ಅನ್ನ ಭಾಗ್ಯ ಜಾರಿಗೆ ಕ್ಷಣಗಣನೆ; ಯಾರು ಏನನ್ನುತ್ತಾರೆ?
ಬೆಂಗಳೂರು, ಜುಲೈ9: ವೈಯಕ್ತಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ಯಾಯಮಾನವಾಗಿರುವ ಬಿಪಿಎಲ್ ಕಾರ್ಡುದಾರರಿಗಾಗಿ 'ಅನ್ನ ಭಾಗ್ಯ'ದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ತೂಕ ತಪ್ಪದೆ ಸಕಾಲದಲ್ಲಿ ಅಂದರೆ ನಾಳೆಯಿಂದಲೇ ಬಹುತೇಕ ಜಿಲ್ಲೆಗಳಲ್ಲಿ 1 ರೂಪಾಯಿಗೆ 1 ಕೆಜಿ ಅಕ್ಕಿ ವಿತರಿಸುವ ಸರಕಾರಿ ಯೋಜನೆ ಜಾರಿಯಾಗುವುದು ನಿಶ್ಚಿತವಾಗಿದೆ.
ಸಿಎಂ ಸಿದ್ದು ಅವರ ಈ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಾಪಕವಾಗಿ ದಾಖಲಾಗಿವೆ. ಯೋಜನೆ ಜಾರಿ ಮಾಡುವುದು ತಾವು ಏಕಪಕ್ಷೀಯವಾಗಿ ಘೋಷಿಸಿದಷ್ಟು ಸಲುಭವಲ್ಲ. ಅದು ನಿಜಕ್ಕೂ ತ್ರಾಸದಾಯಕ ಎಂಬುದು ಸ್ವತಃ ಸಿದ್ದರಾಮಯ್ಯ ಅವರ ಅರಿವಿಗೆ ಬಂದಿದೆ.
ಆದರೂ ಯಾರು ಏನೇ ಹೇಳಲಿ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಎಂಬುದು ಸಿಎಂ ಸಿದ್ದು ಅವರ ಸಿದ್ಧ ಮಂತ್ರ. ಅವರಿಗೆ ಬೆನ್ನೆಲುಬಾಗಿ ಯುವ ಸಚಿವ ದಿನೇಶ್ ಗುಂಡೂರಾವ್ ನಿಂತಿದ್ದಾರೆ.
ಬಿಪಿಎಲ್ ಕಾರ್ಡು ಹೊಂದಿದ್ದರೆ ನಾಳೆಯಿಂದ ನೀವು 'ಅನ್ನ ಭಾಗ್ಯ'ವಂತರಾಗುತ್ತೀರಿ. ಅದಕ್ಕೂ ಮುನ್ನ, ಈ ಯೋಜನೆಯ ಬಗ್ಗೆ ಯಾರು ಏನು ಹೆಳಿದ್ದಾರೆ, ಒಮ್ಮೆ ನೋಡಿಕೊಂಡು ಬರೋಣ, ಸ್ಲೈಡ್ ಪ್ಲೀಸ್.

ನ್ಯಾ. ವಿಎಸ್ ಮಳೀಮಠ ಕಿಡಿಕಿಡಿ
ಒಂದು ರುಪಾಯಿಗೆ ಒಂದು ಕೆ.ಜಿ ಅಕ್ಕಿ ನೀಡುವ ಮೂಲಕ ರಾಜ್ಯದ ಜನರನ್ನು ಆಲಸಿಗಳನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಈ ಯೋಜನೆ ದೇಶದ ಅಭಿವೃದ್ಧಿಗೆ ಮಾರಕ. ನಾಗರಿಕರಿಗೆ ಉದ್ಯೋಗ ನೀಡಬೇಕಿರುವ ಸರ್ಕಾರ ಮನೆಯಲ್ಲಿಯೇ ಕುಳಿತು ತಿಂದು ಆಲಸಿಗಳಾಗಲು ಯೋಜನೆ ರೂಪಿಸುತ್ತಿದೆ. ರಾಜ್ಯದ ಜನತೆಗೆ ಉದ್ಯೋಗ ಕಲ್ಪಿಸಬೇಕಾದ ಸರ್ಕಾರ ಮನೆಯಲ್ಲಿಯೆ ಕುಳಿತು ತಿನ್ನುವಂತೆ ಹೇಳುತ್ತಿದೆ. ಅರ್ಹತೆ ಆಧರಿಸಿ ಉದ್ಯೋಗ ನೀಡಿ ಜನರು ಕೆಲಸ ಮಾಡಿ ಊಟ ಮಾಡುವಂತೆ ಮಾಡಬೇಕಿರುವುದು ಪ್ರತಿಯೊಂದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆದರೆ ಆಡಳಿತ ನಡೆಸುತ್ತಿರುವವರ ಚಿಂತನೆ ವಿರುದ್ಧ ದಿಕ್ಕಿನಲ್ಲಿ ಸಾಗಿದೆ ಎಂದು ಕರ್ನಾಟಕ, ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯನ್ಯಾಯಮೂರ್ತಿ ವಿಎಸ್ ಮಳೀಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಚಿತ್ರ ಕೃಪೆ: ದಿ ಹಿಂದೂ)

ಹಿರಿಯ ಕಾರ್ಪೊರೇಟ್ ಉದ್ಯಮಿ ಮೋಹನ್ದಾಸ್ ಪೈ
ಅನ್ನ ಭಾಗ್ಯ ಯೋಜನೆಯನ್ನು ಈಗಲೇ ವಾಪಸ್ ಪಡೆಯಿರಿ. ರಾಜಕೀಯ ಬಿಟ್ಟು ಮೇಲ್ಪಂಕ್ತಿಯಲ್ಲಿ ಆಲೋಚಿಸಿ. ಈ ಯೋಜನೆಯಿಂದ ರಾಜ್ಯದ ಖಜಾನೆ ಮೇಲೆ ಭಾರಿ ಹೊರೆ ಬೀಳುತ್ತದೆ.
ಸರಕಾರವೇನೂ ಬಿಟ್ಟಿಯಾಗಿ ಈ ಅಕ್ಕಿ ಕೊಡುತ್ತಿಲ್ಲ. ತೆರಿಗೆದಾರರಿಂದ ಹಣ ವಸೂಲು ಮಾಡಿ ಯೋಜನೆ ಕಾರ್ಯಗತಗೊಳಿಸುತ್ತಿದೆ. ಇದರಿಂದ ತೆರಿಗೆದಾರರ ಹಣ ಲೂಟಿ ಮಾಡಿದಂತೆಯೇ ಸರಿ.
ಅದರೆ ಬದಲು ಯೋಜನೆಗೆ ಬಳಸುವ 4,000 ಕೋಟಿ ರೂಪಾಯಿಯನ್ನು ಕೌಶಲ್ಯ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿ. ಅದರಿಂದ ಕಲಿತ ಜನ ಶ್ರಮಪಟ್ಟು ತಮ್ಮ ಹೊಟ್ಟೆ ಪಾಡನ್ನು ತಾವೇ ನೋಡಿಕೊಳ್ಳುತ್ತಾರೆ.

ಬಿಜೆಪಿ ಏನನ್ನುತ್ತದೆ?
ಪ್ರತಿಪಕ್ಷವಾದ ಬಿಜೆಪಿ ಅನ್ನ ಭಾಗ್ಯ ಯೋಜನೆ ಕರ್ನಾಟಕಕ್ಕೆ ಸೂಕ್ತವಲ್ಲ ಎಂದು ಜರಿದಿದೆ. ಸಿಎಂ ಸಿದ್ದು ಆತುರಾತುರವಾಗಿ/ ಏಕಪಕ್ಷೀಯವಾಗಿ ಸಾಧಕ-ಬಾಧಕಗಳ ಬಗ್ಗೆ ಯೋಚಿಸದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಸಲಿಗೆ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲೇನೂ ಭತ್ತವನ್ನು ಬೆಳೆಯುತ್ತಿಲ್ಲ. ಸಿದ್ದರಾಮಯ್ಯ ಈ ಬಗ್ಗೆ ಯೋಚಿಸಬೇಕಿತ್ತು.

ಜೆಡಿಎಸ್ ಕುಮಾರಸ್ವಾಮಿ ಏನನ್ನುತ್ತಾರೆ
''ನೋಡಿ, ರಾಜ್ಯದಲ್ಲಿ ಹಾಲು ಭಾರಿ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಯೋಜನೆ ಪ್ರಕಟಿಸಿರುವುದು ಸ್ವಾಗತಾರ್ಹ. ಮತ್ತು ಯಾವುದೇ ಕಾರಣಕ್ಕೂ ಈ ಯೋಜನೆಯಿಂದ ಹಿಂದೆ ಸರಿಯಬಾರದು ಎಂದು ಮೆಚ್ಚುಗೆ ಸೂಚಿಸಿರುವ ಪ್ರತಿಪಕ್ಷ ನಾಯಕ ಜೆಡಿಎಸ್ ಪಕ್ಷದ ಎಚ್ ಡಿ ಕುಮಾರಸ್ವಾಮಿ ಅವರು ಅದೇ ಉಸುರಿನಲ್ಲಿ ಅನ್ನ ಭಾಗ್ಯ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅಸಲಿಗೆ ಅದು ಜಾರಿಗೆ ತರಲು ಸಾಧ್ಯವಾಗದ ಮಾತು. ಎಲ್ಲಿದೆ ಅಷ್ಟೊಂದು ಅಕ್ಕಿ? ಅನಗತ್ಯವಾಗಿ ಹಣ ಪೋಲು ಮಾಡಿದಂತಾಗುತ್ತದೆ ಅಷ್ಟೇ.''

ಚುಟುಕಿಗೆ ದೇವನೂರು ಮಹಾದೇವ ಕುಟುಕು
ಸರಕಾರ ಕಡಿಮೆ ಬೆಲೆಗೆ ಅಕ್ಕಿ ಕೊಟ್ಟರೆ ಬಡವರು ಕೆಲಸ ಮಾಡದೆ ನಿದ್ದೆ ಹೋಗುತ್ತಾರೆ ಎಂದು ಅರ್ಥೈಸುವ 'ಫೇಸ್ ಬುಕ್' ಕವನವನ್ನು ತರಾಟೆಗೆ ತೆಗೆದುಕೊಂಡಿರುವ ಸಾಹಿತಿ ದೇವನೂರು ಮಹಾದೇವ ಅವರು ಅನ್ನ ಭಾಗ್ಯ ಯೋಜನೆಯನ್ನು ಸ್ವಾಗತಿಸಿದ್ದಾರೆ.
'ಬಡವರಿಗೆ ಅಕ್ಕಿ ನೀಡಿದರೆ ನಿದ್ದೆ ಮಾಡುತ್ತಾರೆ ಎಂಬ ಧೋರಣೆ ಕ್ರೂರ ವ್ಯಂಗ್ಯ ಅಷ್ಟೆ. ಇದನ್ನು ನಾವು ಪ್ರಶ್ನಿಸಬೇಕಿದೆ. ಹೊಟ್ಟೆ ತುಂಬಿದವರು, ರಾತ್ರಿ ನಶೆಗಾಗಿ ದೇಶಿ- ವಿದೇಶಿ ಮದ್ಯ ಕುಡಿಯುವವರ ವಾಂಛೆಯನ್ನು ಇದು ತೋರಿಸುತ್ತದೆ' ಎಂದು ಕುಟುಕಿದ್ದಾರೆ.












Click it and Unblock the Notifications