ಬಿಜೆಪಿ ಸರ್ಕಾರದ ಯೋಜನೆಗಳಿಗೆ ಸಿಎಂ ಅಭಯ
ಬೆಂಗಳೂರು, ಜು.31: ಹಿಂದಿನ ಬಿಜೆಪಿ ಸರ್ಕಾರದ ಕೆಲವು ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ತಾವು ಮಂಡಿಸಿದ ಬಜೆಟ್ ಗಿಂತ 4,041 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚ ಮಾಡಲು ಸಿದ್ದರಾಮಯ್ಯ ಉಭಯ ಸದನಗಳ ಅಂಗೀಕಾರ ಪಡೆದಿದ್ದಾರೆ.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬಜೆಟ್ಗೆ ಹೆಚ್ಚುವರಿಯಾಗಿ ಕೆಲವು ಹೊಸ ಯೋಜನೆಗಳನ್ನು ಘೋಷಿಸಿದರು. ಒಟ್ಟು 1,25,115 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಬಜೆಟ್ಗೆ ಉಭಯ ಸದನಗಳು ಅಂಗೀಕಾರ ನೀಡಿವೆ.
ಜುಲೈ 12 ರಂದು ಮುಖ್ಯಮಂತ್ರಿ ಮಂಡಿಸಿದೆ ಬಜೆಟ್ ಗಿಂತ ಒಟ್ಟು 4,041 ಕೋಟಿ ಹೆಚ್ಚುವರಿ ವೆಚ್ಚ ಮಾಡಲು ಸಿದ್ದರಾಮಯ್ಯ ಅವರಿಗೆ ಉಭಯ ಸದನಗಳು ಅನುಮತಿ ನೀಡಿವೆ. ಮಂಗಳವಾರವೂ ಸಿಎಂ ಹೊಸದಾದ ಯಾವ ಯೋಜಗಳನ್ನು ಘೋಷಿಸದೆ ಹೆಚ್ಚುವರಿ ಬಜೆಟ್ ಗೆ ಅನುಮೋದನೆ ಪಡೆದರು.
ಶಾಸಕರ ನಿಧಿ ಹೆಚ್ಚಳ, ಎರಡು ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಸ್ಥಾಪಿಸಲು 2 ಕೋಟಿ ಅನುದಾನ ಮುಂತಾದ ಅಂಶಗಳನ್ನು ಹೆಚ್ಚುವರಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಮಂಡಿಸಿದ್ದಾರೆ.
ಬಿಜೆಪಿ ಯೋಜನೆಗಳು ಮುಂದುವರಿಕೆ
ಹಿಂದಿನ ಬಿಜೆಪಿ ಸರ್ಕಾರದ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ನಮ್ಮ ಊರು-ನಮ್ಮ ರಸ್ತೆ, ಭೂಚೇತನ, ಸುವರ್ಣ ಗ್ರಾಮ ಯೋಜನೆಗಳನ್ನು ನಮ್ಮ ಸರ್ಕಾರವೂ ಮುಂದುವರೆಸಲಿದೆ ಈ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರಿಗೆ ಬಂಪರ್
ಶಾಸಕರ ನಿಧಿ ಮೊತ್ತವನ್ನು 1 ಕೋಟಿಯಿಂದ 2 ಕೋಟಿ ರೂ.ಗಳಿಗೆ ಏರಿಕೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಾಸಕರ ನಿಧಿ ಹೆಚ್ಚಳ ಮಾಡಬೇಕೆಂದು ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾಗಲೂ ಒತ್ತಾಯಿಸಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಶಾಸಕರ ನಿಧಿ ಹೆಚ್ಚಳದ ಪ್ರಸ್ತಾಪ ಕೇಳಿಬಂದಿತ್ತು.
ಎರಡು ಹೊಸ ಮೆಡಿಕಲ್ ಕಾಲೇಜು
ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಚಾಮರಾಜನಗರ, ಕಾರವಾರ, ಕೊಪ್ಪಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹೊಸದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಹೇಳಿದ್ದರು. ಸದ್ಯ ಗದಗ ಮತ್ತು ಗುಲ್ಬರ್ಗಾದಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಹೆಚ್ಚುವರಿ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಪೀಠ
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಎರಡು ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಹೆಚ್ಚುವರಿ ಬಜೆಟ್ ನಲ್ಲಿ ಘೋಷಿಸಿದ್ದಾರೆ. ಹಲವಾರು ದಿನಗಳಿಂದ ಈ ಬೇಡಿಕೆ ಸರ್ಕಾರದ ಮುಂದಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಸಭಾತ್ಯಾಗ
ಪ್ರತಿಪಕ್ಷಗಳ ಯಾವ ಬೇಡಿಕೆಗಳಿಗೂ ಬಗ್ಗದ ಸಿಎಂ ಸಿದ್ದರಾಮಯ್ಯ, ಬಜೆಟ್ ಮೇಲಿನ ಚರ್ಚೆಯಲ್ಲಿ ಪರಿಶೀಲಿಸಲಾಗುವುದು ಎಂಬ ಉತ್ತರ ನೀಡಿದರು. ಸಿದ್ದರಾಮಯ್ಯ ಉತ್ತರದಿಂದ ತೃಪ್ತವಾಗದ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.
ಅಹಿಂದ ಬಜೆಟ್ ಎನ್ನಬೇಡಿ
ತಾವು ಮಂಡಿಸಿರುವುದು ಅಹಿಂಗ ಪರವಾಗಿರುವ ಬಜೆಟ್ ಅಲ್ಲ ಎಂದು ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಒಟ್ಟು 1.21 ಲಕ್ಷ ಕೋಟಿ ರೂ.ಗಳ ಬಜೆಟ್ ಗಾತ್ರದಲ್ಲಿ ಸುಮಾರು ಐದು ಸಾವಿರ ಕೋಟಿ ರೂ.ಗಳನ್ನು ಮಾತ್ರ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳ ಕಲ್ಯಾಣಕ್ಕಾಗಿ ಬಳಸಲಾಗಿದೆ. ಆದ್ದರಿಂದ ಅಹಿಂದ ಬಜೆಟ್ ಎಂದು ಕರೆಯುವುದು ಸರಿಯಲ್ಲ ಎಂದು ಸಿಎಂ ಹೇಳಿದ್ದಾರೆ.