ಜೈಲಿನಲ್ಲಿದ್ದು ಚುನಾವಣೆಯಲ್ಲಿ ಸ್ಪರ್ಧೆಗೆ ಓಕೆ
ನವದೆಹಲಿ, ಸೆ.7: ಜೈಲಿನಲ್ಲಿದ್ದರೆ ಚುನಾವಣೆ ಸ್ಪರ್ಧಿಸುವುದು ಹೇಗೆ? ಎಂದು ಚಿಂತಿಸುತ್ತಿದ್ದ 'ರಾಜಕಾರಣಿ' ಗಳಿಗೆ ನಿರಾಳವಾದ ಸುದ್ದಿ ಸಿಕ್ಕಿದೆ. ಜೈಲು ಹಕ್ಕಿಗಳಾದ ರಾಜಕಾರಣಿಗಳು 'ಜೈಲಿಂದ ಚುನಾವಣೆ ಸ್ಪರ್ಧಿಸುವಂತಿಲ್ಲ' ಎಂಬ ಸುಪ್ರೀಂಕೋರ್ಟ್ನ ತೀರ್ಪು ಸಂಸತ್ತಿನಲ್ಲಿ ಮುರಿದು ಬಿದ್ದಿದೆ.
ಜೈಲಿಂದ ಸ್ಪರ್ಧಿಸುವಂತಿಲ್ಲ ಎಂಬ ತೀರ್ಪನ್ನು ಪಕ್ಕಕ್ಕಿಡುವ ಮಸೂದೆಗೆ ಸಂಸತ್ ಒಪ್ಪಿಗೆ ನೀಡಿದ್ದು, ಈ ಮೂಲಕ ತೀರ್ಪು ಬೆಲೆ ಕಳೆದುಕೊಂಡಿದೆ. ಆ.27 ರಂದು ರಾಜ್ಯಸಭೆ ಒಪ್ಪಿಗೆ ನೀಡಿದ್ದ ಪ್ರಜಾಪ್ರಾತಿನಿಧಿಕ ತಿದ್ದುಪಡಿ ಕಾಯ್ದೆಗೆ ಶುಕ್ರವಾರ ಲೋಕಸಭೆ ಕೂಡ ಅನುಮತಿ ನೀಡಿತು. ಮಸೂದೆ ಮಂಡನೆಯಾದ ನಂತರ ಕೇವಲ 15 ನಿಮಿಷಗಳಲ್ಲಿ ಚರ್ಚೆ ನಡೆದು ಈ ಮಸೂದೆ ಅಂಗೀಕಾರವಾಗಿದೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅದರ ಪಾಲಿಗೆ ಸರಿಯಾದರೆ, ಸಂಸತ್ ಪಾಲಿಗೆ ಇದೇ ಸರಿ. ಕೆಲವೊಮ್ಮೆ ಕೋರ್ಟ್ನ ತೀರ್ಪುಗಳನ್ನು ಸರಿಪಡಿಸುವ ಜವಾಬ್ದಾರಿ ಸಂಸತ್ ಮೇಲಿರುತ್ತದೆ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

ಕಳಂಕಿತ ಸದಸ್ಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ನ್ಯಾಯಾಲಯದ ಆದೇಶವನ್ನು ಪುನರ್ ಪರಿಶೀಲಿಸಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು.
ಪೊಲೀಸ್ ಕಸ್ಟಡಿಯಲ್ಲಿದ್ದರೆ ಅಥವಾ ಜೈಲಿನಲ್ಲಿದ್ದರೆ ಅಂಥ ವ್ಯಕ್ತಿಗೆ ಮತದಾನ ಹಾಗೂ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆಗಸ್ಟ್ 22ರಂದು ಕೇಂದ್ರ ಸಚಿವ ಸಂಪುಟ ಸಭೆ ಕಳಂಕಿತ ಜನಪ್ರತಿನಿಧಿಗಳು ತಮ್ಮ ಸದಸ್ಯತ್ವವನ್ನು ಉಳಿಸಿಕೊಳ್ಳುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ನಿರ್ಣಯ ಕೈಗೊಂಡಿತ್ತು.
ಸಂಪುಟ ಸಭೆಯ ನಿರ್ಣಯದ ಪ್ರಕಾರ, ಜನಪ್ರತಿನಿಧಿ ಅಪರಾಧಿಯೆಂದು ತೀರ್ಪು ಪ್ರಕಟಗೊಂಡರೂ ಮೇಲ್ಮನವಿ ಸಲ್ಲಿಸಿ ಮೇಲ್ದರ್ಜೆ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುವವರೆಗೂ ಸದಸ್ಯತ್ವ ಊರ್ಜಿತಗೊಳ್ಳುವ ಸಾಧ್ಯತೆಗಳಿತ್ತು.
ಪುಟ ಸಭೆಯ ಬಳಿಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ ಈ ಹಿಂದೆ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿರುವುದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದೆ. (ಪಿಟಿಐ)












Click it and Unblock the Notifications