'ಆಂಧ್ರಕ್ಕೆ ಸಿಎಂ ಮಾಡಿದ್ದರೆ ಕಾಂಗ್ರೆಸ್ ಗೆ 1,500 ಕೋಟಿ ಕೊಡಲು ಜಗನ್ ಸಿದ್ಧರಿದ್ದರು'
ಅಮರಾವತಿ, ಮಾರ್ಚ್ 27: ವೈ.ಎಸ್.ರಾಜಶೇಖರ ರೆಡ್ಡಿ ಅವರ ದುರ್ಮರಣದ ನಂತರ ತಮ್ಮನ್ನು ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಗೆ ಜಗನ್ ಮೋಹನ್ ರೆಡ್ಡಿ 1,500 ಕೋಟಿ ರುಪಾಯಿ ನೀಡುವ ಪ್ರಸ್ತಾವ ಇಟ್ಟಿದ್ದರು ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪರವಾಗಿ ಪ್ರಚಾರ ಮಾಡುವ ವೇಳೆ, ನಾಯ್ಡು ರಾಜಕೀಯ ವಿರೋಧಿ- ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ವತಃ ಚಂದ್ರಬಾಬು ನಾಯ್ಡು ಕೂಡ ಜಗನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದು, ಮೂವತ್ತೊಂದು ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ಇವೆ ಎಂದು ಕಳೆದ ವಾರ ಹೇಳಿದ್ದಾರೆ.
ತೆಲಂಗಾಣದಲ್ಲಿ ಸ್ಪರ್ಧಿಸದಿರಲು ನಾಯ್ಡು ಅವರ ಟಿಡಿಪಿ ನಿರ್ಧಾರ!
"ಆಂಧ್ರ ವಿಭಜನೆಗೂ ಮುನ್ನ ಒಂದು ದಿನ ನನ್ನ ಮನೆಗೆ ಜಗನ್ ಬಂದಿದ್ದರು. ನಾನು ಆ ದಿನ ಅವರು ಏನು ಹೇಳಿದ್ದರು ಎಂಬುದನ್ನು ನೆನಪಿಸಲು ಇಷ್ಟ ಪಡ್ತೀನಿ: ಅವರನ್ನು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಮಾಡುವುದಾದರೆ 1500 ಕೋಟಿ ರುಪಾಯಿ ನೀಡಲು ಸಿದ್ಧರಿದ್ದರು" ಎಂದು ಕಡಪಾದಲ್ಲಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಜಗನ್ ರ ತವರು ನೆಲ ಕಡಪಾದಲ್ಲೇ ಇಂಥ ಆರೋಪ ಮಾಡಿದ್ದಾರೆ.
"ಎಲ್ಲಿಂದ ಆ ಹಣ ಬಂತು? ಭೂಮಿ ಒಳಗೆ ಏನಾದರೂ ನಿಧಿ ಇಟ್ಟುಕೊಂಡಿದ್ದಾರಾ" ಎಂದು ಮಾಜಿ ಮುಖ್ಯಮಂತ್ರಿಯೂ ಆದ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ. ಆ ಹಣ ಕೊಳ್ಳೆ ಹೊಡೆದಿರುವುದೇ ಆಗಿರಬೇಕು ಎಂದು ಆರೋಪ ಮಾಡಿದ್ದಾರೆ. ಇಂಥ ವ್ಯಕ್ತಿ ತನ್ನ ಭವಿಷ್ಯಕ್ಕಾಗಿ ಯೋಚಿಸಬಹುದೇ ಹೊರತು ನಿಮಗಾಗಿ ಅಲ್ಲ ಎಂದಿದ್ದಾರೆ.