ಕೈಕಾಲು ಸೊಂಟ ಮುರಿಯುವ ಗುಂಡಿಗಳ ಬಗ್ಗೆ ಎಚ್ಚರ!
ಬೆಂಗಳೂರು, ಜು. 23 : ಇವು ಅಂತಹ ಪ್ರಾಣಾಪಾಯಕಾರಿ ರಸ್ತೆ ಗುಂಡಿಗಳಲ್ಲ. ಆದರೆ ಸ್ವಲ್ಪ ಎಚ್ಚರ ತಪ್ಪಿ ಗಾಡಿ ಓಡಿಸಿದರೆ ಕೈಕಾಲು, ಸೊಂಟ ಮುರಿಯುವುದಂತೂ ಗ್ಯಾರಂಟಿ. ಇವುಗಳ ಬಗ್ಗೆ ನಾಗರಿಕರೂ ಎಚ್ಚರ ವಹಿಸುವುದಿಲ್ಲ, ಬಿಬಿಎಂಪಿ ಅಂತೂ ಕ್ಯಾರೇ ಅನ್ನುವುದಿಲ್ಲ.
ಇಂತಹ ಉಪದ್ರವಿ ರಸ್ತೆ ಗುಂಡಿಗಳನ್ನು ಬೆಂಗಳೂರಿನುದ್ದಕ್ಕೂ ರಸ್ತೆ ರಸ್ತೆಗಳಲ್ಲಿ ಕಾಣಬಹುದು. ಇವು ಎಷ್ಟು ನಿರುಪದ್ರವಿಯಂತೆ ಕಾಣುತ್ತವೋ ಅಷ್ಟೇ ಅಪಾಯಕಾರಿ. ಎಚ್ಚರ ತಪ್ಪಿ ಗಾಡಿ ಓಡಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ಅಪಾಯ ನಮ್ಮ ಅರಿವಿಗೆ ಬರುವುದು ಯಾರಾದರೂ ಬಿದ್ದು ಆಸ್ಪತ್ರೆ ಸೇರಿದಾಗಲೇ.
ಅಲ್ಲಿಯತನಕ ನಾವೂ ಕಣ್ಣುಮುಚ್ಚಿ ಕುಳಿತಿರುತ್ತೇವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಆಯಾ ವಾರ್ಡುಗಳ ಜನಪ್ರತಿನಿಧಿಗಳು, ಕ್ಷೇತ್ರದ ಶಾಸಕರು ಕಣ್ಣುಮುಚ್ಚಿ ತಪಸ್ಸು ಮಾಡುತ್ತ ಕುಳಿತುಬಿಟ್ಟಿರುತ್ತಾರೆ. ಈಗಲೇ ಇದರ ಬಗ್ಗೆ ಬಿಬಿಎಂಪಿ ಗಮನಕ್ಕೆ ತರದಿದ್ದರೆ ಮುಂದಿನ ಅನಾಹುತಗಳಿಗೆ ನಾವು ನಾಗರಿಕರು ಕೂಡ ಕಾರಣರಾಗುತ್ತೇವೆ.
ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಹಾಡಿನಂತೆ ನಾವು ಕೈಕಟ್ಟಿ ಕುಳಿತರೆ, ಏನಾದರೂ ಅಪಾಯ ಸಂಭವಿಸಿ ಕೈಕಾಲು ಕಳೆದುಕೊಂಡರೆ ಅದಕ್ಕೆ ನಾವೇ ಕಾರಣರಾಗುತ್ತೇವೆ. ಆದ್ದರಿಂದ ಸುಮ್ಮನೆ ಕುಳಿತುಕೊಳ್ಳದೆ, ಏನಾದರೂ ದೂರುಗಳಿದ್ದರೆ 22660000 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ.
ಮುಂದೆ ಕೆಲ ರಸ್ತೆ ಗುಂಡಿಗಳ ಚಿತ್ರ ಮತ್ತು ವಿವರಗಳನ್ನು ನೀಡಲಾಗಿದೆ. ನಿಮ್ಮ ಬಡಾವಣೆಯಲ್ಲೂ ಈ ರೀತಿಯ ರಸ್ತೆಗುಂಡಿಗಳಿದ್ದರೆ ನಮಗೆ ಅವುಗಳ ಚಿತ್ರಗಳನ್ನು ಕಳಿಸಿ. ನಿರ್ಲಕ್ಷಿಸದೆ, ಅವನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಆದೇಶ ನೀಡಿರಿ. ಏಕೆಂದರೆ, ನಿಮ್ಮ ಊರಿಗೆ ನೀವೇ ದೊರೆಗಳು. [ಬಿಬಿಎಂಪಿ ಫೇಸ್ ಬುಕ್ ಪುಟದಲ್ಲೂ ದೂರು ನೀಡಬಹುದು]

ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಹೊಸಕೆರೆ ಹಳ್ಳಿಯ ಬಳಿ, ರಿಂಗ್ ರಸ್ತೆಯಲ್ಲಿ ನಾಯಂಡಹಳ್ಳಿಯಿಂದ ಬನಶಂಕರಿಗೆ ಹೋಗುವ ದಾರಿಯಲ್ಲಿ, ಸೀತಾ ಸರ್ಕಲ್ಲಿಗೆ ಎಡತಿರುವುದು ತೆಗೆದುಕೊಳ್ಳುವ ಮುನ್ನ ಇರುವ ಅಡ್ಡರಸ್ತೆಯಲ್ಲಿ, ರಸ್ತೆದೀಪ ಇಲ್ಲದಿರುವ ದಾರಿಯ ಬಲತುದಿಯಲ್ಲಿ ಅಪಾಯ ಕಾದಿದೆ, ಎಚ್ಚರ! ಈ ಗುಣಿ ಇಂದು ಮಂಗಳವಾರ ಇನ್ನೂ ಅಗಲವಾಗಿದೆ.

ರಾತ್ರಿ ಬೈಕ್ ಓಡಿಸುವಾಗ ಎಚ್ಚರ
ಕೆಂಗೇರಿಯ ಬಳಿ ನಾಗದೇವನಹಳ್ಳಿ ರಿಂಗ್ ರಸ್ತೆಯಲ್ಲಿ ಎಚ್ಚರ ತಪ್ಪಿ ವೇಗವಾಗಿ ರಸ್ತೆತುದಿಯಲ್ಲಿ ಗಾಡಿ ಓಡಿಸಿದರೆ ನಿಮ್ಮ ಸೊಂಟ ಮುರಿತಕ್ಕೆ ನೀವೇ ಜವಾಬ್ದಾರರು. ಪೈಪ್ ಹಾಕಿ ಬಿಟ್ಟ ರಸ್ತೆಯ ತುದಿಯಲ್ಲಿ ಕಾಲು ಅಡಿ ಗುಂಡಿ ರಸ್ತೆಯುದ್ದಕ್ಕೂ ಕಾಣುತ್ತದೆ. ರಾತ್ರಿ ಹೊತ್ತಿನಲ್ಲಿ ಲೈಟ್ ಇದ್ದರೆ ನೀವು ಸೇಫ್. ಆದರೆ ಲೈಟೇ ಇರುವುದಿಲ್ಲವಲ್ಲ!

ಇದಕ್ಕೇನಂತೀರಿ?
ಅದೇ ನಾಗದೇವನಹಳ್ಳಿ ಬಳಿ ರಿಂಗ್ ರಸ್ತೆಯ ತುದಿಯಲ್ಲಿ ಇರುವ ಈ ಅರ್ಧ ಅಡಿ ಆಳದ ಗುಂಡಿ ನಿಮ್ಮ ಜೀವ ತೆಗೆಯಲೂ ಹೇಸುವುದಿಲ್ಲ. ಮಳೆಬಂದು ಗುಂಡಿ ಮುಚ್ಚಿದ್ದರಂತೂ ಮುಗಿದೇಹೋಯಿತು. ಬೈಕ್ ಸ್ಕಿಡ್ ಆಗಿ ಬಿದ್ದರೆ ಹತ್ತಿರದಲ್ಲಿ ಎರಡು ಆಸ್ಪತ್ರೆಗಳಿವೆ.

ತಮಾಷೆ ಇರೋದಿ ಇಲ್ಲಿ
ತಮಾಷೆ ಅಂದ್ರೆ ಈ ರಸ್ತೆಗಳ ಇಕ್ಕೆಲಗಳಲ್ಲಿ ನೇರದಾರಿಯಲ್ಲಿ ಸಾಗುವುದಕ್ಕಿಂತ ವಿರುದ್ಧ ದಿಕ್ಕಿನಿಂದ ಬೈಕುಗಳನ್ನು ಓಡಿಸುವವರೇ ಹೆಚ್ಚು. ಬೈಕು ನೋಡಿ ಹೇಗೆ ವಿರುದ್ಧ ದಿಕ್ಕಿನಲ್ಲಿ ನಿಂತಿದೆ. ಪಕ್ಕದಲ್ಲೇ ಇದೆ ನೋಡಿ ಅಪಾಯ.

ನಾಗರಬಾವಿ ಬಳಿ, ನಮ್ಮೂರ ತಿಂಡಿ ಎದಿರು
ಈ ರಸ್ತೆಯಲ್ಲಿ ಅಡ್ಡಾಡುವ ವಾಹನಗಳಿಗೆ ಲೆಕ್ಕವೇ ಇಲ್ಲ. ನಮ್ಮೂರ ತಿಂಡಿ ಹೋಟೆಲ್ ಎದುರುಗಡೆ ಇರುವ ಈ ಸಣ್ಣಮಟ್ಟದ ಗುಂಡಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಎಷ್ಟೇ ರಿಪೇರಿ ಮಾಡಿದರೂ ರಸ್ತೆ ಗುಂಡಿ ಅಗಲವಾಗುತ್ತಲೇ ಇದೆ. ಮಳೆ ಬಂದರಂತೂ ದೇವರೇ ಗತಿ. ಅಂದ ಹಾಗೆ, ಇಲ್ಲೂ ಎದುರುಗಡೆ ಪ್ಯಾನೇಷಿಯಾ ಆಸ್ಪತ್ರೆಯಿದೆ. ಆಸ್ಪತ್ರೆ ಸೇರ್ತೀರೋ, ಮನೆ ಸೇರ್ತೀರೋ ನಿಮಗೆ ಬಿಟ್ಟಿದ್ದು.

ಇದೇನು ರಸ್ತೆಯೋ ಸ್ಮಶಾನವೋ
ಜಯನಗರ 3ನೇ ಬ್ಲಾಕಿನಲ್ಲಿ ನೀರಿನ ಪೈಪುಗಳನ್ನು ಹಾಕಲೆಂದು ತೆಗೆಯಲಾಗಿರುವ ಗುಂಡಿಗಳು ಸಾವಿಗೆ ಆಹ್ವಾನ ನೀಡುವಂತಿವೆ. ಈ ಗುಂಡಿಗಳನ್ನು ಮುಚ್ಚಲಾಗಿದ್ದರೂ ಹಿಂದಿನ ರಸ್ತೆಯಂತೆ ಈ ರಸ್ತೆ ಈಗ ಉಳಿದಿಲ್ಲ. ಕೆಸರಿನಿಂದ ಕೂಡಿದ ಈ ರಸ್ತೆಯಲ್ಲಿ ವಾಹನ ಓಡಿಸುವುದು ನಿಜಕ್ಕೂ ಸವಾಲೇ ಸರಿ.












Click it and Unblock the Notifications