ಕೋಲಾರ : ಮೂರು ಗಂಟೆಯಲ್ಲಿ ಮೂವರ ಕೊಲೆ!

ಮಂಗಳವಾರ ಬೆಳಗ್ಗೆ 10.30 ರ ಸುಮಾರಿಗೆ ಕೋಲಾರದ ಜಮಾಲ್ ನಗರದಲ್ಲಿ ಅಜ್ಮಲ್ (36) ಅವರನ್ನು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹಳೆಯ ದ್ವೇಷವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಬಂಗಾರಪೇಟೆ ತಾಲೂಕಿನಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ ಅಜ್ಮಲ್, ಅವರನ್ನು ರಾತ್ರಿ ಅಲ್ಲಿಯೇ ಕೊಲೆ ಮಾಡಿ. ಕೋಲಾರದ ಮನೆಯ ಬಳಿ ತಂದು ಹಾಕಿದ್ದಾರೆ ಎಂದು ಅಜ್ಮಲ್ ತಂದೆ ಹೇಳಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ಎರಡು ಕೊಲೆ : ಬೆಳಗ್ಗೆ 7 ಗಂಟೆಗೆ ಬಂಗಾರ ಪೇಟೆ ಬಸ್ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳನ್ನು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಕೂಲಿ ಕಾರ್ಮಿಕರಾಗಿದ್ದ ಇವರು ಪ್ರತಿದಿನ ಬಂಗಾರಪೇಟೆ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದರು.
ತಲೆಯ ಮೇಲೆ ಕಲ್ಲು ಎತ್ತಿಹಾಕಿರುವುದರಿಂದ ಮೃತ ಒಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮತ್ತೊಬ್ಬ ವ್ಯಕ್ತಿಯನ್ನು ಬೂದಿಕೋಟೆ ನಿವಾಸಿ ಸತೀಶ್ (25)ಎಂದು ಗುರುತಿಸಲಾಗಿದೆ. ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಲ್ಕು ದಿನದಲ್ಲಿ ಮೂರು ಕೊಲೆ : ಬಸ್ ನಿಲ್ದಾಣದ ಸಮೀಪ ಶುಕ್ರವಾರ ವ್ಯಕ್ತಿಯೊಬ್ಬರನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಮಂಗಳವಾರ ನಡೆದ ಕೊಲೆಗೂ ಹಿಂದಿನ ಕೊಲೆಗೂ ಸಾಮ್ಯತೆ ಕಂಡು ಬಂದಿದ್ದು, ಒಂದೇ ಗುಂಪು ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರಿಗೆ ಸವಾಲು : ಬಂಗಾಪೇಟೆ ಪಟ್ಟಣದಲ್ಲಿ ಒಂದೇ ವಾರದ ಅಂತರದಲ್ಲಿ ಮೂರು ಕೊಲೆಗಳು ನಡೆದಿದೆ. ಆರೋಪಿಗಳನ್ನು ಹಿಡಿಯುವುದು ಪೊಲೀಸರಿಗೆ ಸವಾಲಾಗಿದೆ. ಬಂಗಾರಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.











Click it and Unblock the Notifications