ನಟಿ ರಮ್ಯಾ ಸಾಕುತಂದೆ ನಾರಾಯಣ್ ಹಠಾತ್ ಸಾವು

ಇಂದು ಶನಿವಾರ ನಟಿ ರಮ್ಯಾ ಅವರು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ವೇಳೆ ಆರ್ ಟಿ ನಾರಾಯಣ್ ಅವರು ಆಕೆಯ ಜತೆಗಿದ್ದರು. ನಾಮಪತ್ರ ಸಲ್ಲಿಕೆಯಾದ ನಂತರ ಜಿಲ್ಲಾಧಿಕಾರಿ ಕಚೇರಿಯಿಂದ ಹೊರಬರುತ್ತಿದ್ದಂತೆ ತೀವ್ರ ಹೃದಯಾಘಾತಕ್ಕೆ ಒಳಗಾದ ಆರ್ ಟಿ ನಾರಾಯಣ್ ಅವರನ್ನು ತಕ್ಷಣ ವಿಕ್ರಂ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಡಾ. ಜಿ ಪರಮೇಶ್ವರ್, ಸಿದ್ದರಾಮಯ್ಯ ಮುಂತಾದ ಗಣ್ಯರು ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿ ನಾರಾಯಣ್ ಅವರ ಅಂತಿಮ ದರ್ಶನ ಪಡೆದು, ರಮ್ಯಾಗೆ ಸಾಂತ್ವನ ಹೇಳಿದರು.
ಆರ್ ಟಿ ನಾರಾಯಣ್ ಅವರು ಬೆಂಗಳೂರಿನ ಹೋಟೆಲ್ ಉದ್ಯಮಿ. 73 ವರ್ಷದ ನಾರಾಯಣ್ ಅವರು ಮೂಲತಃ ಮೈಸೂರಿನವರು. ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರಿಗೆ ಅತ್ಯಾಪ್ತರು.
ರಂಜಿತಾ ಮಂಡ್ಯ ಬೋರಯ್ಯ ಅವರು ರಮ್ಯಾ (ದಿವ್ಯಸ್ಪಂದನ) ತಾಯಿ. ಮಂಡ್ಯದ ಶ್ರೀಮಂತ ಕುಟುಂಬದವರಾದ ರಂಜಿತಾ ಅವರು ತಮ್ಮ ಪುತ್ರಿಯ ಜತೆಗೂಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೈಸೂರಿಗೆ ಮೃತದೇಹ : ಆರ್ ಟಿ ನಾರಾಯಣ್ ಮೃತದೇಹವನ್ನು ಮಂಡ್ಯ ವಿಕ್ರಮ್ ಆಸ್ಪತ್ರೆಯಿಂದ ಮೈಸೂರಿನ ಒಂಟಿ ಕೊಪ್ಪಲ್ ನಲ್ಲಿರುವ ಅವರ ಸಹೋದರಿ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ. ರಮ್ಯಾ ಸಹ ಮೃತದೇಹದೊಂದಿಗೆ ಮೈಸೂರಿಗೆ ತೆರಳಿದ್ದು, ಅಂತ್ಯಕ್ರಿಯೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications