ಇಡ್ಲಿ-ಸಾಂಬಾರ್ ಬೆಳಗ್ಗಿನ ತಿಂಡಿಗೆ ಬೆಸ್ಟ್!
ಚೆನ್ನೈ, ಸೆ.4 : ದಕ್ಷಿಣ ಭಾರತದ ಜನರ ಬಹು ಪ್ರೀತಿಯ ಆಹಾರ ಇಡ್ಲಿ ಮತ್ತು ಸಾಂಬಾರ್ ಅತ್ಯುತ್ತಮ ಪೌಷ್ಟಿಕ ಆಹಾರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೂರು ಇಡ್ಲಿ ಒಂದು ಕಪ್ ಸಾಂಬಾರ್ ಹಾಗೂ ಒಂದು ಲೋಟ ಕಾಫಿ ಅತ್ಯಂತ ರುಚಿಕರ ಮತ್ತು ಪೌಷ್ಟಿಕ ಆಹಾರ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ.
ಮುಂಬೈನ ನಿರ್ಮಲ ನಿಕೇತನ ಹೋಮ್ ಸೈನ್ಸ್ ಕಾಲೇಜು ವಿದ್ಯಾರ್ಥಿಗಳು ನಡೆಸಿರುವ ಸಮೀಕ್ಷೆಯಲ್ಲಿ ಮೂರು ಇಡ್ಲಿ, ಒಂದು ಕಪ್ ಸಾಂಬಾರ್ ಮತ್ತು ಒಂದು ಲೋಟ ಕಾಫಿಗೆ ಅಗ್ರಸ್ಥಾನ ಸಿಕ್ಕಿದೆ. ಇದು ರುಚಿಕರ ಮತ್ತು ಪೌಷ್ಟಿಕವಾಗಿದೆ ಎಂಬ ಸತ್ಯ ಬಹಿರಂಗವಾಗಿದೆ.

ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ನಾಲ್ಕು ಮೆಟ್ರೋ ನಗರಗಳಲ್ಲಿ 8ರಿಂದ 40 ವರ್ಷದ ವಯೋಮಾನದವರನ್ನು ಸಂದರ್ಶಿಸಿ, ಇಂಡಿಯಾ ಬ್ರೇಕ್ ಫಾಸ್ಟ್ ಹ್ಯಾಬಿಟ್ಸ್ ಎಂಬ ಸಮೀಕ್ಷೆ ನಡೆಸಿ, ಇಡ್ಲಿಗೆ ಅಗ್ರ ಸ್ಥಾನ ನೀಡಲಾಗಿದೆ.
ಬೆಳಗ್ಗಿನ ತಿಂಡಿ ಸಾಕಷ್ಟು ಪ್ರೋಟಿನ್, ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ ಒಳಗೊಂಡಿರಬೇಕು. ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿರುವ ಇಡ್ಲಿಯಲ್ಲಿ ಅಧಿಕ ಪೋಷಕಾಂಶಗಳನ್ನು ಹೊಂದಿದ್ದು, ಬೆಳಗ್ಗಿನ ತಿಂಡಿಗೆ ಉತ್ತಮ ಆಯ್ಕೆಯಾಗಿದೆ ಎಂದು ಸಮೀಕ್ಷಾ ತಂಡದ ನಿರ್ದೇಶಕಿ ಮಾಲತಿ ಶಿವರಾಮಕೃಷ್ಣನ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಬೆಳಗ್ಗಿನ ಉಪಹಾರದಲ್ಲಿ ಮೈದಾಹಿಟ್ಟು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಾಗಿದ್ದು, ಪ್ರೋಟಿನ್ ಮತ್ತು ನಾರಿನ ಅಂಶ ಕಡಿಮೆ ಇದು ಸಮೀಕ್ಷೆ ತಿಳಿಸಿದೆ.
ದೆಹಲಿಯಲ್ಲಿ ಬೆಳಗ್ಗೆ ಪರೋಟವನ್ನು ಜನರು ಉಪಹಾರಕ್ಕಾಗಿ ಬಳಸುತ್ತಾರೆ. ಮುಂಬೈನಲ್ಲಿ ಹೆಚ್ಚಿನವರು ಬ್ರೇಡ್ ಸೇವಿಸುತ್ತಾರೆ. ಈ ಉಪಹಾರಗಳಲ್ಲಿ ಕಾರ್ಬೋಹೈಡ್ರೇಟ್ ಮಾತ್ರ ದೊರಕುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾರತೀಯರಲ್ಲಿ ಹೆಚ್ಚುತ್ತಿರುವ ಆರೋಗ್ಯದ ಕುರಿತಾದ ಕಾಳಜಿ ಆಹಾರ ಸೇವನೆ ವಿಚಾರದಲ್ಲಿ ಕಂಡುಬರುತ್ತಿಲ್ಲ. ನಾಲ್ವರಲ್ಲಿ ಒಬ್ಬರು ಬೆಳಗ್ಗಿನ ಉಪಹಾರ ಸೇವನೆ ಮಾಡುವುದಿಲ್ಲ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಅಕ್ಕಿ, ಉದ್ದುಗಳನ್ನು ಒಳಗೊಂಡಿರುವ ಇಡ್ಲಿ ಮತ್ತು ಸಾಂಬರ್ ನಲ್ಲಿರುವ ತರಕಾರಿ ಜನಪ್ರಿಯ ಮತ್ತು ಪರಿಪೂರ್ಣ ಆಹಾರ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಳಸುವ ರಾಗಿ ಸಹ ಬೆಳಗಿನ ಉಪಹಾರಕ್ಕೆ ಒಳ್ಳೆಯದು ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications