ನಾಯಕರ ಒಪ್ಪಿಗೆ ಇಲ್ಲ, ಬಿಎಸ್ವೈ ಬಿಜೆಪಿಗೆ ಮರಳೋಲ್ಲ!
ಬೆಂಗಳೂರು, ಜು.23 : ಯಡಿಯೂರಪ್ಪ ಬಿಜೆಪಿಗೆ ಮರಳಿ ಬನ್ನಿ ಅಭಿಯಾನಕ್ಕೆ ಅಂತಿಮ ಘಟ್ಟ ತಲುಪಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಪಕ್ಷ ಸೇರ್ಪಡೆಗೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿಲ್ಲ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ನೇತೃತ್ವ ವಹಿಸಿದ್ದ ವಿಧಾನಪರಿಷತ್ ಸದಸ್ಯರಿಗೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿರುವ ರಾಜನಾಥ್ ಸಿಂಗ್, ಯಡಿಯೂರಪ್ಪ ಪಕ್ಷಕ್ಕೆ ಮರಳುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಭ್ರಷ್ಟಾಚಾರ ಆರೋಪ, ಪಕ್ಷದ ಕೆಲವು ನಾಯಕರ ವಿರೋಧ, ಬಗೆಹರಿಸಲಾಗದ ಯಡಿಯೂರಪ್ಪ ಅವರ ಷರತ್ತುಗಳಿಂದ ರಾಜನಾಥ್ ಸಿಂಗ್ ಬಿಎಸ್ವೈ ಸೇರ್ಪಡೆಗೆ ಅಸ್ತು ಎಂದಿಲ್ಲ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಬಲವಾಗಿ ನಂಬಿಕೊಂಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಹ, ಎಲ್ಲಾ ನಿರ್ಧಾರಗಳನ್ನು ರಾಜನಾಥ್ ಸಿಂಗ್ ಹೆಗಲಿಗೆ ವಹಿಸಿದ್ದು, ಇದರಿಂದ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುವ ನಾಯಕರು ಇಲ್ಲದಂತಾಗಿದೆ. ರಾಜನಾಥ್ ಸಿಂಗ್ ಸಂದೇಶದ ಪ್ರಮುಖ ಅಂಶಗಳು ಹೀಗಿವೆ.

ಪಕ್ಷದ ನಾಯಕರು ಒಪ್ಪುತ್ತಿಲ್ಲ
ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಕುರಿತು ಸಂಸದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ಬಿಎಸ್ವೈ ಮೇಲೆ ಭ್ರಷ್ಟಾಚಾರದ ಆರೋಪಗಳು ಇರುವುದರಿಂದ ಪಕ್ಷದ ಹಿರಿಯ ನಾಯಕರು ಅವರ ಮರು ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಯಡಿಯೂರಪ್ಪ ಮರಳುವುದು ಬೇಡ ಎಂಬುದು ರಾಜನಾಥ್ ಸಿಂಗ್ ಅಭಿಪ್ರಾಯ.

ಮೋದಿಯೂ ಕೈ ಹಿಡಿಯಲಿಲ್ಲ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮನ್ನು ಪಕ್ಷಕ್ಕೆ ಮರಳಿ ಕರೆಯುತ್ತಾರೆ ಎಂದು ಬಿಎಸ್ವೈ ಬಲವಾಗಿ ನಂಬಿದ್ದರು. ಆದರೆ, ಮೋದಿ ಅಂತಿಮ ನಿರ್ಧಾರವನ್ನು ರಾಜನಾಥ್ ಸಿಂಗ್ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ಇದರಿಂದ ಯಡಿಯೂರಪ್ಪ ಬೆಂಬಲಕ್ಕೆ ನಿಲ್ಲುವ ನಾಯಕರು ದೆಹಲಿಯಲ್ಲಿ ಯಾರು ಇಲ್ಲ.

ಅಡ್ವಾಣಿ ಒಪ್ಪುವುದಿಲ್ಲ
ಬಿಎಸ್ವೈ ಮರಳಿ ಕರೆತರಲು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಒಪ್ಪುವುದಿಲ್ಲ ಎಂಬುದು ರಾಜನಾಥ್ ಸಿಂಗ್ ಮತ್ತು ಮೋದಿ ಇಬ್ಬರಿಗೂ ಚೆನ್ನಾಗಿ ತಿಳಿದಿದೆ. ಅವರ ಹತ್ತಿರ ಈ ವಿಷಯ ಪ್ರಸ್ತಾಪಿಸಲು ಉಭಯ ನಾಯಕರು ಸಿದ್ಧರಿಲ್ಲ. ಅಡ್ವಾಣಿ ಒಪ್ಪಿದರೆ ಪಕ್ಷಕ್ಕೆ ಬಿಎಸ್ವೈ ಮರಳಬಹುದೇನೋ?

ಷರತ್ತುಗಳ ತೊಡಕು
ಬಿಜೆಪಿಗೆ ಮರಳಲು ಬಿ.ಎಸ್.ಯಡಿಯೂರಪ್ಪ ಹಾಕಿರುವ ಷರತ್ತುಗಳ ಪಟ್ಟಿ ರಾಜನಾಥ್ ಸಿಂಗ್ ಅವರ ಬಳಿ ಇದೆ. ಇದನ್ನು ಈಡೇರಿಸಲು ಸಾಧ್ಯವಿಲ್ಲ. ಆದ್ದರಿಂದ ಬಿಎಸ್ವೈ ಪಕ್ಷಕ್ಕೆ ಮರಳುವುದು ಬೇಡ ಎಂಬುದು ಅವರ ಅಭಿಪ್ರಾಯ ಆದ್ದರಿಂದ ಬಿಎಸ್ವೈ ಮರಳುವ ಸಾಧ್ಯತೆ ಕಡಿಮೆ.

ಬಿಎಸ್ವೈ ಷರತ್ತುಗಳೇನು
ಬಿ.ಎಸ್.ಯಡಿಯೂರಪ್ಪ ತಾವು ಬಿಜೆಪಿಗೆ ಮರಳಿದರೆ ತಮ್ಮನ್ನು ಪ್ರತಿಪಕ್ಷ ನಾಯಕನಾಗಿ ಮಾಡಬೇಕು ಎಂದು ಷರತ್ತು ವಿಧಿಸಿದ್ದಾರೆ. ತಮ್ಮ ಬೆಂಬಲಿಗರು ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಇವೆರಡು ಬೇಡಿಕೆಗಳಿಂದಲೇ ಬಿಎಸ್ವೈ ಮರಳುವುದು ಬೇಡ ಎಂದು ರಾಜನಾಥ್ ಸಿಂಗ್ ನಿರ್ಧರಿಸಿದ್ದಾರೆ.

10 ಟಿಕೆಟ್ ಬೇಕು
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಕನಿಷ್ಠ 10 ಸ್ಥಾನಗಳಲ್ಲಿ ಟಿಕೆಟ್ ನೀಡಬೇಕು ಎಂಬುದು ಮತ್ತೆರಡು ಷರತ್ತು. ಇವುಗಳನ್ನು ಪರಿಶೀಲಿಸಿದ ಪಕ್ಷದ ಅಧ್ಯಕ್ಷರು ನೋ ಎಂಬ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಏನು ಹೇಳುತ್ತಾರೆ
ವೈಷ್ಣೋದೇವಿ ದರ್ಶನ ಪಡೆಯಲು ದೆಹಲಿಗೆ ತೆರಳಿದ್ದ ಬಿ.ಎಸ್.ಯಡಿಯೂರಪ್ಪ ಪ್ರತಿಕೂಲ ಹವಮಾನದ ಕಾರಣ ಬೆಂಗಳೂರಿಗೆ ಮರಳಲಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ವೈ, ನಾನು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications