ಪ್ರಧಾನ ಮಂತ್ರಿ ಪಟ್ಟ ಒಲ್ಲೆ ಎಂದ ಮುಖ್ಯಮಂತ್ರಿ
ನವದೆಹಲಿ, ಆ.8: ಎನ್ ಡಿಎ ಜೊತೆಗಿನ ಹದಿನೇಳು ವರ್ಷಗಳ ಮೈತ್ರಿಯನ್ನು ಜೆಡಿಯು ಅಧಿಕೃತವಾಗಿ ಕಡಿದುಕೊಂಡ ಮೇಲೆ ನಿತೀಶ್ ಕುಮಾರ್ ನಡೆ ಬಗ್ಗೆ ಭಾರಿ ಕುತೂಹಲ ಉಂಟಾಗಿತ್ತು. ಇದಕ್ಕೆ ಉತ್ತರ ಗುರುವಾರ ಸಿಕ್ಕಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತೃತೀಯ ರಂಗ ಹಾಗೂ ಪ್ರಧಾನಿ ಹುದ್ದೆ ಅಭ್ಯರ್ಥಿ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ತಾವು ಪ್ರಧಾನಮಂತ್ರಿ ಹುದ್ದೆಯ ರೇಸ್ ನಲ್ಲಿ ಇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್' ಖಂಡಿತವಾಗಿಯೂ ನಾನು ಅಂಹ ದೊಡ್ಡ ಹುದ್ದೆ ರೇಸ್ ನಲ್ಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳ ತೃತೀಯ ರಂಗ ಸೇರುವುದನ್ನು ಖಂಡತುಂಡವಾಗಿ ತಳ್ಳಿ ಹಾಕದಿರುವ ನಿತೀಶ್ ಕುಮಾರ್, ತಾವು ಉನ್ನತವಾದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುವಷ್ಟು ಎತ್ತರಕ್ಕೆ ಬೆಳೆದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಹುದ್ದೆಯಲ್ಲಿ ತಾವು ಇದ್ದೀರ ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ ನನ್ನ ಹೆಸರು ಕೇಳಿಬಂದಿರುವುದು ನಿಜ. ಆದರೆ, ಅಷ್ಟು ಉನ್ನತ ಹುದ್ದೆಯನ್ನು ಅಲಂಕರಿಸುವಷ್ಟು ಎತ್ತರಕ್ಕೆ ಬೆಳೆದಿಲ್ಲ. ಆಸೆ ಬೇರೆ ಅರ್ಹತೆ ಬೇರೆ ಎಂದಿದ್ದಾರೆ. ಬಿಜೆಪಿ ನಾಯಕ ಯಶವಂತ್ ಸಿನ್ಹಾ ತಮ್ಮ ಕಾರ್ಯವೈಖರಿಯನ್ನು ಪ್ರಶಂಸಿಸಿರುವುದು ಅವರ ವೈಯಕ್ತಿಕವಾದ ವಿಷಯ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು ಎಂದು ನಿತೀಶ್ ಸ್ಪಷ್ಟಪಡಿಸಿದರು.
ತೃತೀಯ ರಂಗ ರಚನೆಯಾಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಲೋಕಸಭೆ ಚುನಾವಣೆ ನಂತರ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ತೃತೀಯ ರಂಗ, ಸಂಯುಕ್ತ ರಂಗ ಅಥವಾ ಎನ್ ಡಿಎ -II ಸ್ಥಾಪನೆಗೆ ತೃಣ ಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್ ಹಾಗೂ ಜೆಡಿಯುನ ನಿತೀಶ್ ಕುಮಾರ್, ಶರದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿರುವ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ಈ ಬಗ್ಗೆ ಈಗಳೇ ಏನು ಹೇಳಲಾರೆ ಎಂದಿದ್ದಾರೆ.
272 ಮ್ಯಾಜಿಕ್ ನಂಬರ್ ಪಡೆಯದಿದ್ದರೂ 150-160ರ ತನಕ ಸಂಸತ್ ಸ್ಥಾನ ಪಡೆಯುವ ಉತ್ಸಾಹ ಈಗ ಹಲವಾರು ಪ್ರಾದೇಶಿಕ ನಾಯಕರಲ್ಲಿ ಉಕ್ಕುತ್ತಿದೆ. ಮೋದಿ ವಿರುದ್ಧ ನಿತೀಶ್ ನಿಲ್ಲಿಸಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ, ನಿತೀಶ್ ಮಾತ್ರ ಪ್ರಧಾನಿ ಹುದ್ದೆ ಅಭ್ಯರ್ಥಿಯಾಗಲಾರೆ ಎಂದು ಹೇಳಿರುವುದು ಮತ್ತೆ ಗೊಂದಲಕ್ಕೆ ಈಡುಮಾಡಿದೆ.












Click it and Unblock the Notifications