ಯಡಿಯೂರಪ್ಪ ಕರೆತರುವ ಹೊಣೆ ಮೋದಿ ಹೆಗಲಿಗೆ!
ಬೆಂಗಳೂರು, ಸೆ.3 : ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಒಪ್ಪಿದರೆ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ಹಾದಿ ಸುಗಮವಾಗಲಿದೆ. ಅಡ್ವಾಣಿ ಜೊತೆ ಮಾತುಕತೆ ನಡೆಸುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸದಾನಂದ ಗೌಡ ನೇತೃತ್ವದ ರಾಜ್ಯ ಬಿಜೆಪಿ ನಾಯಕರಿಗೆ ಭರವಸೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಬಸವರಾಜ ಬೊಮ್ಮಾಯಿ ಸೋಮವಾರ ಅಹಮದಾಬಾದ್ಗೆ ತೆರಳಿ ಸಂಜೆ ನರೇಂದ್ರ ಮೋದಿ ಅವರೊಂದಿಗೆ ರಾಜ್ಯ ರಾಜಕಾರಣ ಕುರಿತು ಮಾತುಕತೆ ನಡೆಸಿದರು.

ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ಚರ್ಚಿಸಿದರು. ರಾಜ್ಯ ಮುಖಂಡರ ಮಾತುಕತೆ ಬಳಿಕ, ಯಡಿಯೂರಪ್ಪ ಕರೆತರುವ ಕುರಿತು ಎಲ್.ಕೆ.ಅಡ್ವಾಣಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಂದಿನ ವಾರ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ವಾಪಸ್ ಕರೆತರುವ ಬಗ್ಗೆ ಪ್ರಸ್ತಾಪಿಸುತ್ತೇನೆ. ಸಾಧ್ಯವಾದರೆ ಆ ಸಭೆಗೆ ಕರ್ನಾಟಕದ ಬಿಜೆಪಿ ನಾಯಕರನ್ನೂ ಆಹ್ವಾನಿಸಲು ಪ್ರಯತ್ನಿಸುತ್ತೇನೆ ಎಂದು ಮೋದಿ ಸದಾನಂದ ಗೌಡರಿಗೆ ತಿಳಿಸಿದ್ದಾರೆ.
ಷರತ್ತು ಹಾಕಿದರೆ ವಿಳಂಬ : ಅಡ್ವಾಣಿ ಒಪ್ಪಿದ ನಂತರ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿದರೆ ಎಲ್ಲವೂ ಸುಗಮವಾಗಲಿದೆ. ಆದರೆ, ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟರೆ ಬಿಜೆಪಿಗೆ ಮರಳುವುದು ವಿಳಂಬವಾಗಲಿದೆ.
ವಿಧಾನಸಭೆ ಚುನಾವಣೆ ನಂತರ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಆದ್ದರಿಂದ, ಬಿಜೆಪಿಯ ಹಲವು ನಾಯಕರು ಯಡಿಯೂರಪ್ಪ ಮರಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದ್ದರಿಂದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಯಡಿಯೂರಪ್ಪ ಮರಳುವ ಕುರಿತು ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಬೇಕು ಎಂದು ಡಿ.ವಿ.ಸದಾನಂದ ಗೌಡರ ತಂಡ ಮನವಿ ಮಾಡಿತು.
ಯಡಿಯೂರಪ್ಪ ವಾಪಸಾತಿಯನ್ನು ವಿಳಂಬ ಮಾಡಿದಷ್ಟೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬ ಅಂಶವನ್ನು ಸದಾನಂದಗೌಡರು ಮೋದಿ ಅವರ ಗಮನಕ್ಕೆ ಸ್ಪಷ್ಟವಾಗಿ ತಂದಿದ್ದಾರೆ. ಯಡಿಯೂರಪ್ಪ ಕೆಜೆಪಿ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಮೋದಿ ಭೇಟಿ ಮುಂದೂಡಿಕೆ : ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಅಕ್ಟೋಬರ್ ಗೆ ಆಗಮಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 22 ಮತ್ತು 23 ರಂದು ಮೋದಿ ಭೇಟಿ ನಿಗದಿಯಾಗಿತ್ತು. ಆದರೆ, ಯಡಿಯೂರಪ್ಪ ಕರೆತರುವ ವಿಚಾರ ಸ್ಪಷ್ಟವಾದ ಬಳಿಕ ರಾಜ್ಯಕ್ಕೆ ಆಗಮಿಸುವಂತೆ ಡಿವಿಎಸ್ ನೇತೃತ್ವದ ತಂಡ ಮೋದಿ ಅವರಿಗೆ ಮನವಿ ಮಾಡಿದೆ.












Click it and Unblock the Notifications