ಕಸದಿಂದ ಆರು ತಿಂಗಳಿನಲ್ಲಿ ಬೆಂಗಳೂರು ಮುಕ್ತ : ಸಿಎಂ

ಎಫ್ಐಸಿಸಿಐನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನ ಕಸದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸರ್ಕಾರಕ್ಕೆ ಮೂರು ವರ್ಷಗಳ ಕಾಲವಕಾಶ ಬೇಡ. ಆದರೆ, ಆರು ತಿಂಗಳಿನಲ್ಲಿ ಕಸವನ್ನು ವಿಲೇವಾರಿ ಮಾಡಲಾಗುವುದು ಎಂದರು.
ಬೆಂಗಳೂರಿನ ಕಸದ ಸಮಸ್ಯೆ ನಿವಾರಿಸುವುದು ಸರ್ಕಾರದ ಮಂದಿರುವ ಪ್ರಮುಖ ಸವಾಲು. ನಗರದಲ್ಲಿ ಖಾಲಿ ನಿವೇಶನ ಹೊಂದಿರುವ ಜನರು, ಬೇರೆಯವರು ನಮ್ಮ ನಿವೇಶನಕ್ಕೆ ಕಸ ತಂದು ಸುರಿಯುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಸರ್ಕಾರ ಕಸದ ಸಮಸ್ಯೆ ನಿವಾರಿಸಲು ಐದು ವರ್ಷ ಬೇಕು ಎಂದಿತ್ತು. ಆದರೆ, ನಮ್ಮ ಸರ್ಕಾರ ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆ ಮಾಡಲು ಅಗತ್ಯ ಕ್ರಮ ಕೈಗೊಂಡಿದೆ, ಬಿಬಿಎಂಪಿ ಮತ್ತು ಜನರ ಸಹಕಾರದಿಂದ ಬೆಂಗಳೂರನ್ನು ಕಸಮುಕ್ತವಾಗಿಸಲಾಗುವುದು ಎಂದರು. (ಬಜೆಟ್ ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ )
ಅನುದಾನ : ಬೆಂಗಳೂರಿನ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ 1.200 ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿದ್ದೇವೆ. ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿ, ಆರು ತಿಂಗಳಿನಲ್ಲಿ ಕಸದ ಸಮಸ್ಯೆ ನಿವಾರಿಸಲಾಗುವುದು ಎಂದರು. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಿಎಂ ಹೇಳಿದರು.
ಬಂಡವಾಳ ಸೆಳೆಯಲು ಪ್ರಯತ್ನ : ಬೆಂಗಳೂರು ನಗರದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಬಂಡವಾಳಗಾರರನ್ನು ಆಕರ್ಷಿಸಲಾಗುತ್ತದೆ. ಪ್ರಮುಖವಾಗಿ ಐಟಿ ಉದ್ದಿಮೆಗಳನ್ನು ಬೆಂಗಳೂರಿಗೆ ಕರೆತರಲು ಅಗತ್ಯ ಪ್ರಯತ್ನ ನಡೆಸಲಾಗುವುದು. ಕಸದ ಸಮಸ್ಯೆ ನಿವಾರಿಸಿ, ಮೂಲಭೂತ ಸೌಕರ್ಯ ನೀಡಿದರೆ, ಐಟಿ ಉದ್ದಿಮೆಗಳು ಬೆಂಗಳೂರಿಗೆ ಬರಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.












Click it and Unblock the Notifications