ಸುಂದರಿಯನ್ನು ಛೂಬಿಟ್ಟು ಬ್ಲಾಕ್ಮೇಲ್ : ಗ್ಯಾಂಗ್ ಬಂಧನ

ಬಣ್ಣಬಣ್ಣದ ಮಾತುಗಳಿಂದ ಯುವ ಹುಡುಗಿಯರು ಉದ್ಯಮಿಗಳನ್ನು ಮರಳು ಮಾಡಿ ಅವರ ಸ್ನೇಹ ಸಾಧಿಸುತ್ತಿದ್ದರು. ನಂತರ ತಾವು ಹೇಳಿದ ಜಾಗಕ್ಕೆ ಬರಹೇಳಿ, ಒಟ್ಟಿಗಿದ್ದಾಗ ಯುವಕರ ಗ್ಯಾಂಗ್ ಆ ಸ್ಥಳಕ್ಕೆ ದಾಳಿ ಮಾಡಿ ಉದ್ಯಮಿಯನ್ನು ಬೆದರಿಸಿ ಬ್ಲಾಕ್ ಮೇಲ್ ಮಾಡುತ್ತಿತ್ತು.
ಬಂಧಿತರನ್ನು ಮಡಿಕೇರಿಯ ಯಾಕೂಬ್ ಅಲಿ, ಉಪ್ಪಿನಂಗಡಿಯ ರೆಹಮಾನ್ ಅಲಿ ಮತ್ತು ಕಾಸರಗೋಡಿನ ಮಣಿಕಾಂತ ಎಂದು ಗುರುತಿಸಲಾಗಿದ್ದು, ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಗ್ಯಾಂಗ್ ವಿರುದ್ಧ ಹಲವಾರು ದೂರುಗಳು ಬೆಂಗಳೂರು, ಮಂಗಳೂರು ಮತ್ತು ಕೇರಳದಲ್ಲಿ ದಾಖಲಾಗಿದ್ದವು.
ಏನು ಮಾಡುತ್ತಿದ್ದರು? : ಮಂಗಳೂರಿನ ಕದ್ರಿ ಪೊಲೀಸ್ ಸ್ಟೇಷನ್ನಲ್ಲಿ ಅನೂಪ್ ಎಂಬುವವರು ನೀಡಿರುವ ದೂರಿನ ಪ್ರಕಾರ, ಓರ್ವ ಸುಂದರ ಯುವತಿ ಅವರ ಅಂಗಡಿಗೆ ಭೇಟಿ ನೀಡುತ್ತಿದ್ದಳು. ಅವರ ಸ್ನೇಹ ಸಂಪಾದಿಸಿ ಅವರ ಫೋನ್ ನಂಬರ್ ಕೂಡ ಇಸಿದುಕೊಂಡಿದ್ದಳು. ಕೆಲ ದಿನಗಳ ನಂತರ ಅನೂಪ್ ಅವರನ್ನು ಯುವತಿ ಮಡಿಕೇರಿಗೆ ಬರಬೇಕೆಂದು ಆಹ್ವಾನವಿತ್ತಳು.
ಮಡಿಕೇರಿಯಲ್ಲಿ ಒಬ್ಬ ಪುರುಷ ಅನೂಪ್ ಅವರನ್ನು ಒಂದು ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅನೂಪ್ ಮತ್ತು ಆ ಯುವತಿಯ ಭೇಟಿಯಾಗಿದೆ. ಅವರಿಬ್ಬರು ಮಾತನಾಡುತ್ತಿದ್ದಾಗ ದಾಳಿಯಿಟ್ಟ ಗ್ಯಾಂಗ್ ಸದಸ್ಯರು, ಯುವತಿಯೊಡನೆ ಏಕಾಂಗಿಯಾಗಿ ಇದ್ದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಸಲ್ಲದ ಕಳಂಕವನ್ನು ತಪ್ಪಿಸಿಕೊಳ್ಳಲೆಂದು 5 ಸಾವಿರ ರು. ನಗದು ಮತ್ತು 50 ಸಾವಿರ ರು. ಮೌಲ್ಯದ ಚಿನ್ನದ ಸರ ಅನೂಪ್ ನೀಡಿದ್ದಾರೆ.
ಇದೇ ರೀತಿಯ ಘಟನೆಗಳು ಬೆಂಗಳೂರು, ಮಂಗಳೂರು ಮತ್ತು ಕೇರಳದಲ್ಲಿಯೂ ನಡೆದಿವೆ. ಮಂಗಳೂರಿನಲ್ಲಿ ಕೂಡ ರತನ್ ಡಿಸೋಜಾ ಎಂಬುವವರನ್ನು ಯುವತಿಯ ಮೋಹದ ಪಾಶ ಬೀಸಿ ಅಪಹರಿಸಲಾಗಿತ್ತು. ಈ ಪ್ರಕರಣದಲ್ಲಿ ಯಾಕೂಬ್ ಎಂಬಾತ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಇದೇ ರೀತಿ ಕದ್ರಿ ಪೊಲೀಸ್ ಠಾಣೆಯಲ್ಲಿಯೂ ಅಬ್ದುಲ್ ರೆಹಮಾನ್ ಎಂಬುವವರು ದೂರು ಸಲ್ಲಿಸಿದ್ದಾರೆ. ಈ ತಂಡದಲ್ಲಿ ಇಬ್ಬರು ಯುವತಿಯರಿದ್ದಾರೆ ಎಂಬು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications