ಬಿಎಸ್ವೈ ಮೌನ ಸಮ್ಮತಿ? ಶನಿವಾರ ಅಂತಿಮ ನಿರ್ಧಾರ

ಕೋರ್ ಕಮಿಟಿ ಸಭೆಯ ತೀರ್ಮಾನಕ್ಕೆ: ಈ ಮಧ್ಯೆ, ಬಿಜೆಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರೆಲ್ಲ ಯಡಿಯೂರಪ್ಪ ಬಿಜೆಪಿಗೆ ವಾಪಸಾಗುವ ಬಗ್ಗೆ ತಮ್ಮ ಅಭಿಪ್ರಾಯವನನ್ನು ತಿಳಿಸಿದ್ದಾರೆ.
ಶನಿವಾರ ರಾಷ್ಟ್ರೀಯ ನಾಯಕರ ಪೂರ್ವನಿಗದಿತ ಸಭೆ ನಡೆಯಲಿದೆ. ಇಂದಿನ ಸಭೆಯ ಆಶಯವನ್ನು ಮುಂದಿನ ನಿರ್ಧಾರಕ್ಕಾಗಿ ಆ ಸಭೆಯಲ್ಲಿ ಮಂಡಿಸಲಾಗುವುದು. ಆ ಸಭೆಯೇ ಅಂತಿಮ. ಹಿರಿಯ ನಾಯಕರು ಅಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗುತ್ತೇವೆ' ಎಂದು ತಿಳಿಸಿದ್ದಾರೆ.
ಜೂನ್ 29ರಂದು ಬೆಂಗಳೂರಿನಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿರುವ ಥಾವರ್ಚಂದ್ ಗೆಹ್ಲೊಟ್ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಸಭೆ ನಡೆಯಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಇಂದಿನ ಸಭೆಯಲ್ಲಿ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಗೋ ಮಧುಸೂಧನ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ದೇವರಾಜ್ ಮುಂತಾದ ನಾಯಕರು ಪಾಲ್ಗೊಂಡಿದ್ದರು. ಆದರೆ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಕಾಣಿಸಿಕೊಂಡರಾದರೂ ಸಭೆಯಲ್ಲಿ ಪಾಲ್ಗೊಳ್ಳದೇ ಇದ್ದುದು ವಿಶೇಷವಾಗಿತ್ತು.
ಅತ್ತ ಯಡಿಯೂರಪ್ಪ ನಿವಾಸದಲ್ಲಿ ಮಾತನಾಡಿದ ಮಾಜಿ ಮಂತ್ರಿ ರೇಣುಕಾಚಾರ್ಯ ಅವರು ಎಂದಿನಂತೆ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗುತ್ತೇವೆ. ಅವರು ಬಿಜೆಪಿಗೆ ವಾಪಸಾಗುವುದಾದರೆ ನಾವೂ ಅವರನ್ನು ಹಿಂಬಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿ ಅವರು ಸಹ ಯಡಿಯೂರಪ್ಪ ನಿವಾಸದಲ್ಲಿ ಇಂದು ಕಾಣಿಸಿಕೊಂಡರು.
ಮೌನಂ ಸಮ್ಮತಿ ಲಕ್ಷಣಂ: ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎನ್ನುವ ಹಾಗಾದರೆ ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷವನ್ನು (KJP) ಮುಂದುವರಿಸುವುದು ಅನುಮಾನ. ಇದೇ ವೇಳೆ ಯಡಿಯೂರಪ್ಪ ಬಿಜೆಪಿಗೆ ಮರಳಿದರೆ ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಪಕ್ಷಕ್ಕೆ ಅಗತ್ಯವಿರುವ ಟಾನಿಕ್ ಅನ್ನು ತುಂಬಿದಂತಾಗುತ್ತದೆ.












Click it and Unblock the Notifications