ಬಂದ್ರೂ ಬರ್ಲಿ, ಬಿಟ್ರೂ ಬಿಡ್ಲಿ, ಏನಾದ್ರೂ ಮಾಡ್ಕೊಳ್ಳಲಿ
ಬೆಂಗಳೂರು, ಜು. 3 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮರಳಿ ಭಾರತೀಯ ಜನತಾ ಪಕ್ಷಕ್ಕೆ ಸೇರಬೇಕಾ, ಬೇಡವಾ? ಬರ್ತಾರಾ, ಇಲ್ವಾ? ಎಂಬ ಪ್ರಶ್ನೆಗಳು ಚಿದಂಬರ ರಹಸ್ಯದಂತೆ ಕಾಡುತ್ತಿವೆ. ಜೊತೆಗೆ ಅವರನ್ನು ಬರಮಾಡಿಕೊಳ್ಳುವವರಿಗೆ ಸಡಗರ, ಅವರು ಬೇಡವೇ ಬೇಡ ಅನ್ನುವವರಿಗೆ ಮುಜುಗರ ಕೂಡ ತಂದಿಟ್ಟಿದೆ.
ಯಡಿಯೂರಪ್ಪ ಬರಲೇಬೇಕು ಎಂದು ಪಟ್ಟುಹಿಡಿದು ಕುಳಿತವರು, ಅವರು ಬರದಿದ್ದರೆ ಮುಳುಗೇಹೋಗ್ತೀವಿ ಎಂಬಂತೆ ಆಡುತ್ತಿದ್ದಾರೆ. ಅವರನ್ನು ವಿರೋಧಿಸುತ್ತಿರುವವರು, ಅವರು ಬಂದರೆ ಅವರು ತಾವು ಮುಳುಗುವುದಲ್ಲದೆ ನಮ್ಮನ್ನೂ ಎಳೆದುಕೊಳ್ಳುತ್ತಾರೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಬೇರೆ ಯಾವ ನಾಯಕನಿಗೂ ಇಲ್ಲದಂತಹ ಚರ್ಚೆಗೆ ಈ ವಿಷಯ ವೇದಿಕೆ ಕಲ್ಪಿಸಿದೆ.
ಅವರು ತಾವಾಗೇ ಪಕ್ಷ ತೊರೆದಿದ್ದರಿಂದ, ತಾವೇ ಸ್ವತಃ ಬರುವ ಪ್ರಸ್ತಾವನೆ ಮುಂದಿಟ್ಟರೆ ನೋಡೋಣ ಎಂದು ಬಿಜೆಪಿ ಹೈಕಮಾಂಡ್ ನಿಲುವು ತಾಳಿದೆ. ಈ ನಿರ್ಧಾರ ಅವರನ್ನು ಸ್ವಾಗತಿಸುವವರಿಗೆ, ವಿರೋಧಿಸುತ್ತಿರುವವರಿಗೆ ಬಾಯಲ್ಲಿ ಹಾಕಿಕೊಂಡ ಬಿಸಿತುಪ್ಪದಂತಾಗಿದೆ. ನುಂಗಬೇಕೋ, ಉಗುಳಬೇಕೋ ಗೊತ್ತಾಗದಂಥ ಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಪ್ರಶ್ನೆಗೆ ಓದುಗರ ಉತ್ತರ
ಇಂಥದೇ ವಿಷಯ ಮುಂದಿಟ್ಟುಕೊಂಡು ನಮ್ಮ ಓದುಗರಿಗೆ ನಾವು ಒಂದು ಪ್ರಶ್ನೆ ಮುಂದಿಟ್ಟಿದ್ದೆವು. ಯಡಿಯೂರಪ್ಪ ಬಿಜೆಪಿಗೆ ಮರಳಿ ಬರಬೇಕಾ, ಬೇಡವಾ? ಎಂದು. ತಮಾಷೆ ಅಂದ್ರೆ, ಬಂದರೆ ಒಳ್ಳೆಯದು ಎಂಬ ಆಯ್ಕೆಗೆ ಹೆಚ್ಚಿನ ಮತಗಳು (ಶೇ.41ರಷ್ಟು) ಬಿದ್ದಿವೆ. ಬರುವುದು ಬೇಡ ಎಂಬ ಆಯ್ಕೆಗೆ ಶೇ.30ರಷ್ಟು ಮತಗಳು ಬಿದ್ದಿದ್ದು, ಏನಾದ್ರೂ ಮಾಡಿಕೊಳ್ಳಲಿ ಎಂಬ ಆಯ್ಕೆಗೆ ಶೇ.1ರಷ್ಟು ಕಡಿಮೆ ಮತಗಳು (ಶೇ.29) ಬಿದ್ದಿವೆ.

ವಾಪಸ್ ಬಂದರೆ ಯಾರಿಗೆ ಒಳ್ಳೆಯದು?
ಸಮರ್ಥ ನಾಯಕರಿಲ್ಲದೆ ಎಲೆ ಮುರಿದುಕೊಂಡ ಕಡ್ಡಿಯಂತಾಗಿರುವ ಬಿಜೆಪಿಗೆ ನವಚೈತನ್ಯ ಬರುವುದಂತೂ ಖಂಡಿತ. ಲೋಕಸಭೆ ಚುನಾವಣೆ ಎದುರಿಸಲು ಹೊಸ ಶಕ್ತಿ ಬಂದಂತಾಗುತ್ತದೆ. ಎರಡನೇ ಸಾಲಿನ ನಾಯಕರನೇಕರಿಗೆ ಬೇಕಾಗಿರುವುದೂ ಇದೇ. ಕೆಜೆಪಿಯೊಡನೆ ಆಗಾಗ ಕಾಣಿಸಿಕೊಂಡು ಅಲ್ಲಿ ಹೋಗಲಾಗದೆ ಬಳಲುತ್ತಿದ್ದ ಕಟ್ಟಾ ಬೆಂಬಲಿಗರಿಗೆ ಯಡಿಯೂರಪ್ಪನವರ ಆಗಮ ಟಾನಿಕ್ ಸಿಕ್ಕಂತಾಗುತ್ತದೆ.

ವಾಪಸ್ ಬರದಿದ್ದರೆ ಏನಾಗಲಿದೆ?
ಮೊದಲ ಸಾಲಿನಲ್ಲಿರುವ ಅನಂತ್ ಕುಮಾರ್, ಈಶ್ವರಪ್ಪನವರಿಗೆ ಯಡಿಯೂರಪ್ಪ ಸುತಾರಾಂ ಬರುವುದು ಬೇಡವಾಗಿದೆ. ಅವರನ್ನು ವಾಪಸ್ ಕರೆಯಿಸಿಕೊಂಡರೆ ಅಂಗೈ ತೋರಿಸಿ ಅವಮಾನ ಮಾಡಿಸಿಕೊಂಡಂತೆ ಎಂಬ ಅಭಿಪ್ರಾಯ ಇವರು ಹೊಂದಿದ್ದಾರೆ. ಯಡಿಯೂರಪ್ಪ ವಾಪಸ್ ಬಂದರೆ ಇವರಿಗೆ ಮುಂದಾಳತ್ವ ತಪ್ಪುವುದಂತೂ ಖಂಡಿತ. ಆದರೆ, ಒಂದೇ ಒಂದು ಚುನಾವಣೆ ಗೆಲ್ಲಿಸಲು ಸಾಮರ್ಥ್ಯ ಇರದಿರುವ ಹಲವಾರು ನಾಯಕರು ಪಕ್ಷದಲ್ಲಿರುವುದು ಭಾರೀ ತಲೆನೋವಾಗಿ ಪರಿಣಮಿಸಿದೆ.

ಏನಾದ್ರೂ ಮಾಡಿಕೊಂಡು ಹೋಗ್ಲಿ
ಈ ಬಗೆಯ ತಟಸ್ಥ ನೀತಿಯನ್ನು ಅನೇಕ ನಾಯಕರು ಪಾಲಿಸುತ್ತಿದ್ದಾರೆ. ಹಿಂದೆ ಯಡಿಯೂರಪ್ಪನವರೊಡನೆ ಇದ್ದೂ ಇರದಂತೆ, ತಾವರೆ ಎಲೆಯ ಮೇಲಿನ ನೀರಿನಂತೆ ಇದ್ದ ಅನೇಕ ನಾಯಕರಿಗೆ ಯಡಿಯೂರಪ್ಪ ಬಂದರೂ ಸರಿ, ಬರದಿದ್ದರೂ ಸರಿ ಎಂಬ ನೀತಿ ಪಾಲಿಸುತ್ತಿದ್ದಾರೆ. ಏನಾದ್ರೂ ಮಾಡಿಕೊಳ್ಳಲಿ, ಬೇಕಿದ್ದರೆ ಹಾಳಾಗಿ ಹೋಗಲು ಎಂದು ಹೇಳುವ ಮತದಾರರು ಕೂಡ ಕಡಿಮೆಯೇನಿಲ್ಲ.

ಚೆಂಡು ಇರುವುದು ಬಿಎಸ್ವೈ ಅಂಗಳದಲ್ಲಿ
ಕೆಜೆಪಿ ಕಟ್ಟಿ ಯಡಿಯೂರಪ್ಪನವರು ಕರ್ನಾಟಕದಲ್ಲಿ ಸಾಧಿಸಿದ್ದು ಅಷ್ಟರಲ್ಲಿಯೇ ಇದೆ. ಮತದಾರರು ಚುನಾವಣೆಯಲ್ಲಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿ ಹಾಕಿದ್ದಾರೆ. ಆದರೆ, ದೇಶದಲ್ಲಿ ಅವರು ಬೆಂಬಲಿಸುವ ನರೇಂದ್ರ ಮೋದಿ ಹವಾ ಚಲಿಸುತ್ತಿರುವುದರಿಂದ, ಇದರ ಪ್ರಯೋಜನ ಪಡೆದು, ಕೆಲವೊಂದು ಷರತ್ತುಗಳನ್ನು ಹಾಕಿ ಬಿಜೆಪಿಗೆ ಅವರು ಬಂದರೂ ಬರಬಹುದು. ಒಂದು ವೇಳೆ ಬಂದರೂ ಮತದಾರ ತಿರಸ್ಕರಿಸಿಬಿಟ್ಟರೆ ಅಥವಾ ಪಕ್ಷದಲ್ಲಿ ಮತ್ತೆ ಬಂಡಾಯ ಶುರುವಾದರೆ ಎಂಬ ಚಿಂತನೆಯಲ್ಲೂ ಅವರು ಮುಳುಗಿದಂತಿದೆ.

ಹಾಗಿದ್ದರೆ ಅವರು ಏನು ಮಾಡಬೇಕು?
ರಾಜಕೀಯದಲ್ಲಿ ಯಾರೂ ಮಿತ್ರರಲ್ಲಿ, ಯಾರೂ ಶತ್ರುವಲ್ಲ. ಚುನಾವಣೆಯಲ್ಲಿ ವಿರೋಧ ಪಕ್ಷವನ್ನು ಸದೆಬಡಿಯಬೇಕಿದ್ದರೆ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಅಹಂಕಾರವನ್ನು ಕೆಜೆಪಿಯಲ್ಲಿಯೇ ಬಿಟ್ಟು ಭಾರತೀಯ ಜನತಾ ಪಕ್ಷವನ್ನು ಅವರು ಸೇರಿಕೊಳ್ಳುವುದೇ ಒಳಿತು. ಆದರೆ, ಸದ್ಯಕ್ಕೆ ಇದು ಸುಸೂತ್ರವಾಗಿ ಬಗೆಹರಿಯುವಂತೆ ಕಂಡುಬರುತ್ತಿಲ್ಲ. ಲಿಂಗಾಯತ ಮಠಾಧಿಪತಿಗಳು ಇದಕ್ಕೆ ಏನು ಹೇಳುತ್ತಾರೆ? ಅವರೇಕೆ ಮೌನ ವಹಿಸಿದ್ದಾರೆ?











Click it and Unblock the Notifications