ನಮ್ಮ ಮೆಟ್ರೋ ಅವಘಢ, ಮತ್ತೊಬ್ಬ ಕಾರ್ಮಿಕ ಬಲಿ

ತುಮಕೂರು ರಸ್ತೆ ಜಾಲಹಳ್ಳಿ ಕ್ರಾಸ್ ಬಳಿ ಮೆಟ್ರೋ ಕಾಮಗಾರಿ ಅಂತಿಮ ಹಂತದಲ್ಲಿ ನಡೆದಿತ್ತು. ಕಾರ್ಮಿಕ ಗೋವಿಂದ ರಾಜು ಅವರು ಕೆಳಗಡೆ ನಿಂತು ಕ್ರೇನ್ ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಭಾನುವಾರ ಮಧ್ಯಾಹ್ನ 12.55 ರ ಸುಮಾರಿಗೆ ಈ ದುರ್ಘಟನೆಯಲ್ಲಿ ತಮಿಳುನಾಡಿನ ವಾಣಿಯಂಬಾಡಿ ಮೂಲದ ಗೋವಿಂದರಾಜು ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಕ್ರೇನ್ ಪಲ್ಟಿಯಾಗಿ ಕಬ್ಬಿಣದ ಕಾಲಮ್ ನೇರವಾಗಿ ಕಾರ್ಮಿಕ ಗೋವಿಂದರಾಜು ತಲೆ ಮೇಲೆ ಬಿದ್ದಿದೆ. ಇದರಿಂದ ದೇಹದ ಅಂಗಾಂಗಗಳು ನಜ್ಜುಗುಜ್ಜಾಗಿದ್ದು, ದೇಹದ ಕೆಲವು ಭಾಗಗಳು ಚೆಲ್ಲಾ ಪಿಲ್ಲಿಯಾಗಿ ಹರಡಿದೆ. ಅಪಘಾತದ ಭೀಕರತೆ ಕಂಡು ಜನತೆ ಬೆಚ್ಚಿ ಬೀಳಿದ್ದಾರೆ.
ಪೀಣ್ಯದಿಂದ ಯಶವಂತಪುರದ ವರೆಗೆದ ಮೆಟ್ರೋ ರೈಲು ಸೋಮವಾರ ಪರೀಕ್ಷಾರ್ಥ ಸಂಚಾರವನ್ನು ಜೂನ್ ತಿಂಗಳಿನಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
ಪೀಣ್ಯ ಡಿಪೋದಿಂದ ಸಂಪಿಗೆ ರಸ್ತೆಯ ನಿಲ್ದಾಣದವರೆಗೆ ಒಟ್ಟು 10.43 ಕಿ.ಮೀ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ 10 ನಿಲ್ದಾಣಗಳು ನಿರ್ಮಾಣಗೊಂಡಿವೆ. ಪೀಣ್ಯ ಡಿಪೋದಿಂದ - ಯಶವಂತಪುರದವರೆಗೆ 5.3 ಕಿ.ಮೀ ಉದ್ದದ ಮಾರ್ಗದಲ್ಲಿ ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿತ್ತು.
ನಿಲ್ಲದ ಮೆಟ್ರೋ ದುರಂತಗಳು: ಬಿಎಂಆರ್ಸಿಎಲ್ ಮೆಟ್ರೋ ಯೋಜನೆ ಕಾಮಗಾರಿ ಸುರಕ್ಷತೆ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇದೆ. ಆದರೆ, ಮೆಟ್ರೋ ಕಾಮಗಾರಿಯಿಂದ ದುರಂತಗಳು ಸಂಭವಿಸುತ್ತಲೇ ಇದೆ.
* ಜೂ.28, 2013ರಂದು ನಮ್ಮ ಮೆಟ್ರೋ ಕಾಮಗಾರಿಯ ಎರಡು ಪ್ರತ್ಯೇಕ ಪ್ರಕರಣದಲ್ಲಿ, ಒಬ್ಬ ಕಾರ್ಮಿಕ ಮೃತಪಟ್ಟು ನಾಗರೀಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
* ಶ್ರೀರಾಮಪುರ ಬಳಿ ಜೂ.24ರಂದು ಮೆಟ್ರೊ ನಿಲ್ದಾಣದಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕ ರೂಪೇಶ್ ಸಿಂಗ್ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ನಾಲ್ಕು ದಿನ ನೋವು ತಿಂದು ಸಾವನ್ನಪ್ಪಿದ್ದರು.
* 2012ರಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ತೊಡಗಿದ್ದ ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ನಮಕ್ಕಲ್ ಮೂಲದ ನಟ್ಕಲ್ ಎಂಬ 18 ವರ್ಷದ ಯುವಕ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದ.
* 2011ರಲ್ಲಿ ನವರಂಗ್ ಸಿನಿಮಾ ಮಂದಿರ ಜಂಕ್ಷನ್ ಬಳಿ ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿಗೆ ಸೇರಿದ ಜೆಸಿಬಿ ಯಂತ್ರಕ್ಕೆ ಅಪರಿಚಿತ ಮಹಿಳೆ ಸಿಲುಕಿ ಸಾವನ್ನಪ್ಪಿದ್ದರು.
ಕಾರ್ಮಿಕರ ಜೀವಕ್ಕೆ ಬೆಲೆ ನೀಡದೆ ಬಿಎಂಆರ್ ಸಿಎಲ್ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಕಾಮಗಾರಿ ವಿಳಂಬಕ್ಕೂ ಕಾರ್ಮಿಕರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಸ್ಯಾಮುಯಲ್ ಸತ್ಯಶೀಲನ್ ತಂಡ ವರದಿ ನೀಡಿತ್ತು. ಆದರೆ, ಈ ಬಗ್ಗೆ ಚರ್ಚೆ ವಾದ ವಿವಾದ ನಡೆಯುತ್ತಲೇ ಇದೆ. ಪರಿಹಾರ ಮಾತ್ರ ಸಿಕ್ಕಿಲ್ಲ.












Click it and Unblock the Notifications