ಗುಜರಾತ್ನಲ್ಲಿ ಮುಂದುವರೆದ ಮಳೆಯ ಅರ್ಭಟ: 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಅಹಮದಾಬಾದ್ ಜುಲೈ 15: ಭಾರೀ ಮಳೆಯಿಂದಾಗಿ ಗುಜರಾತ್ನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸೂರತ್, ಜುನಾಗಢ್, ಗಿರ್, ಭಾವನಗರ, ತಾಪಿ, ದಂಗ್, ವಲ್ಸಾದ್ ಮತ್ತು ನವಸಾರಿ ಸೇರಿದಂತೆ 8 ಜಿಲ್ಲೆಗಳಲ್ಲಿ ಭಾರೀ ಮಳೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
2 ಅಣೆಕಟ್ಟುಗಳಿಂದ ನೀರು ಉಕ್ಕಿ ಹರಿಯುತ್ತಿರುವುದರಿಂದ ರಾಜ್ಯದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸದ್ಯ ಪರಿಹಾರ ಮತ್ತು ರಕ್ಷಣಾ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ.
ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ
ಅತಿವೃಷ್ಟಿಯಿಂದ ನಲುಗುತ್ತಿರುವ ಗುಜರಾತ್ನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೂ ಮಾತುಕತೆ ನಡೆಸಿದ್ದು, ಎರಡು ದಿನಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಪ್ರವಾಹದ ಕುರಿತು ವೈಮಾನಿಕ ಸಮೀಕ್ಷೆ ಮಾಡಿದ್ದರು. ಸದ್ಯ ಭಾರೀ ಮಳೆಯಿಂದಾಗಿ ಗೋದಾವರಿ ನದಿ ಉಕ್ಕಿ ಹರಿಯುತ್ತಿದೆ. ಗುಜರಾತ್ನಲ್ಲಿ ಇನ್ನೂ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ.
ನವಸಾರಿ, ವಲ್ಸಾದ್, ಡೋಂಗ್ ಮತ್ತು ಛೋಟಾ ಉದಯ್ಪುರ ಪ್ರದೇಶಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಗುಜರಾತ್ನಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ಅಂಕಿ ಅಂಶದ ಪ್ರಕಾರ, ಭಾರೀ ಮಳೆಯಿಂದಾಗಿ ಜೂನ್ 1 ರಿಂದ 63 ಜನರು ಸಾವನ್ನಪ್ಪಿದ್ದಾರೆ.
ಭಾರೀ ಮಳೆ ನಿರೀಕ್ಷೆ; ಈ ಸಮಯದಲ್ಲಿ ಮುಂಗಾರು ದೇಶದ ಎಲ್ಲಾ ರಾಜ್ಯಗಳಲ್ಲಿ ಚುರುಕಾಗಿದೆ. ಇದರಿಂದಾಗಿ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿವೆ. ಗುಜರಾತಿನ ಹೊರತಾಗಿ ಮಹಾರಾಷ್ಟ್ರದಲ್ಲಿಯೂ ಮಳೆಯಾಗುತ್ತಿದೆ.
ಮತ್ತೊಂದೆಡೆ ಯುಪಿ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್ನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರಾಖಂಡದ ಹರಿದ್ವಾರ, ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್ ಮತ್ತು ಅಲ್ಮೋರಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ.
ಕರ್ನಾಟಕದಲ್ಲಿ ಮಳೆ; ಕರ್ನಾಟಕದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದೆ. ಮುಂಗಾರು ಮಳೆ ರಾಜ್ಯದ ವಿವಿಧೆಡೆ ಜುಲೈ 19ರವರೆಗೂ ಮುಂದುವರಿಯಲಿದೆ. ಈ ಪೈಕಿ ಜುಲೈ 15 ಮತ್ತು 16 ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅತಿ ಭಾರೀ ಮಳೆಯಾಗಲಿದೆ.
ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು ಮುಂದಿನ ನಾಲ್ಕು ದಿನಗಳವರೆಗೂ (ಜುಲೈ 18) ಇದೇ ವಾತಾವರಣ ಮುಂದುವರೆಯಲಿದೆ.
ಈ ವೇಳೆ ವಾತಾವರಣದಲ್ಲಿ ತಾಪಮಾನದ ಪ್ರಮಾಣ ಕಡಿಮೆ ಇರಲಿದೆ. ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.