ಬಿಎಸ್ವೈ ಜೊತೆ ಶೋಭಾ ಮಾತ್ರ ಬಿಜೆಪಿಗೆ ಮಿಕ್ಕವರು?
ಬೆಂಗಳೂರು, ಜು.10: ರಾಷ್ಟ್ರೀಯ ನಾಯಕರ ಸಂಧಾನ ಯಶಸ್ವಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರು ಸೇರ್ಪಡೆಯಾಗುವ ಕಾಲ ಬಂದಿದೆ. ಬಿಎಸ್ ಯಡಿಯೂರಪ್ಪ ಅವರು ಆಪ್ತೆ ಶೋಭಾ ಕರಂದ್ಲಾಜೆ ಜೊತೆಗೆ ಮತ್ತೊಮ್ಮೆ ಬಿಜೆಪಿ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಅವರ ಬೆಂಬಲಿಗರ ಹಿತ ಕಾಯುವರೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದರೆ ಆಗಸ್ಟ್ ತಿಂಗಳ ಎರಡನೆ ವಾರದಲ್ಲಿ ಯಡಿಯೂರಪ್ಪ ಬಿಜೆಪಿ ಸೇರ್ಪಡೆಗೆ ಮತ್ತೆ ಚಾಲನೆ ದೊರಕಲಿದೆ. ಎರಡನೆ ವಾರದಲ್ಲಿ ಗುಜರಾತ್ ಮುಖ್ಯಮಂತ್ರಿ ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಗೊಳಿಸುವ ಕಾರ್ಯ ಮತ್ತೆ ಚುರುಕುಗೊಳ್ಳಲಿದೆ. ಒಂದು ವೇಳೆ ಯಡಿಯೂರಪ್ಪ ಕಮಲ ಪಕ್ಷದ ತೆಕ್ಕೆಗೆ ಮರಳಿದರೆ ಅವರ ಬೆಂಬಲಿಗರ ಮುಂದಿನ ರಾಜಕೀಯ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವವಾಗಿದೆ.
ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಂಬ ಊಹಾಪೋಹಗಳು ಎದ್ದಿರುವುದರಿಂದ ಅವರನ್ನೇ ನಂಬಿಕೊಂಡಿರುವ ಬೆಂಬಲಿಗರ ಗತಿ ಏನು ಎಂಬಂತಾಗಿದೆ. ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆಯಾದರೂ ಅವರ ಬೆಂಬಲಿಗರಿಗೆ ಮಾತ್ರ ಕೆಂಪು ಹಾಸಿನ ರತ್ನಗಂಬಳಿ ಸಿಗುತ್ತದೆ ಎಂಬ ಖಾತರಿ ಇಲ್ಲ. ಬಿಜೆಪಿಗೆ ಯಡಿಯೂರಪ್ಪ ಮಾತ್ರ ಹೋಗ್ತಾರಾ? ಬೆಂಬಲಿಗರು ಕೆಜೆಪಿಯಲ್ಲೆ ಉಳಿಯುತ್ತಾರಾ? ಮೋದಿ ಮಾಡಿರುವ ತಂತ್ರವೇನು? ಮುಂದೆ ಓದಿ...

ಗೊಂದಲದ ಹೇಳಿಕೆ
ಬಿಜೆಪಿ ಮರು ಸೇರ್ಪಡೆ ಬಗ್ಗೆ ಸ್ಪಷ್ಟವಾಗಿ ಉತ್ತರಿಸದ ಯಡಿಯೂರಪ್ಪ, ಆಹ್ವಾನ ಬಂದರೆ ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿರುವುದನ್ನು ಇಲ್ಲಿ ಓದಿರುತ್ತೀರಿ. ಇದರ ಜೊತೆಗೆ ಕೆಜೆಪಿ ಯಾವ ಪಕ್ಷದ ಜೊತೆಗೂ ವಿಲೀನಗೊಳಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದನ್ನು ಸ್ಮರಿಸಬಹುದು.
ಕೆಜೆಪಿಯನ್ನು ಅನಾಥ ಮಾಡಬೇಡಿ ಎಂದು ಹೇಳುತ್ತಿದ್ದ ಯಡಿಯೂರಪ್ಪ ಸ್ವತಃ ತಾವೇ ಬಿಜೆಪಿ ಕಡೆ ಮುಖ ಮಾಡಿರುವುದು ಬೆಂಬಲಿಗರ ಗೊಂದಲಕ್ಕೆ ಕಾರಣವಾಗಿದೆ. ವಕ್ತಾರ ಧನಂಜಯ್ ಕುಮಾರ್ ಕೂಡಾ ಬಿಜೆಪಿ ಜೊತೆ ಕೆಜೆಪಿ ವಿಲೀನವಾಗುವುದಿಲ್ಲ. ಕೆಜೆಪಿ ಹಾಗೆ ಉಳಿದು ಬೆಂಬಲ ನೀಡಲಿದೆ ಎಂದಿದ್ದರು. ಲಾಭ-ನಷ್ಟದ ಬಗ್ಗೆ ಚರ್ಚೆ ಜಾರಿಯಲ್ಲಿದೆ.
ಮುಂದೇನು ಎಂಬ ಪ್ರಶ್ನೆ?
ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಅವರನ್ನು ಹಿಂಬಾಲಿಸಿದ ಪ್ರಮುಖರಲ್ಲಿ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಸಿ.ಎಂ.ಉದಾಸಿ, ಎಂ.ಪಿ.ರೇಣುಕಾಚಾರ್ಯ, ಹರತಾಳ ಹಾಲಪ್ಪ , ಮಾಜಿ ಶಾಸಕರಾದ ರಾಮಚಂದ್ರ, ಬಿ.ಪಿ.ಹರೀಶ್, ಮಾಡಾಳ್ ವಿರೂಪಾಕ್ಷಪ್ಪ, ನೆಹರೂ ಓಲೇಕಾರ್, ಜಿ.ಶಿವಣ್ಣ, ಮೋಹನ್ ಲಿಂಬಿಕಾಯಿ, ಶಿವರಾಜ್ ಸಜ್ಜನ್ ಸೇರಿದಂತೆ ಪ್ರಮುಖರು ತಮ್ಮ ನಾಯಕನ ಹಿಂದೆ ಹೋಗಿದ್ದರು.

ಸದಾನಂದ- ಅನಂತ್ ಕೂಡಾ ಒಪ್ಪಿಗೆ
ಯಡಿಯೂರಪ್ಪ ಪಕ್ಷ ಸೇರ್ಪಡೆಗೆ ಸದಾನಂದಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಸಿ.ಟಿ.ರವಿ ವಿಶೇಷ ಕಾಳಜಿ ವಹಿಸಿದ್ದಾರೆ.
ಲೋಕಸಭೆ ಚುನಾವಣೆ 2014 ಹಿತದೃಷ್ಟಿಯಿಂದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅಣತಿಯಂತೆ ಯಡಿಯೂರಪ್ಪ ಅವರನ್ನು ಸಹಿಸಿಕೊಳ್ಳಲು ಮುಂದಾಗಿರುವ ಈ ನಾಯಕರು ಅವರ ಬೆಂಬಲಿಗರ ಹೆಸರು ಕೇಳಿದರೆ ಉರಿದು ಬೀಳುತ್ತಾರೆ. ಹೀಗಾಗಿ ಬೆಂಬಲಿಗರ ಆತಂಕ ಇನ್ನಷ್ಟು ಹೆಚ್ಚಿದೆ.

ಮುಖ್ಯವಾಗಿ ಇವರಿಗೆ ಭೀತಿ
ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಬಿ.ಪಿ.ಹರೀಶ್, ಕೇಂದ್ರದ ಮಾಜಿ ಸಚಿವ ಧನಂಜಯಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ, ಬಿ.ಜೆ.ಪುಟ್ಟಸ್ವಾಮಿ, ಭಾರತಿ ಶೆಟ್ಟಿ ಅವರ ಆಟಾಟೋಪಗಳನ್ನು ಸಹಿಸಲು ಬಿಜೆಪಿ ನಾಯಕರೇ ಹಿಂದೇಟು ಹಾಕಿದ್ದಾರೆ.

ಮೋದಿ ಮೇಲೆ ಅವಲಂಬಿತ
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ.ಎಸ್.ಈಶ್ವರಪ್ಪ, ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಸಚಿವರಾದ ಸಿ.ಟಿ.ರವಿ, ಎಸ್.ಎ.ರವೀಂದ್ರನಾಥ್, ಸೊಗಡು ಶಿವಣ್ಣ ವಿರುದ್ಧ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ ಮತ್ತಿತರರು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದರು.
ಅದರೆ, ಮೋದಿ ಅವರ ಆಗಮನದ ನಂತರ ಎಲ್ಲವೂ ತಿಳಿಗೊಳ್ಳುವ ಸಾಧ್ಯತೆಯಿದೆ. ಸಮರ್ಥ ನಾಯಕರನ್ನು ಈಗಾಗಲೇ ಮೋದಿ ಪಡೆ ಗುರುತಿಸಿದ್ದು, ಅವರನ್ನು ಮಾತ್ರ ಚುನಾವಣಾ ದೃಷ್ಟಿಯಿಂದ ಆರಿಸುವ ಕಾರ್ಯಕ್ಕೆ ಮುಂದಾಗುವ ಸಾಧ್ಯತೆ ನಿಚ್ಚಳ ವಾಗಿದೆ.
ಬಾಹ್ಯ ಬೆಂಬಲ ಸಾಧ್ಯವೇ?
ಯಡಿಯೂರಪ್ಪ ಹಾಗೂ ಒಂದಿಬ್ಬರು ಬೆಂಬಲಿಗರು ಮಾತ್ರ ಬಿಜೆಪಿಗೆ ಸೇರ್ಪಡೆಗೊಂಡು ಮಿಕ್ಕವರು ಕೆಜೆಪಿಯನ್ನು ಹಾಗೆ ಮುಂದುವರೆಸಿಕೊಂಡು ಹೋಗುವ ಸಾಧ್ಯತೆಯೂ ಇದೆ. ಚುನಾವಣೆ ನಂತರ ಕೆಜೆಪಿ ಹಾಗೂ ಬಿಜೆಪಿ ವಿಲೀನ ಮಾಡುವ ಬಗ್ಗೆ ಬಿಎಸ್ ವೈ ಒಲವು ತೋರಿದ್ದಾರೆ.
ಹಾಲಿ ರಾಜ್ಯ ಬಿಜೆಪಿ ಮುಖಂಡರಾದ ಸದಾನಂದ ಗೌಡ, ಮುರುಗೇಶ್ ನಿರಾಣಿ, ಆರ್ ಅಶೋಕ್ ಮುಂತಾದವರು ಲೋಕಸಭೆಗೆ ಪ್ರವೇಶ ಬಯಸಿದ್ದಾರೆ. ಹೀಗಾಗಿ ಬಿಟ್ಟ ಸ್ಥಳ ತುಂಬುವ ಕೆಲಸ ಕೆಜೆಪಿಗೆ ವಲಸೆ ಹೋದ ಮೂಲ ಬಿಜೆಪಿಗರು ಮಾಡುವ ಸಾಧ್ಯತೆಯಿದೆ. ಒಟ್ಟಾರೆ ಎರಡು ಕಡೆ ಲಾಭ-ನಷ್ಟದ ಪ್ರಶ್ನೆ ಉದ್ಭವವಾಗಿದೆ. ಮೋದಿ ಪಕ್ಕಾ ವ್ಯವಹಾರ ಮಾಡುತ್ತಿದ್ದು, ಯಡಿಯೂರಪ್ಪ ಪಟ್ಟು ಸಡಿಲಗೊಳಿಸುತ್ತಿಲ್ಲ












Click it and Unblock the Notifications