ತಿರುಪತಿಯ 15 ಅರ್ಚಕರಿಗೆ ಕೋವಿಡ್ -19 ಸೋಂಕು
ಅಮರಾವತಿ, ಜುಲೈ 16 : ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ತಿರುಪತಿ ದೇವಾಲಯದ 15 ಅರ್ಚಕರಿಗೆ ಸೋಂಕು ತಗುಲಿದ್ದು ಖಚಿತವಾಗಿದ್ದು, ಕ್ವಾರಂಟೈನ್ನಲ್ಲಿದ್ದಾರೆ. ದೇವಾಲಯದಲ್ಲಿ ದರ್ಶನ ಮಾತ್ರ ನಿಂತಿಲ್ಲ.
Recommended Video
ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ಯ 50 ಅರ್ಚಕರ ಪೈಕಿ 15 ಅರ್ಚಕರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇನ್ನೂ 25 ಅರ್ಚಕರ ವರದಿಗಾಗಿ ಕಾಯಲಾಗುತ್ತಿದೆ. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ.
ದೇವಾಲಯದ ಪ್ರಧಾನ ಅರ್ಚಕರಾಗಿದ್ದ ರಮಣ ದೀಕ್ಷಿತುಲು ಟ್ವೀಟ್ ಮಾಡಿದ್ದಾರೆ. "50 ಅರ್ಚಕರ ಪೈಕಿ 15 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಕ್ವಾರಂಟೈನ್ ಆಗಿದ್ದಾರೆ. ಟಿಟಿಡಿಯ ಅಧಿಕಾರಿಗಳು ದರ್ಶನವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ" ಎಂದು ಹೇಳಿದ್ದಾರೆ.

ಟಿಟಿಡಿಯ 91 ಸಿಬ್ಬಂದಿಗಳಿಗೆ ಇದುವರೆಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಆದ್ದರಿಂದ, ದೇವಾಲಯಲ್ಲಿ ಕೆಲವು ದಿನಗಳ ಕಾಲ ದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಸಿಬ್ಬಂದಿಗಳ ಪರವಾಗಿ ಅನಿಲ್ ಕುಮಾರ್ ಸಿಂಘಾಲ್ಗೆ ಪತ್ರವನ್ನು ಬರೆಯಲಾಗಿದೆ.
ಕಳೆದ ಕೆಲವು ದಿನಗಳಿಂದ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ತಿರುಪತಿ ಭಾಗದಲ್ಲಿ 1000ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ದೇವಾಲಯದಲ್ಲಿ ದರ್ಶನ ಸ್ಥಗಿತಗೊಳಿಸಿ ಮತ್ತು ಸಿಬ್ಬಂದಿಗಳಿಗೆ ಪಾಳಿ ಆಧಾರದಲ್ಲಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಲಾಗಿದೆ.
ಮಾರ್ಚ್ನಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದಾಗ ತಿರುಪತಿ ದೇವಾಲಯ ಸಂಪೂರ್ಣ ಬಂದ್ ಆಗಿತ್ತು. ಜೂನ್ 11ರಿಂದ ಮತ್ತೆ ದರ್ಶನವನ್ನು ಆರಂಭಿಸಲಾಗಿದೆ. ಪ್ರತಿದಿನ 12 ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.












Click it and Unblock the Notifications