ತುಳು ಭಾಷೆಗೆ ಅಧಿಕೃತ ಸ್ಥಾನಮಾನ : ಉಮಾಶ್ರೀ
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೆ. ಗೋಪಾಲಯ್ಯ ಅವರ ಪರವಾಗಿ ಜೆಡಿಎಸ್ ಶಾಸಕ ವೈಎಸ್ ವಿ ದತ್ತಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಉಮಾಶ್ರೀ, ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಂಸ್ಥೆ(CIIL) ಮೂಲಕ ಕನ್ನಡ ಭಾಷೆ ಅಭಿವೃದ್ಧಿಗೆ ಅನುದಾನ ಸಿಕ್ಕಿದೆ ಎಂದರು.
2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಕಿದ ನಂತರ ಕರ್ನಾಟಕ ಸರ್ಕಾರ ಸುಮಾರು 11.2 ಕೋಟಿ ರು ಗಳನ್ನು ಬಿಡುಗಡೆ ಮಾಡಿದೆ ಎಂದರು.
ಕನ್ನಡದಂತೆ ತಮಿಳು ಕೂಡಾ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೊಂದಿದ್ದು ತಮಿಳುನಾಡು ಸರ್ಕಾರಕ್ಕೆ ಕೇಂದ್ರದಿಂದ ಸುಮಾರು 12 ಕೋಟಿ ರು ಅನುದಾನ ಸಿಕ್ಕಿದೆ ನಮಗೇಕೆ ಇಷ್ಟು ಕಡಿಮೆ ಅನುದಾನ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಹೆಚ್ಚಿನ ಒತ್ತಡ ಹೇರುವ ಮೂಲಕ ಹೆಚ್ಚಿನ ಅನುದಾನ ಪಡೆಯಬೇಕು ಎಂದು ವೈಎಸ್ ವಿ ದತ್ತಾ ಆಗ್ರಹಿಸಿದರು.
ಹೀಗೆ ಸಿಗುವ ಅನುದಾನವನ್ನು ಕೇಂದ್ರದ ಸಂಸ್ಥೆ ಮೂಲಕ ಪಡೆಯುವಂತೆ ಮಾಡುವ ಬದಲು ನೇರವಾಗಿ ರಾಜ್ಯ ಸರ್ಕಾರಕ್ಕೆ ದಕ್ಕುವಂತೆ ಮಾಡಬೇಕು. ಭಾಷೆ ಅಭಿವೃದ್ಧಿಗೆ ಹಣ ವ್ಯಯ ಮಾಡುವ ಸ್ವಾಯತ್ತತೆ ರಾಜ್ಯ ಸರ್ಕಾರಕ್ಕೆ ಇರಬೇಕು ಎಂದು ದತ್ತಾ ಒತ್ತಾಯಿಸಿದರು.
ತುಳು ಭಾಷೆಗೆ ಮನ್ನಣೆ: ಕರ್ನಾಟಕ ರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದೆನಿಸಲು ತುಳು ಭಾಷೆಗೆ ಎಲ್ಲಾ ಅರ್ಹತೆ ಇದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಕರಾವಳಿ ಹಾಗೂ ಮಲೆನಾಡಿನ ಕೆಲ ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸುಮಾರು 70 ಲಕ್ಷ ಜನರು(2001 ರ ಜನಗಣತಿಯಂತೆ) ಮಾತನಾಡುವ ತುಳು ಭಾಷೆ ಸಾಹಿತ್ಯಿಕವಾಗಿ ಸಮೃದ್ಧವಾಗಿದೆ ಎಂದು ಉಮಾಶ್ರೀ ಸದನಕ್ಕೆ ವಿವರಿಸಿದರು.
ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆಗೊಳಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿದೆ. ಕಳೆದ ತಿಂಗಳು ಈ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ. ಇದಕ್ಕೆ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುತ್ತಿದ್ದೇವೆ ಎಂದು ಕಾಂಗ್ರೆಸ್ಸಿನ ಮೊಯಿದ್ದೀನ್ ಬಾವಾ ಅವರು ಕೇಳಿದ ಪ್ರಶ್ನೆಗೆ ಸಚಿವೆ ಉಮಾಶ್ರೀ ಉತ್ತರಿಸಿದರು.
ತುಳು ಭಾಷೆಗೆ 2000 ವರ್ಶಕ್ಕೂ ಅಧಿಕ ಇತಿಹಾಸವಿದೆ. ಇತ್ತೀಚೆಗೆ ತುಳು ಭಾಷೆ ಅಭಿವೃದ್ಧಿ ಹಾಗೂ ಕೋಟಿ ಚೆನ್ನಯ್ಯ ಸ್ಮಾರಕ ಸಂರಕ್ಷಣೆಗಾಗಿ ಸರ್ಕಾರ 5 ಕೋಟಿ ಅನುದಾನ ನೀಡಿದೆ.