ಉತ್ತರಾಖಂಡದಲ್ಲಿ ಕಣ್ಮರೆಯಾಗಿರುವ ಕನ್ನಡಿಗರಿವರು
ಬೆಂಗಳೂರು, ಜು. 2 : ಕರ್ನಾಟಕದ ಯಾತ್ರಿಕರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆತರಲು ತೆರಳಿದ್ದ ರಕ್ಷಣಾ ತಂಡವು ಬಹುತೇಕ ಎಲ್ಲ ಯಾತ್ರಿಕರನ್ನು ಯಶಸ್ವಿಯಾಗಿ ರಕ್ಷಿಸಿ ಮರಳಿ ರಾಜ್ಯಕ್ಕೆ ಕರೆತಂದಿದೆ. ಆದರೆ 14 ಯಾತ್ರಿಕರು ಮಾತ್ರ ಕಣ್ಮರೆಯಾಗಿದ್ದು ಅವರ ಹುಡುಕಾಟ ಮುಂದುವರಿದಿದೆ. ಮಂಡ್ಯ ಜಿಲ್ಲೆ ಮದ್ದೂರಿನ ಒಂದೇ ಕುಟುಂಬದ 13 ಜನರು ಮತ್ತು ಮಂಗಳೂರಿನ ಒಬ್ಬರು ಯಾತ್ರಿಕರು ಈವರೆಗೆ ದೊರಕಿಲ್ಲ. ಆ ಯಾತ್ರಿಕರ ಪಟ್ಟಿ ಈ ಕೆಳಗಿನಂತಿದೆ.
1. ಎಂ.ಜಿ. ನಾಗರಾಜ್ (66)
2. ಸುಮಾ ನಾಗರಾಜ್ (55)
3. ಎಂ.ಎನ್. ನಾಗಶ್ರೀ ನಾಗರಾಜ್ (33)
4. ಅತುಲ್ ಚಂದ್ರ (10)
5. ಹಮೀತ್ ಚಂದ್ರ (5)
6. ಲತಾ ಸೀತಾರಾಮ್ (52)
7. ಎಂ.ಜಿ. ಗುರುರಾಜ (58)
8. ಉಮಾ ಗುರುರಾಜ (51)
9. ವಸಂತ ಕುಮಾರ್ ಎಸ್.ಪಿ. (59)
10. ಗೀತಾ (ಮಣಿ) (53)
11. ಎಂ.ಜಿ. ರಮೇಶ್ (49)
12. ಲಕ್ಷ್ಮಿ (40)
13. ಅನಿರುದ್ಧ (11) ಇವರೆಲ್ಲರೂ ಮದ್ದೂರಿನವರು ಮತ್ತು
14. ರವಿಕರಣ್, ಮಂಗಳೂರು

ಮುಖ್ಯಮಂತ್ರಿಯಿಂದ ಆತ್ಮೀಯ ಸ್ವಾಗತ : ಉತ್ತರಾಖಂಡದ ಮಹಾಮಳೆಯ ಸಂಕಷ್ಟದಿಂದ ಪಾರಾಗಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಹಾಗೂ ವಾರ್ತಾ ಸಚಿವ ಸಂತೋಷ್ ಎಸ್. ಲಾಡ್ ಜೊತೆ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಯಾತ್ರಾರ್ಥಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಆತ್ಮೀಯವಾಗಿ ಸ್ವಾಗತಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಂತೋಷ್ ಎಸ್. ಲಾಡ್ ಅವರ ನೇತೃತ್ವದಲ್ಲಿ ಆಗಮಿಸಿದ ಯಾತ್ರಿಕರನ್ನು ಕುರಿತು ಮಾತನಾಡಿದ ಮುಖ್ಯಮಂತ್ರಿ, ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರದ ಪರವಾಗಿ ಉತ್ತರಾಖಂಡಕ್ಕೆ ತೆರಳಿದ್ದ ಸಂತೋಷ್ ಎಸ್. ಲಾಡ್, ಉನ್ನತಾಧಿಕಾರಿಗಳ ತಂಡ ಹಾಗೂ ವೈದ್ಯಕೀಯ ತಂಡವನ್ನು ಅಭಿನಂದಿಸಿದರು. ರಾಜ್ಯದ ಯಾತ್ರಿಕರ ಸುರಕ್ಷತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿತ್ತೆಂದು ನುಡಿದರು.
ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಧಿಕಾರವತ್ತಾಗಿ ಮಾತನಾಡಬಲ್ಲ ಸಾಹಸ ಪ್ರವೃತ್ತಿಯ ಸಚಿವರೋರ್ವರನ್ನು ಯಾತ್ರಿಕರ ರಕ್ಷಣೆಗೆ ಕಳುಹಿಸಬೇಕೆಂದು ತೀರ್ಮಾನಿಸಿದಾಗ ತಮಗೆ ಥಟ್ಟನೆ ಹೊಳೆದಿದ್ದು ಸಂತೋಷ್ ಲಾಡ್ ಅವರ ಹೆಸರು. ತಾವು ದೂರವಾಣಿಯ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿರುವ ರಾಜ್ಯದ ಯಾತ್ರಿಕರ ರಕ್ಷಣೆಗೆ ತೆರಳುವಿರಾ? ಎಂದು ದೂರವಾಣಿ ಮೂಲಕ ತಿಳಿಸಿದ ಕೂಡಲೇ ರಕ್ಷಣಾ ಕಾರ್ಯಕ್ಕೆ ಹೊರಟು ನಿಂತ ಸಂತೋಷ್ ಲಾಡ್ ಅವರ ದಕ್ಷತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಕ್ಕೆ ಆಗಮಿಸಿದ ಯಾತ್ರಿಕರಿಗೆ ರಾಜ್ಯ ಸರ್ಕಾರ ವಾಸ್ತವ್ಯ ಹಾಗೂ ರಾತ್ರಿ ಭೋಜನದ ವ್ಯವಸ್ಥೆ ಶಿಕ್ಷಕರ ಸದನದಲ್ಲಿ ಮಾಡಿದೆ. ಬೆಳಗಿನ ಉಪಹಾರದ ನಂತರ ಯಾತ್ರಿಕರು ತಮ್ಮ ಊರುಗಳಿಗೆ ಹಾಗೂ ಮನೆಗಳಿಗೆ ತೆರಳಿದ್ದಾರೆ. ಡೆಹರಾಡೂನ್ನಿಂದ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ರಿಯಾಯಿತಿ ಪ್ರಯಾಣ ದರದಲ್ಲಿ ವಿಮಾನದಲ್ಲಿ ಆಗಮಿಸಲು ಅನುವು ಮಾಡಿಕೊಟ್ಟ ಜೆಟ್ ಏರ್ವೇಸ್ನ ವ್ಯವಸ್ಥಾಪಕ ಹರೀಶ್ ಶಣೈ ಅವರನ್ನೂ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.












Click it and Unblock the Notifications