ಆಲಮಟ್ಟಿ ಭರ್ತಿಗೆ ನಾಲ್ಕು ಮೀ.ಬಾಕಿ!
ಬೆಂಗಳೂರು, ಜು.10 : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅರ್ಭಟ ಕಡಿಮೆಯಾಗಿದೆ. ನದಿಗಳ ಪ್ರವಾಹಗಳು ಇಳಿಮುಖವಾಗಿವೆ. ವಿವಿಧ ಜಲಾಶಯಗಳಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ.
ಕಾವೇರಿ ನದಿ ಪಾತ್ರದ ಹಾರಂಗಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿದ್ದು, ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 110 ಅಡಿ ತಲುಪುತ್ತಿದೆ. ಲಿಂಗನಮಕ್ಕಿ, ತುಂಗಭದ್ರಾ ಮುಂತಾದ ಜಲಾಶಯಗಳ ಭರ್ತಿಯಾಗುತ್ತಿವೆ.

ನಾಲ್ಕು ಮೀ.ಬಾಕಿ : ಬಸವನಬಾಗೇವಾಡಿ ತಾಲೂಕಿನಲ್ಲಿರುವ ಆಲಮಟ್ಟಿ ಜಲಾಶಯ ಭರ್ತಿಯಾಗಲು ಕೇವಲ ನಾಲ್ಕು ಮೀ ನೀರಿನ ಅಗತ್ಯವಿದೆ. ಕೃಷ್ಣಾ ನದಿ ಕಣಿವೆಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಜಲಾಶಯದಲ್ಲಿ 515.60 ಮೀಟರ್ ಗಳಷ್ಟು ನೀರು ಸಂಗ್ರಹವಾಗಿದೆ.
ಜಲಾಶಯದ ಗರಿಷ್ಠ ಮಟ್ಟ 519.60 ಮೀ. ಆಗಿದ್ದು, ಭರ್ತಿಯಾಗಲು ಕೇವಲ 4 ಮೀ.ನೀರು ಬೇಕಾಗಿದೆ. ಜಲಾಶಯದಿಂದ ಯಾವುದೇ ಸಮಯದಲ್ಲಿ ಗೇಟ್ ತೆರೆದು ಕೃಷ್ಣಾ ನದಿಗೆ ನೀರು ಬಿಡಲಾಗುವುದು. ಆದ್ದರಿಂದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ಜಲಾಶಯದ ಅಭಿಯಂತರರು ಮನವಿ ಮಾಡಿದ್ದಾರೆ.
ತುಂಬಿತು ಕೆಆರ್ಎಸ್ : 124.80 ಅಡಿ ಗರಿಷ್ಠ ಸಾರ್ಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಮಂಗಳವಾರ ರಾತ್ರಿಯ ವೇಳೆಗೆ 109.35 ಅಡಿ ನೀರು ಸಂಗ್ರಹವಾಗಿತ್ತು.14,782 ಕ್ಯುಸೆಕ್ ಒಳ ಹರಿವು ದಾಖಲಾಗಿತ್ತು. 1,844 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯಗಳ ನೀರಿನ ಮಟ್ಟ
ಜಲಾಶಯ ಇಂದಿನ ಮಟ್ಟ ಗರಿಷ್ಠ ಮಟ್ಟ
ಕೆಆರ್ಎಸ್ 109.35 ಅಡಿ 124.80 ಅಡಿ
ಆಲಮಟ್ಟಿ 515.60 ಮೀ 519.60 ಮೀ
ಲಿಂಗನಮಕ್ಕಿ 1,785.50 ಅಡಿ 1,819 ಅಡಿ
ತುಂಗಭದ್ರಾ 1,619.55 ಅಡಿ 1,633 ಅಡಿ
ಕಬಿನಿ 2,282.50 ಅಡಿ 2,284 ಅಡಿ
ಹಾರಂಗಿ 2,856.06 ಅಡಿ 2,859 ಅಡಿ
ಭದ್ರಾ 155.40 ಅಡಿ 186 ಅಡಿ












Click it and Unblock the Notifications