ಇಸ್ಕಾನ್ ಕಾಂಪೌಂಡ್ ಕುಸಿತ- ಸೈನಿಕನ 'ಆಕ್ಸಿಡೆಂಟ್': 7 ಬಲಿ
ಬೆಂಗಳೂರು, ಸೆ.10: ಗಣೇಶನ ಹಬ್ಬದಂದು ರಾಜಧಾನಿಯಲ್ಲಿ 2 ಅನಾಹುತಗಳು ನಡೆದಿವೆ. ಎರಡೂ ಮನುಷ್ಯ ನಿರ್ಮಿತ ಅವಘಡಗಳೇ.
ಇಸ್ಕಾನ್ ದೇಗುಲದಲ್ಲಿ ಅವಘಡ: ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯ ವಸಂತಪುರ ಪ್ರದೇಶದಲ್ಲಿ ಭವ್ಯ ಇಸ್ಕಾನ್ ದೇಗುಲ ನಿರ್ಮಾಣವಾಗುತ್ತಿದೆ. ಅಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಬಾಲಕಿಯರೂ ಸೇರಿದಂತೆ ಒಟ್ಟು 3 ಮಂದಿ ಮೃತಪಟ್ಟಿದ್ದಾರೆ.
5 ಲಕ್ಷ ರೂ. ಪರಿಹಾರ ಪ್ರಕಟ: ಮೃತರ ಕುಟುಂಬಕ್ಕೆ ಇಸ್ಕಾನ್ ತಲಾ 5 ಲಕ್ಷ ರೂ ಮತ್ತು ಬಿಬಿಎಂಪಿ 1 ಲಕ್ಷ ರೂ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರ ಪ್ರಕಟಿಸಲಾಗಿದೆ.

ಅವಶೇಷಗಳಲ್ಲಿ ಸಿಲುಕಿದ್ದವರ ಪೈಕಿ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ. ಇಸ್ಕಾನ್ ದೇಗುಲದ ಆವರಣದಲ್ಲಿ ನಿರ್ಮಿಸುತ್ತಿರುವ ಈ ಗೋಡೆ ನಾಲ್ಕು ಮನೆಗಳ ಮೇಲೆ ಉರುಳಿಬಿದ್ದು ಹೆಚ್ಚು ದುರಂತ ಸಂಭವಿಸಿದೆ.
ಸೈನಿಕನ 'ಆಕ್ಸಿಡೆಂಟ್': ಇನ್ನು, ಕೆಂಗೇರಿ ಬಳಿ ಕುಡಿದ ಮತ್ತಿನಲ್ಲಿ ಸೇನಾ ವಾಹನವನ್ನು ಚಲಾಯಿಸಿದ ಪರಿಣಾಮ ವಾಹನವು ಪಾದಚಾರಿ ಮತ್ತು ಆಟೋ ರಿಕ್ಷಾ ಮೇಲೆ ಹರಿದು ಒಬ್ಬ ಮಹಿಳೆ ಸೇರಿದಂತೆ 4 ಮಂದಿ ಅಸುನೀಗಿದ್ದಾರೆ. ಸೈನಿಕ ಬೇಜವಾಬ್ದಾರಿಯಿಂದಾಗಿ ಈ ಅಪಘಾತ ಸಂಭವಿಸಿದ್ದು, ಸ್ಥಳೀಯರನ್ನು ರೊಚ್ಚಿಗೆಬ್ಬಿಸಿದೆ. ಸುಬ್ರಮಣ್ಯಪುರ ಪೊಲೀಸರು ಸೇನಾ ವಾಹನವನ್ನು ವಶಕ್ಕೆ ತೆಗೆದುಕೊಂಡು ಚಾಲಕನನ್ನು ಬಂಧಿಸಿದ್ದಾರೆ.
ಮೈಸೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸೇನಾ ಲಾರಿ ಕೆಂಗೇರಿ ಉಪನಗರ ವ್ಯಾಪ್ತಿಯ ದೊಡ್ಡಬೆಲೆ ಕ್ರಾಸ್ ಬಳಿಯ ತಿರುವೊಂದನ್ನು ದಾಟಿ ಮುಂದೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.












Click it and Unblock the Notifications