KSRTC: 1ಸಾವಿರ ರೂಗೆ ಮೈಸೂರು ದಸರಾ ನೋಡಬನ್ನಿ
ಬೆಂಗಳೂರು, ಸೆಪ್ಟೆಂಬರ್ 3: ವಿಶ್ವಪ್ರಸಿದ್ಧ ಮೈಸೂರು ದಸರಾವನ್ನು ಕಣ್ತುಂಬ ನೋಡಿಕೊಂಡು ಬರಲು ಬೇರೆ ಬೇರೆ ಊರಿನ ಜನರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಕೇವಲ ಒಂದು ಸಾವಿರ ರೂಪಾಯಿಗೆ ಮೈಸೂರು ದಸರಾ ನೋಡಬನ್ನಿ ಎಂದು KSRTC ಆಹ್ವಾನ ನೀಡಿದೆ.
ದಸರಾ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಕ್ಟೋಬರ್ 2 ರಿಂದ 20ರವರೆಗೆ ಮೈಸೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಎರಡು ರೀತಿಯ ಪ್ರವಾಸ ಪ್ಯಾಕೇಜ್ ಆಯೋಜಿಸಿದೆ.
ಪ್ರತಿದಿನ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ಹೊರಡಲಿರುವ ಈ ಬಸ್ಸುಗಳು ಮೈಸೂರು ಹಾಗೂ ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ದು ಅಂದೇ ರಾತ್ರಿ ವೇಳೆ ಬೆಂಗಳೂರಿಗೆ ವಾಪಸಾಗಲಿದೆ.

ಎಲ್ಲಿಗೆಲ್ಲಾ ಕರೆದುಕೊಂಡು ಹೋಗುತ್ತದೆ?: ಬೆಳಗ್ಗೆ 6 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು 6.10ಕ್ಕೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಲಿದೆ. 6.15ಕ್ಕೆ ಅಲ್ಲಿಂದ ಹೊರಡಲಿದ್ದು, ನಂತರ ದರಿಯಾ ದೌಲತ್, ಟಿಪ್ಪೂಸುಲ್ತಾನ್ ಅರಮನೆ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಅಲ್ಲಿಂದ ಚಾಮುಂಡಿ ಬೆಟ್ಟ, ದೇವರ ದರ್ಶನ, ಮೈಸೂರು ಮೃಗಾಲಯ, ಅರಮನೆ, ಕೆಆರ್ ಎಸ್ ನಲ್ಲಿ ದೀಪಾಲಂಕೃತ ಬೃಂದಾವನ ಮುಗಿಸಿಕೊಂಡು ರಾತ್ರಿ 11.15ಕ್ಕೆ ವಾಪಸ್ ಬೆಂಗಳೂರು ತಲುಪಲಿದೆ.
ಅದೇ ರೀತಿ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಬೆಳಗ್ಗೆ 6.30ಕ್ಕೆ ಹೊರಟು ಈ ಎಲ್ಲಾ ಸ್ಥಳಗಳಿಗೆ ತೆರಳಿ ರಾತ್ರಿ 11.45ಕ್ಕೆ ವಾಪಸ್ ಶಾಂತಿನಗರ ಬಸ್ ನಿಲ್ದಾಣ ತಲುಪಲಿದೆ.
ಎರಡೂ ಪ್ರವಾಸಿ ಪ್ಯಾಕೇಜಿಗೆಗೆ ವಯಸ್ಕರಿಗೆ 1 ಸಾವಿರ ಹಾಗೂ ಮಕ್ಕಳಿಗೆ 800 ರೂ ದರ ನಿಗದಿಪಡಿಸಲಾಗಿದೆ.
ಮದ್ದೂರು ಸಮೀಪದ ಕಾಮತ್ ಉಪಚಾರ್ ಹೋಟೆಲಿನಲ್ಲಿ ಬೆಳಗಿನ ಉಪಹಾರ, ಮೈಸೂರಿನಲ್ಲಿ ಮಧ್ಯಾಹ್ನದ ಊಟ ಹಾಗೂ ಮದ್ದೂರಿನ ಕಾಮತ್ ಉಪಚಾರ್ ನಲ್ಲಿ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಬಸ್ ಹೊರಡುವ 20 ನಿಮಿಷ ಮುಂಚಿತವಾಗಿ ನಿಲ್ದಾಣಕ್ಕೆ ಬಂದರೆ ಪ್ರಯಾಣ ಸುಖಕರವಾಗಲಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.












Click it and Unblock the Notifications