ಕರ್ನಾಟಕದ ಜಿಲ್ಲಾಸುದ್ದಿಗಳತ್ತ ಒಂದು ನೋಟ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಪೊಲೀಸ್ ದೂರು ಪ್ರಾಧಿಕಾರ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಮಂಗಳೂರು : ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ಬುಧವಾರ ಮಂಗಳೂರು ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಐದು ತಿಂಗಳ ಹಿಂದೆ ಖಾಸಗಿ ವಾಹಿನಿ ಪತ್ರಕರ್ತ ನವೀನ್ ಸೂರಿಂಜೆ ಮತ್ತು ಕಾಲೇಜು ವಿದ್ಯಾರ್ಥಿಗೆ ಜಾಮೀನು ನೀಡಲಾಗಿತ್ತು. ಉಳಿದ ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ.
ಕೋಲಾರ : ಯುವತಿ ಪ್ರೀತಿಸಲು ನಿಕಾಕರಿಸಿದ್ದರಿಂದ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಭಗ್ನ ಪ್ರೇಮಿಯೊಬ್ಬ ನಂತರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರದ ಗಾಂಧಿ ನಗರದಲ್ಲಿ ನಡೆದಿದೆ. ಸೌಮ್ಯ ಹಲ್ಲೆಗೊಳಗಾದ ಯವತಿಯಾಗಿದ್ದು, ಆಕೆಯನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ನರಸಿಂಹರಾಜುವನ್ನು ಕೋಲಾರ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಹಾಸನ : ಮೂರು ಹೆಣ್ಣುಮಕ್ಕಳನ್ನು ಹೆತ್ತ ಕಾರಣಕ್ಕೆ ಸರ್ಕಾರಿ ನೌಕರನೊಬ್ಬ ಪತ್ನಿ ಮತ್ತು ಮಕ್ಕಳನ್ನು ಥಳಿಸಿ ಮನೆಯಿಂದ ಹೊರ ಹಾಕಿದ ಘಟನೆ ಹಾಸನದ ನಿಡೂಡಿ ಗ್ರಾಮದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿರುವ ಚಂದ್ರಶೇಖರ್ ಪತ್ನಿ ನಾಗರತ್ನ ಅವರನ್ನು ಮನೆಯಿಂದ ಹೊರ ಹಾಕಿದ್ದಾನೆ. ಪ್ರಕರಣದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಸಂಧಾನ ನಡೆಸಿದ್ದಾರೆ.
ಯಾದಗಿರಿ : ರೇಷನ್ ಕಾರ್ಡ್ ಪಡೆಯಲು ಫೋಟೋ ತೆಗೆಯಲು ಹೋಗಿದ್ದ ಎರಡು ಕುಟುಂಬದ ಏಳು ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಪೋಟೋ ತೆಗಿಸಿಕೊಂಡು ಗೂಡ್ಸ್ ಆಟೋದಲ್ಲಿ ಮರಳುತ್ತಿದ್ದ ಇವರಿಗೆ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಏಳು ಜನರು ಮೃತಪಟ್ಟಿದ್ದಾರೆ. ಮೂವರು ಗಂಭೀತವಾಗಿ ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು : ತುರುವೇಕರೆ ತಾಲೂಕಿನಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕನೊಬ್ಬ ಬುಧವಾರ ಮೃತಪಟ್ಟಿದ್ದಾನೆ. ತಾಲೂಕಿನ ದುಂಡಿ ಗ್ರಾಮದ ದರ್ಶನ್ (10) ಮೃತಪಟ್ಟ ಬಾಲಕ. ಕಳೆದ ಒಂದು ವಾರದಿಂದ ದರ್ಶನ್ ಜ್ವರದಿಂದ ಬಳಲುತ್ತಿದ್ದ. ತುಮಕೂರು ಜಿಲ್ಲಾ ಆಸ್ಪತ್ರೆಗೆ ದರ್ಶನ್ ಅವರನ್ನು ದಾಖಲು ಮಾಡಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.












Click it and Unblock the Notifications