ಕರ್ನಾಟಕದ ತುಣುಕು ಸುದ್ದಿಗಳತ್ತ ಇಣುಕು ನೋಟ

ಎಡಗೈಗೆ ಶಾಹಿ : ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಮತದಾರರ ಎಡಗೈನ ಕಿರುಬೆರಳಿಗೆ ಶಾಯಿ ಹಚ್ಚಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಒಂದರ ಹಿಂದೊಂದು ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಎಡಗೈಯ ಕಿರುಬೆರಳಿಗೆ ಶಾಯಿ ಹಚ್ಚಲು ಸೂಚಿಸಿದೆ.
ಬೆಂಗಳೂರು : ಮಾಜಿ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ನೆ.ಲ.ನರೇಂದ್ರಬಾಬು ಅವರ ಸಹೋದರ ನೆ.ಲ.ರವಿಶಂಕರ್ (49) ಮಂಗಳವಾರ ಮೃತಪಟ್ಟಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ ಮತ್ತು ಸಮಾಜ ಸೇವಕರಾಗಿ ರವಿಶಂಕರ್ ಕೆಲಸ ಮಾಡುತ್ತಿದ್ದರು.
ಗುಲ್ಬರ್ಗಾ : ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜೇವರ್ಗಿ ಅಗ್ನಿಶಾಮಕ ಠಾಣೆ ನೌಕರ ಶಿವಾನಂದ ಲೋನಿ(30) ಮಂಗಳವಾರ ಮೃತಪಟ್ಟಿದ್ದಾರೆ. ಅಫ್ಜಲ್ ಪುರ ತಾಲೂಕಿನ ನಿವಾಸಿಯಾದ ಇವರು ಆ.17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗುಲ್ಬರ್ಗಾ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಮಂಡ್ಯ : ಮಂಡ್ಯ ಜಿಲ್ಲೆ ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ ವಿರುದ್ಧ ನೀತಿ ಸಂಹಿತೆ ಆರೋಪ ಕೇಳಿ ಬಂದಿದೆ. ಅನುಮತಿ ಪಡೆಯದ ಕಾರಿನಲ್ಲಿ ಮಂಡ್ಯದಲ್ಲಿ ಸುತ್ತಾಡಿರುವ ರಮ್ಯಾ, ಮಂಗಳವಾರ ಮನೆ-ಮನೆ ಪ್ರಚಾರ ನಡೆಸಿದ್ದಾರೆ. ಆಂಧ್ರಪ್ರದೇಶ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ರಮ್ಯಾ ಮಂಡ್ಯಕ್ಕೆ ಆಗಮಿಸಿದ್ದರು. ಕಾರಿನ ಮೇಲೆ ಮಾಧ್ಯಮ ಎಂಬ ಸ್ಟಿಕ್ಕರ್ ಇತ್ತು. ಈ ಕಾರು ಬಳಸಲು ರಮ್ಯಾ ಚುನಾವಣಾ ಆಯೋಗದಿಂದ ಅನುಮತಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications