ರಾಜ್ಯ ಪುನರ್ ನಿರ್ಮಾಣಕ್ಕೆ 13 ಸಾವಿರ ಕೋಟಿ
ಡೆಹ್ರಾಡೂನ್, ಆ.1 : ಜಲ ಪ್ರವಾಹಕ್ಕೆ ತುತ್ತಾಗಿ ನಲುಗಿರುವ ಉತ್ತರಾಖಂಡ ರಾಜ್ಯದ ಪುನರ್ ನಿರ್ಮಾಣ ಹಾಗೂ ಪರಿಹಾರ ಕಾರ್ಯವನ್ನು ಕೈಗೊಳ್ಳಲು ಸುಮಾರು 13,800 ಕೋಟಿ.ರು. ಅನುದಾನವನ್ನು ನೀಡಬೇಕೆಂದು ಕೇಂದ್ರ ಸರ್ಕಾರ ವನ್ನು ಉತ್ತರಾಖಂಡ್ ಸರ್ಕಾರ ಕೋರಿಕೊಂಡಿದೆ.
ಪ್ರಥಮ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ವಿಜಯ್ ಬಹುಗುಣ, ಪ್ರಧಾನಿ ಮನಮೋಹನ್ ಸಿಂಗ್ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಪರಿಹಾರ ಹಾಗೂ ಪುನರ್ ವಸತಿ ಕುರಿತು ಚರ್ಚಿಸಲು ಇಂದು ನಡೆದ ಸಂಪುಟ ಸಭೆಯಲ್ಲಿ ಮಾತನಾಡಿದ ವಿಜಯ್ ಬಹುಗುಣ, ಪ್ರವಾಹ ದುರಂತದ ಬಳಿಕ 5,400 ಮಂದಿ ಇನ್ನೂ ನಾಪತ್ತೆಯಾಗಿದ್ದು, ಇದರಲ್ಲಿ 924 ಮಂದಿ ಉತ್ತರಾಖಂಡ ರಾಜ್ಯದ ನಿವಾಸಿಗಳು. ತನ್ನ ಸರಕಾರ ಘೋಷಿಸಿದೆ ಎಂದು ಹೇಳಿದ್ದಾರೆ. ನಾಪತ್ತೆಯಾಗಿರುವವರನ್ನು ಸಾವಿಗೀಡಾದವರ ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾಪತ್ತೆಯಾದವರೆಲ್ಲರನ್ನೂ ಸಾವಿಗೀಡಾದವರ ಪಟ್ಟಿಗೆ ಸೇರಿಸಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ತಲಾ 5 ಲಕ್ಷ ರೂ. ಚೆಕ್ ವಿತರಿಸಲಾಗುವುದು' ಎಂದು ಬಹುಗುಣ ತಿಳಿಸಿದರು. ಉತ್ತರಾಖಂಡ ರಾಜ್ಯದ ಮರುನಿರ್ಮಾಣ ಹಾಗೂ ಪರಿಹಾರ ಕಾರ್ಯಕ್ಕೆ ಸಮಿತಿಯೊಂದನ್ನು ರಚಿಸಲಾಗಿದ್ದು, ಪ್ರಧಾನಿ ಮನಮೋಹನ್ ಸಿಂಗ್ರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಪರಿಹಾರ ಸಮಿತಿಯಲ್ಲಿ ಹಿರಿಯ ಸಚಿವರಾದ ಎ.ಕೆ.ಆಂಟನಿ, ಶರದ್ ಪವಾರ್, ಪಿ.ಚಿದಂಬರಂ, ಗುಲಾಂ ನಬಿ ಆಝಾದ್, ಸುಶೀಲ್ ಕುಮಾರ್ ಶಿಂಧೆ, ಆಸ್ಕರ್ ಫರ್ನಾಂಡೀಸ್, ಕಪಿಲ್ ಸಿಬಲ್, ಗಿರಿಜಾ ವ್ಯಾಸ್, ಜೈರಾಂ ರಮೇಶ್ ಹಾಗೂ ಹರೀಶ್ ರಾವತ್ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಮುಖ್ಯಮಂತ್ರಿ ವಿಜಯ್ ಬಹುಗುಣ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿ ಉಪಾಧ್ಯಕ್ಷ ಎಂ. ಶಶಿಧರ್ ರೆಡ್ಡಿ ಖಾಯಂ ಆಹ್ವಾನಿತರಾಗಿರುತ್ತಾರೆ.
ಉತ್ತರಾಖಂಡದ ಪುನರ್ ನಿರ್ಮಾಣಕ್ಕೆ ಕೈಗೊಳ್ಳಬೇಕಾಗಿರುವ ವಿವಿಧ ಯೋಜನೆಗಳ ಕುರಿತುಅಗತ್ಯ ಸಲಹೆ ನೀಡಿ ಅದನ್ನು ಕಾರ್ಯಗತಗೊಳಿಸುವಂತೆ ಮಾಡುವುದು ಸಮಿತಿಯ ಕರ್ತವ್ಯವಾಗಿದೆ.
ಪರಿಹಾರ ಕಾರ್ಯಕ್ಕಾಗಿ 1,000 ಕೋಟಿ.ರೂ ಅನುದಾನ ಬಿಡುಗಡೆ ಮಾಡುವುದಾಗಿ ಪ್ರಧಾನಿ ಈ ಹಿಂದೆಯೇ ಹೇಳಿದ್ದರು. ಅನುದಾನ ಬಿಡುಗಡೆಯ ಬಗ್ಗೆ ಕೇಂದ್ರದಿಂದ ಪೂರಕ ಪ್ರತಿಕ್ರಿಯೆ ಲಭ್ಯವಾಗಿದ್ದು, 13,800 ಕೋ.ರೂನ್ನು ಅದಷ್ಟು ಬೇಗನೆ ಬಿಡುಗಡೆ ಗೊಳಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಏಷಿಯನ್ ಅಭಿವೃದ್ಧಿ ಬ್ಯಾಂಕ್ ಹಾಗೂ ವಿಶ್ವ ಬ್ಯಾಂಕ್ಗಳನ್ನು ಸಂಪರ್ಕಿಸಿ ಹಣದ ವ್ಯವಸ್ಥೆ ಮಾಡುವುದರ ಕುರಿತು ಸಿಂಗ್ ಹಾಗೂ ಚಿದಂಬರಂ ಚಿಂತನೆ ನಡೆಸಿದ್ದಾರೆ ಎಂದು ಬಹುಗುಣ ಹೇಳಿದರು.












Click it and Unblock the Notifications