1 ರೂಪಾಯಿಯಲ್ಲಿ ಹೊಟ್ಟೆ ತುಂಬಲ್ವಾ. ಕೇಂದ್ರ ಸಚಿವರ ಅಣಕ
ಒಂದು ರೂಪಾಯಿಯಲ್ಲಿ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಲು ಯಾಕೆ ಸಾಧ್ಯವಿಲ್ಲ. ಒಂದು ರೂಪಾಯಿನಿಂದಲೂ ಹೊಟ್ಟೆ ತುಂಬಿಸಿಕೊಳ್ಳಬಹುದು, ನೂರು ರೂಪಾಯಿಯಿಂದಲೂ ಮನುಷ್ಯ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಕೇಂದ್ರದ ಯುಪಿಎ ಸರಕಾರ ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಅವರ ಜೀವನ ಶೈಲಿಯನ್ನು ಬದಲಾಯಿಸಲು ಸರಕಾರ ಕಟಿಬದ್ದವಾಗಿದೆ. ಅವರು ಚೆನ್ನಾಗಿ ತಿಂದು ಆರೋಗ್ಯವಾಗಿದ್ದರೆ ತಾನೇ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎನ್ನುವ ಮಾತನ್ನು ಫಾರೂಕ್ ಅಬ್ದುಲ್ಲಾ ಆಡಿದ್ದಾರೆ.
ಬಡತನದ ರೇಖೆಯನ್ನು ನಿಗದಿ ಪಡಿಸುವ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಣ ಆರೋಪ, ಪ್ರತ್ಯಾರೋಪ ಮುಗಿಲು ಮುಟ್ಟುತ್ತಿದೆ. ಮುಂಬೈನಲ್ಲಿ ಕೇವಲ ಹನ್ನೆರಡು ರೂಪಾಯಿಯಲ್ಲಿ ಹೊಟ್ಟೆ ತುಂಬಾ ಊಟ ಸಿಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಾಜ್ ಬಬ್ಬರ್ ಹೇಳಿದ್ದರು.
ಅದನ್ನು ಬೆಂಬಲಿಸಿ ಮತ್ತೊಬ್ಬ ಕಾಂಗ್ರೆಸ್ ಮುಖಂಡ ರಶೀದ್ ಮಸೂದ್, ದೆಹಲಿಯ ಜಾಮಿಯಾ ಮಸೀದಿ ಬಳಿ ಐದು ರೂಪಾಯಿಗೆ ಊಟ ಸಿಗುತ್ತೆ. ನಾನು ನಿತ್ಯ ಐದು ರೂಪಾಯಿಗಿಂತ ಕಮ್ಮಿ ದರದಲ್ಲಿ ಊಟ ಮಾಡುತ್ತೇನೆ ಎಂದು ಹೇಳಿದ್ದರು.
ಯುಪಿಎ ಮುಖಂಡರ ಈ ಹೇಳಿಕೆಗಳಿಗೆ ಎನ್ಡಿಎ ಮತ್ತು ಎಡಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ಮುಂಬೈನಲ್ಲಿ ಹನ್ನೆರಡು ರೂಪಾಯಿಗೆ ಟೀ ಮತ್ತು ವಡಾಪಾವ್ ಸಿಗುತ್ತದೆ. ಕೇಂದ್ರ ಸರಕಾರ ಬಡವರ ಬಗ್ಗೆ ತಮಾಷೆಯ ಮಾತನ್ನಾಡುತ್ತಿದೆ ಎಂದು ಶಿವಸೇನೆ ಆಕ್ರೋಶ ವ್ಯಕ್ತ ಪಡಿಸಿದೆ.
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮೂವತ್ತಮೂರು ರೂಪಾಯಿ ಹಣವನ್ನು ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ಯೋಜನಾ ಆಯೋಗದ ಅಧ್ಯಕ್ಷರಿಗೆ ಮನಿ ಆರ್ಡರ್ ಮಾಡಿ 33 ರೂಪಾಯಿಯಲ್ಲಿ ಊಟ ಮಾಡಿ ನೋಡೋಣ ಎಂದು ಸವಾಲೆಸೆದಿದ್ದಾರೆ.