ಕಾರಿನಲ್ಲಿ ವಿಷ ಸೇವಿಸಿ ಅಸು ನೀಗಿದ ಕುಟುಂಬ

ಮಗುವಿಗೂ ವಿಷವುಣಿಸಿ ತಾವೂ ವಿಷಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಸಮೀಪ ಚಿಕ್ಕಸನ್ನೆ ಗೇಟ್ ಬಳಿ ನಡೆದಿದೆ. ದಂಪತಿ ತಮ್ಮ ಕಾರಿನೊಳಗೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಮೃತರನ್ನು ಹನುಮಂತನಗರದ ನಿವಾಸಿಗಳಾದ ಸಂದೀಪ್ (38), ಆರತಿ ಅಲಿಯಾಸ್ ಅರ್ಚನಾ (36), ದೀಪಿಕಾ ಅಲಿಯಾಸ್ ಅದಿತಿ (7) ಎಂದು ಗುರುತಿಸಲಾಗಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯವರಾದ ಇವರು ಗಾಂಧಿ ಬಜಾರ್ ನಲ್ಲಿ ಜ್ಯುವೆಲರಿ ಅಂಗಡಿ ಇಟ್ಟುಕೊಂಡಿದ್ದಾರೆ. ಕಳೆದ ರಾತ್ರಿ 10.30ರ ಸುಮಾರಿನಲ್ಲಿ ಸಂದೀಪ್ ಪತ್ನಿ ಹಾಗೂ ಮಗಳೊಂದಿಗೆ ಕಾರಿನಲ್ಲಿ ಹೊರಟು ನಗರ ಸುತ್ತಾಡಿದ್ದಾರೆ. ಕಾರಿನಲ್ಲಿ ಸುತ್ತಾಡಿ ನಗರದ ಹೊರ ವಲಯದ ಹೆದ್ದಾರಿಗೆ ಬಂದು ಕಾರು ನಿಲ್ಲಿಸಿ ವಿಷ ಸೇವಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಳಿವು ಕೊಟ್ಟ ಸಂದೇಶ: ತಡರಾತ್ರಿ ತನ್ನ ಸ್ನೇಹಿತ ಬಾಬು ಎಂಬುವರಿಗೆ 'ವೆರಿ ಸ್ಸಾರಿ. ಲಾಸ್ಟ್ ಮೈ ಲೈಫ್' ಎಂದು ಎಸ್ ಎಂಎಸ್ ಕಳುಹಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ದೇವನಹಳ್ಳಿ ಬಳಿ ಇರುವುದಾಗಿ ಮತ್ತೊಂದು ಎಸ್ ಎಂಎಸ್ ಕಳುಹಿಸಿದ್ದಾರೆ. ತಡರಾತ್ರಿಯಾದ್ದರಿಂದ ಬಾಬು ಅವರು ಸಂದೇಶ ನೋಡಿಕೊಂಡಿಲ್ಲ.
ಬೆಳಗ್ಗೆ ಎದ್ದಾಗ ಎಸ್ ಎಂಎಸ್ ನೋಡಿ ಗಾಬರಿಯಿಂದ ಸಂದೀಪ್ ಅವರ ಮನೆ ಬಳಿಗೆ ಬಂದಾಗ ಬೀಗ ಹಾಕಿದ್ದನ್ನು ಕಂಡು ಬಾಬು ಅವರು ಸ್ನೇಹಿತನ ತಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಎಸ್ ಎಂಎಸ್ ಆಧಾರದ ಮೇಲೆ ಇಬ್ಬರೂ ಕಾರಿನಲ್ಲಿ ಸಂದೀಪ್ ನನ್ನು ಹುಡುಕಿಕೊಂಡು ಹೋಗುವಾಗ ದೇವನಹಳ್ಳಿ ಬೈಪಾಸ್ ಬಳಿಯ ಚಿಕ್ಕಸಣ್ಣಗೇಟ್ ಸಮೀಪ ಸ್ವಿಪ್ಟ್ ಕಾರು ಕಂಡಿದೆ. ಸಂದೀಪ್ ಅವರದೇ ಕಾರು ಎಂದು ಗುರುತಿಸಿದ ಇಬ್ಬರೂ ಸಮೀಪ ಹೋಗಿ ನೋಡಿದಾಗ ಹಿಂಬದಿ ಸೀಟ್ ನಲ್ಲಿ ದಂಪತಿ ಹಾಗೂ ಮಗು ವಿಷ ಸೇವಿಸಿ ಸಾವನ್ನಪ್ಪಿರುವುದು ಕಂಡು ಬಂದಿದೆ.
ಈ ಬಗ್ಗೆ ದೇವನಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರಿನಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ಸಂದೀಪ್ ನಮ್ಮ ಸಾವಿಗೆ ಯಾರೂ ಕಾರಣರಲ್ಲ. ವೆರಿ ಸ್ಸಾರಿ. ಲಾಸ್ಟ್ ಮೈ ಲೈಫ್ ಎಂದು ಬರೆದಿದ್ದಾರೆ. ಸ್ನೇಹಿತನಿಗೆ ಕಳೆದ ರಾತ್ರಿ ಕಳಿಸಿದ ಸಂದೇಶವನ್ನು ಪತ್ರದಲ್ಲೂ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹನುಮಂತನಗರ ಠಾಣಾಧಿಕಾರಿಗಳ ಸಂಪರ್ಕ ಪಡೆದು ತನಿಕೆ ಮುಂದುವರೆಸಿದ್ದಾರೆ.












Click it and Unblock the Notifications