ ಬಾಲಕೃಷ್ಣಯ್ಯ ಕಳೆದ 15 ದಿನಗಳಿಂದ ಜ್ವರ ಕೆಮ್ಮು ಹಾಗೂ ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿದ್ದ. ಕುಟುಂಬದವರು ಬಾಲಕೃಷ್ಣಯ್ಯನನ್ನು ತಿರುಪತಿಯ ರುಯ್ಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆಯಲ್ಲಿ ಟಿವಿ ಪತ್ರಿಕೆಗಳಿಂದ ಕೊರೊನಾ ವೈರಸ್ ರೋಗದ ಬಗ್ಗೆ ತಿಳಿದುಕೊಂಡಿದ್ದ ಕೊರೊನಾ ಪೀಡಿತರ ಬಗ್ಗೆ ವಿಡಿಯೋಗಳನ್ನು ನೋಡಿ, ತನಗೆ ಕೊರೊನಾ ಬಂದಿದೆ ಎಂದು ವೈದ್ಯರ ಬಳಿ ಬಾಲಕೃಷ್ಣಯ್ಯ ಹೇಳಿದ್ದನಂತೆ.

ವೈದ್ಯರು ಮನೆಗೆ ಕಳುಹಿಸಿದ್ದರು
ತಿರುಪತಿಯ ರುಯ್ಯಾ ಆಸ್ಪತ್ರೆ ವೈದ್ಯರು ಬಾಲಕೃಷ್ಣಯ್ಯನಿಗೆ ತಿಳಿ ಹೇಳಿ ಮನೆಗೆ ಕಳುಹಿಸಿದ್ದರು. ಆದರೆ, ವೈದ್ಯರ ಮಾತನ್ನು ನಂಬದ ಆತ ಕಳೆದ ಒಂದು ವಾರದಿಂದ ತನಗೆ ಕೊರೊನಾ ರೋಗವೇ ಬಂದಿದೆ ಎಂದು ಒಂದು ಕೋಣೆಯಲ್ಲಿ ಸೇರಿಕೊಂಡಿದ್ದ. ಯಾರನ್ನು ತನ್ನ ಬಳಿ ಬರಲು ಬಿಟ್ಟಿರಲಿಲ್ಲ ಎಂದು ಆತನ ಕುಟುಂಬಸ್ಥರು ಸ್ಥಳೀಯ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.

ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
"ಕಳೆದ ಒಂದು ವಾರದಿಂದ ವಿಚಿತ್ರವಾಗಿ ಆಡುತ್ತಿದ್ದ ನಮ್ಮ ತಂದೆಯ ಬಳಿ ಹೋಗಲು ಪ್ರಯತ್ನಿಸಿದರೆ ಕಲ್ಲು ಎಸೆಯುತ್ತಿದ್ದ. ನನಗೆ ಕೊರೊನಾ ಬಂದಿದೆ ಬರಬೇಡಿ ಎಂದು ಹೇಳುತ್ತಿದ್ದ ಎಂದು ಆತನ ಮಗ ಸ್ಥಳೀಯ ಮಾಧ್ಯಮದವರಿಗೆ ತಿಳಿಸಿದ್ದಾನೆ. ಕುಟುಂಬದವರ ಮಾತಿಗೆ ಬಗ್ಗದ ಬಾಲಕೃಷ್ಣಯ್ಯ, ಸೋಮವಾರ ಬೆಳಿಗ್ಗೆ ತನ್ನ ಹೊಲದ ಕಡೆಗೆ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆತನಿಗೆ ಕೊರೊನಾ ಇರಲಿಲ್ಲ
ಈ ಕುರಿತು ಚಿತ್ತೂರ ಜಿಲ್ಲಾ ವೈದ್ಯಾಧಿಕಾರಿ ಡಾ ಎಂ ಚೆಂಚುಲಯ್ಯಾ ಸುದ್ದಿಮಾಧ್ಯಮಗಳ ಜೊತೆ ಮಾತನಾಡಿದ್ದು, ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತರು ಕಂಡು ಬಂದಿಲ್ಲ. ಈ ಬಗ್ಗೆ ಜನರಿಗೆ ವ್ಯಾಪಕವಾದ ಜಾಗೃತಿ ಮೂಡಿಸುತ್ತಿದ್ದೇವೆ. ರೈತನ ಬಗ್ಗೆ ರುಯ್ಯಾ ಆಸ್ಪತ್ರೆಯಲ್ಲಿ ವಿಚಾರಿಸಿದ್ದೇವೆ. ಆ ವ್ಯಕ್ತಿಗೆ ಕೊರೊನಾ ಇದ್ದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications